10 ತಿಂಗಳಿಂದ ಸಂಬಳವಿಲ್ಲದೇ ದುಡಿಯುತ್ತಿರುವ ಕೊರೋನಾ ವಾರಿಯರ್ಸ್..!
ಆಸ್ಪತ್ರೆಯಲ್ಲಿ 10 ತಿಂಗಳಿಂದ ಸಂಬಳವಿಲ್ಲದೇ ದುಡಿಯುತ್ತಿರುವ ದಿನಗೂಲಿಗಳು| ಸ್ವಚ್ಚತಾ ಕಾರ್ಯಕ್ಕಾಗಿ ಹೊರಗುತ್ತಿಗೆ ಆಧಾರದಲ್ಲಿ 25ಕ್ಕೂ ಹೆಚ್ಚು ಮಂದಿ ಕರ್ತವ್ಯ| ಸಕಾಲಕ್ಕೆ ವೇತನವಿಲ್ಲದೇ ದಿನಗೂಲಿಗಳ ಪರದಾಟ|ಸಮಸ್ಯೆ ಪರಿಹಾರಕ್ಕೆ ಒತ್ತಾಯ|
ಜಿ.ಎಚ್. ರಾಜು ಹೊನ್ನಾಳಿ
ಹೊನ್ನಾಳಿ(ಏ.22): ಕೊರೊನಾ ಮಹಾಮಾರಿ ನಿಯಂತ್ರಣದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವವರಿಗೆ ಇಡೀ ದೇಶವೇ ಚಪ್ಪಾಳೆ ತಟ್ಟಿ ಅಭಿನಂದಿಸುತ್ತಿದೆ. ಆದರೆ, ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 10 ತಿಂಗಳುಗಳಿಂದ ವೇತನವಿಲ್ಲದೇ ದುಡಿಯುತ್ತಿರುವ ದಿನಗೂಲಿ ನೌಕರರನ್ನು ಸಂಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ.
ಆಸ್ಪತ್ರೆ ದಿನಗೂಲಿ ನೌಕರರಿಗೆ ಸಕಾಲಕ್ಕೆ ವೇತನಲ್ಲದೆ ಇಲ್ಲಿನ ಸಿಬ್ಬಂದಿ ಪರಾದಾಡುತ್ತಿದ್ದಾರೆ. ಆವರ ಗೋಳು ಕೇಳುವವರೇ, ಇಲ್ಲದಂತಾಗಿದೆ. ಪಟ್ಟಣದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ 25ಕ್ಕೂ ಹೆಚ್ಚು ಯುವಕ -ಯುವತಿಯರು ಕೆಲಸ ಮಾಡುತ್ತಿದ್ದಾರೆ. ಮೊದಮೊದಲು 2-3 ತಿಂಗಳಿಗೆ ಸಂಬಳ ಬರುತ್ತಿತ್ತು. ತದನಂತರದಲ್ಲಿ 10 ತಿಂಗಳಿಂದ ಈವರೆಗೂ ಸಕಾಲಕ್ಕೆ ಸಂಬಳವಾಗಿಲ್ಲ. ಐದಾರು ತಿಂಗಳಿಂದ ಸಂಬಳ ನೀಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂಬುದು ಆಸ್ಪತ್ರೆ ದಿನಗೂಲಿ ನೌಕರರ ಅಳಲಾಗಿದೆ. ಸ್ಥಳೀಯ ಶಾಸಕರ ಜೊತೆ ಚರ್ಚಿಸಿದಾಗ, ಬೇಡಿಕೆ ಶೀಘ್ರವೇ ಈಡೇರಿಸುವುದಾಗಿ ತಿಳಿಸಿದ್ದರು. ಆದರೆ ಭರವಸೆ ಈಡೇರಿಲ್ಲ. ಈ ಬಗ್ಗೆ ಸಂಬಂಧಪಟ್ಟಗುತ್ತಿಗೆದಾರರೊಂದಿಗೆ ಮಾತನಾಡಿದ್ದು, ವೇತನ ಪಾವತಿಸುವುದಾಗಿ ಸಬೂಬು ಹೇಳುತ್ತಾರೆ. ಈ ಬಗ್ಗೆ ಏರುದ್ವನಿಯಲ್ಲಿ ಕೆಲಸಗಾರರು ಮಾತನಾಡಿದರೆ, ಕೆಲಸದಿಂದ ಕಿತ್ತು ಹಾಕುವುದಾಗಿ, ಪಿಎಫ್, ಇಎಸ್ಐ ಕೊಡುವುದಿಲ್ಲ ಎಂದು ಗುತ್ತಿಗೆದಾರರು ಎದುರಿಸುತ್ತಾರೆ ಎಂದು ಹೆಸರು ಹೇಳಲು ಇಚ್ಚಿಸದ ದಿನಗೂಲಿ ನೌಕರರು ತಮ್ಮ ನೋವು ತೋಡಿಕೊಂಡರು.
ಕೊರೋನಾ ವಾರಿಯರ್ಸ್ ಕುಟುಂಬಸ್ಥರ ಜೊತೆ ಕಮಿಷನರ್ ವಿಡಿಯೊ ಕಾನ್ಫರೆನ್ಸ್
ತಿಂಗಳಿಗೆ 3 ಲಕ್ಷ:
ಪ್ರತಿ ತಿಂಗಳು 23 ದಿನಗೂಲಿ ನೌಕರರಿಗೆ ಸಂಬಳ ನೀಡಲು 3 ಲಕ್ಷ ಅನುದಾನ ಬೇಕು. 10 ತಿಂಗಳು ಸಂಬಳ ಕನಿಷ್ಠ 30 ಲಕ್ಷ ನೀಡಬೇಕಾದ ಶ್ರೀಲಕ್ಷ್ಮೀವೆಂಕಟೇಶ್ವರ ಎಂಟರ್ಪ್ರೈಸಸ್ ಗುತ್ತಿಗೆದಾರ ದೂರದ ಊರಿನಲ್ಲಿ ತಮ್ಮ ಕಷ್ಟ ಗೊತ್ತಿದ್ದರೂ, ಲಾಕ್ಡೌನ್ ನೆಪದಲ್ಲಿ ಮನೆಯಲ್ಲಿ ಕೂಳಿತಿದ್ದಾನೆ. ಇತ್ತ ದಿನಗೂಲಿ ನೌಕರರು ಸಂಬಳವಿಲ್ಲದೇ ಕುಟುಂಬ ನಿರ್ವಹಣೆಗೆ ಪರದಾಡುವ ಪರಿಸ್ಥಿತಿಯಿದೆ.
ತಲೆಕೆಡಿಸಿಕೊಳ್ಳದ ಆಡಳಿತಾಧಿಕಾರಿ
ನೂರು ಹಾಸಿಗೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಚಂದ್ರಪ್ಪ ಈ ಅವ್ಯವಸ್ಥೆಗೆ ಕಾರಣ ಎನ್ನಲಾಗಿದೆ. ‘ಡಿ’ ಗ್ರೂಪ್ ದಿನಗೂಲಿ ನೌಕರರಿಂದ ಆಸ್ಪತ್ರೆ ಸ್ವಚ್ಚತಾ ಕಾರ್ಯಗಳನ್ನು ಮಾಡಿಸಿಕೊಂಡು, ಅವರ ಸಂಬಳದ ಕೊಡಿಸುವ ಜವಾಬ್ದಾರಿ ಈ ಅಧಿಕಾರಿಮೇಲಿರುತ್ತದೆ. ಇವರು ಗುತ್ತಿಗೆದಾರರ ಜೊತೆ ಶಾಮಿಲಾಗಿದ್ದಾರೆ ಎಂಬ ಕೂಗು ಕೇಳಿಬರುತ್ತಿದೆ.
ಸಂಬಳ ಬಗ್ಗೆ ಈಗಾಗಲೇ ಗುತ್ತಿಗೆದಾರರೊಂದಿಗೆ ಮಾತನಾಡಿದ್ದು, ಲಾಕ್ಡೌನ್ ಆದೇಶ ಮುಗಿದನಂತರ ಗುತ್ತಿಗೆದಾರರನ್ನು ಕರೆಸಿ ಮಾತನಾಡುತ್ತೇನೆ. ನವೆಂಬರ್ನಿಂದ ಇಲ್ಲಿಯವರೆಗೆ ಸಂಬಳ ನಮ್ಮಲ್ಲಿಯೇ ಇದೆ. ಕೂಡಲೇ ಸಮಸ್ಯೆ ಬಗೆಹರಿಸುತ್ತೇನೆ ಎಂದು ಆಡಳಿತಾಧಿಕಾರಿ ಡಾ.ಚಂದ್ರಪ್ಪ ಅವರು ಹೇಳಿದ್ದಾರೆ.