ನಿಯಮಿತವಾಗಿ ಯೋಗ, ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ಮಿದುಳನ್ನು ಸುಸ್ಥಿತಿಯಲ್ಲಿಡುವ ಜತೆಗೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಂಡು ಸಕಾರಾತ್ಮಕ ಚಿಂತನೆಯಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತದೆ ಎಂದು ವಿಸ್ಡಂ ಶಾಲೆಯ ಸಂಸ್ಥಾಪಕ ಮಂಜುನಾಥ್ ಸೋಮಶೇಖರ್ ಹೇಳಿದರು.

 ನಂಜನಗೂಡು : ನಿಯಮಿತವಾಗಿ ಯೋಗ, ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ಮಿದುಳನ್ನು ಸುಸ್ಥಿತಿಯಲ್ಲಿಡುವ ಜತೆಗೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಂಡು ಸಕಾರಾತ್ಮಕ ಚಿಂತನೆಯಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತದೆ ಎಂದು ವಿಸ್ಡಂ ಶಾಲೆಯ ಸಂಸ್ಥಾಪಕ ಮಂಜುನಾಥ್ ಸೋಮಶೇಖರ್ ಹೇಳಿದರು.

Add Asianetnews Kannada as a Preferred SourcegooglePreferred

ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಯೋಗ ಮಹಾಮನೆಯಲ್ಲಿ ನಡೆದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ 15ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಇಡೀ ಜೀವನವನ್ನು ಸನ್ಮಾರ್ಗದತ್ತ ತೆಗೆದುಕೊಂಡು ಹೋಗುವ ಶಕ್ತಿ ನಮ್ಮ ಮಿದುಳಿಗಿದೆ. ಆದರೆ, ಎಷ್ಟೋ ನರಕೋಶಗಳು ಜೀವಂತಿಕೆ ಕಳೆದುಕೊಂಡು ಮಿದುಳಿನಲ್ಲಿ ಆಶ್ರಯ ಪಡೆದುಕೊಳ್ಳುತ್ತವೆ. ಇದರಿಂದ ಜ್ಞಾಪಕ ಶಕ್ತಿ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಮಾತ್ರವಲ್ಲದೇ, ನಮ್ಮಲ್ಲಿ ನಕರಾತ್ಮಕ ಧೋರಣೆ ಹೆಚ್ಚಾಗಿ ಜೀವನದಲ್ಲಿ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯವಾಗದೇ ಇರಬಹುದು. ಹಾಗಾಗಿ ಮಿದುಳನ್ನು ಚುರುಕುಗೊಳಿಸಿ ಸಕಾರಾತ್ಮಕ ಕಂಪನಗಳು ಮೇಳೈಸಬೇಕಾದರೆ ಯೋಗ, ಧ್ಯಾನ, ಪ್ರಾಣಾಯಾಮ ಅತ್ಯಂತ ಸಹಾಯಕಾರಿ. ಮಕ್ಕಳಲ್ಲಿ ಕೇವಲ ಆಸನಾಭ್ಯಾಸಕ್ಕೆ ಯೋಗ ಸೀಮಿತಗೊಳಿಸದೇ ಧ್ಯಾನ, ಆಧ್ಯಾತ್ಮವನ್ನು ಬಿತ್ತುವ ಕೆಲಸ ಶಿಕ್ಷಣದ ಭಾಗವಾಗಬೇಕು ಎಂದು ಹೇಳಿದರು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಜು ಎಚ್. ಕೆಬ್ಬೇಪುರ, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಕಾರ್ಯದರ್ಶಿ ಎನ್.ಆರ್. ಗಣೇಶ್ಮೂರ್ತಿ ಮಾತನಾಡಿದರು.

10 ಸರ್ಕಾರಿ ಶಾಲೆಯಿಂದ 50 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಗಾಯಕ ಸ್ವರೂಪ್ ರಮೇಶ್ ದೇವರ ನಾಮ ಗೀತೆಗಳನ್ನು ಪ್ರಸ್ತುತಪಡಿಸಿದರು.

ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ. ರೇವಣ್ಣ, ಕಾರ್ಯದರ್ಶಿ ಎನ್.ಆರ್. ಗಣೇಶ್ ಮೂರ್ತಿ, ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ. ಉಡಿಗಾಲ, ನಂಜನಗೂಡು ಯೋಗ ಫೌಂಡೇಶನ್ ಅಧ್ಯಕ್ಷ ಪ್ರಕಾಶ್ ಇದ್ದರು.