ಕ್ರಿಕೆಟ್ ಕಮೆಂಟ್ರಿ ನೀಡುವಾಗ ವಿದ್ಯುತ್ ಪ್ರವಹಿಸಿ ಯುವಕ ಸಾವಿಗೀಡಾಗಿದ್ದಾನೆ. ಮೈಕ್ ನಲ್ಲಿ ವಿದ್ಯುತ್ ಪ್ರವಹಿಸಿ ಈ ದುರಂತವಾಗಿದೆ. 

ನೆಲಮಂಗಲ [ಜು.1]: ಕ್ರಿಕೆಟ್‌ ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ಮೈಕ್‌ನಲ್ಲಿ ನೀಡುತ್ತಿದ್ದ ಯುವಕನೊಬ್ಬ, ಮೈಕ್‌ ಮೂಲಕ ವಿದ್ಯುತ್‌ ಪ್ರವಹಿಸಿದ ಹಿನ್ನೆಲೆ ಮೃತಪಟ್ಟಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಂಚೇನಹಳ್ಳಿಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಕೊಟ್ಟನಹಳ್ಳಿ ಗ್ರಾಮದ ನಿವಾಸಿ ಕಿರಣ್‌(22) ಮೃತಪಟ್ಟವರು. ಭಾನುವಾರ ರಜೆ ಇದ್ದ ಕಾರಣ ಯುವಕರೆಲ್ಲ ಸೇರಿ ಕ್ರಿಕೆಟ್‌ ಆಡುತ್ತಿದ್ದರು. ಈ ಸಂದರ್ಭದಲ್ಲಿ ಆಟಗಾರರನ್ನು ಹುರಿದುಂಬಿಸುತ್ತಾ ಹೊಡೆದ ಬಾಲು ಹಾಗೂ ರನ್‌ ಮತ್ತು ಆಟಗಾರರ ಆಟದ ವೈಖರಿಯನ್ನು ಕಿರಣ್‌ ಮೈಕ್‌ ಮೂಲಕ ವಿವರಿಸುತ್ತಿದ್ದರು. 

ಈ ಸಂದರ್ಭದಲ್ಲಿ ಆಕಸ್ಮಾತ್ತಾಗಿ ಮೈಕ್‌ನಲ್ಲಿ ವಿದ್ಯುತ್‌ ಪ್ರವಹಿಸಿ ಅವಘಡ ಸಂಭವಿಸಿದೆ. ಅಲ್ಲಿದ್ದವರು ಘಟನೆ ಕಂಡು ವಿಚಲಿತರಾದರು. ತಕ್ಷಣ ನೆಲಮಂಗಲದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನದಲ್ಲಿರುವಾಗಲೇ ಮಾರ್ಗ ಮಧ್ಯದಲ್ಲಿಯೇ ಕಿರಣ್‌ ಕೊನೆಯುಸಿರೆಳೆದರು ಎನ್ನಲಾಗಿದೆ.

ನೆಲಮಂಗಲ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.