ದಿನಂಪ್ರತಿ ಸಾಕಷ್ಟು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಟಂಟಂಗಳು ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಆರಂಭವಾದಾಗಿನಿಂದಲೂ ಬಸ್‌ ನಿಲ್ದಾಣದ ಮಂಭಾಗದಲ್ಲಿ ಖಾಲಿ ಖಾಲಿ. 

ರಬಕವಿ-ಬನಹಟ್ಟಿ(ಜೂ.20):  ಶಕ್ತಿ ಯೋಜನೆ ಆರಂಭವಾದಾಗಿನಿಂದ ಬಸ್‌ಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದಾರೆ. ಪುರುಷರಿಂದ ಹೆಚ್ಚು ತುಂಬಿರುತ್ತಿದ್ದ ಬಸ್‌ ನಿಲ್ದಾಣಗಳಲ್ಲಿ ಈಗ ಮಹಿಳೆಯರೇ ತುಂಬಿ ತುಳುಕುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಯಾಣಿಕರು ಬಸ್‌ಗಳಲ್ಲಿ ಸಂಚಾರಕ್ಕೆ ಹರಸಾಹಸ ಪಡಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಲವರಂತೂ ಬಾಗಿಲಿನಿಂದ ಹತ್ತುವ ಬದಲಾಗಿ ಕಿಟಕಿಗಳಲ್ಲಿಯೇ ನುಸುಳುತ್ತಿರುವುದು ವಿಶೇಷ. ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ನಿಯಂತ್ರಣ ಮಾಡಲು ಪುರುಷ ಮತ್ತು ಮಹಿಳಾ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬಸ್‌ ಚಾಲಕ ಮತ್ತು ನಿರ್ವಾಹಕರು ಮಾಡಬೇಕಾದ ಕಾರ್ಯವನ್ನು ಗೃಹ ರಕ್ಷಕ ಸಿಬ್ಬಂದಿ ವರ್ಗದವರು ಕೆಳಗಡೆ ನಿಂತು ಮಾಡುತ್ತಿರುವುದು ಸಾಮಾನ್ಯವಾಗಿದೆ.

ಬಡವರ ಅನ್ನಕ್ಕೆ ಕೇಂದ್ರ ಸರ್ಕಾರದಿಂದ ಅಡ್ಡಗಾಲು: ಸಚಿವ ತಿಮ್ಮಾಪುರ

ಪುರುಷರು ದೂರ:

ಮಹಿಳಾ ಮಣಿಗಳ ಶರವೇಗದ ಪ್ರವೇಶದಿಂದ ಪುರುಷ ಮಹಾಶಯರು ಖಾಸಗಿ ವಾಹನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಸಮೀಪದ ಜಮಖಂಡಿ, ಮುಧೋಳ, ಮಹಾಲಿಂಗಪೂರ, ತೇರದಾಳ ಸೇರಿದಂತೆ ಇತರೆಡೆ ತೆರಳಬೇಕಾದರೆ ಪುರುಷರು ಬಸ್‌ ನಿಲ್ದಾಣಕ್ಕೆ ಬಾರದೇ ಹೊರಗಿರುವ ಖಾಸಗಿ ವಾಹನಗಳನ್ನೇ ಅವಲಂಬಿಸೇಕಾದ ಪರಿಸ್ಥಿತಿಯಿದೆ.

ಟಂಟಂಗಳು ಖಾಲಿ ಖಾಲಿ:

ದಿನಂಪ್ರತಿ ಸಾಕಷ್ಟು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಟಂಟಂಗಳು ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಆರಂಭವಾದಾಗಿನಿಂದಲೂ ಬಸ್‌ ನಿಲ್ದಾಣದ ಮಂಭಾಗದಲ್ಲಿ ಖಾಲಿ ಖಾಲಿಯಾಗಿರುವುದು ಕಂಡು ಬರುತ್ತಿದೆ.