ವರದಕ್ಷಿಣೆ ಕಿರುಕುಳ: ಮಹಿಳೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ದುರುಳರು
ಮಹಿಳೆ ಕೊಲೆ: 6 ಜನರ ವಿರುದ್ಧ ದೂರು| ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಗ್ರಾಮದಲ್ಲಿ ನಡೆದ ಘಟನೆ| ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೃತಳ ತಂದೆ ಸಂಗನಗೌಡ ಕರಿಗೌಡ ಗೌಡರ|
ಕುಷ್ಟಗಿ(ಏ.17): ತಾಲೂಕಿನ ಹಿರೇನಂದಿಹಾಳ ಗ್ರಾಮದ ಮಹಿಳೆಯೊಬ್ಬರ ಮೇಲೆ ಸೀಮೆ ಎಣ್ಣೆ ಹಾಕಿ ಸುಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಮೃತಳ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಂಬಂಧಿಕರ 6 ಜನರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ನಿಂಗಮ್ಮ ಚಂದಪ್ಪ ಸಂಗನಾಳ (20) ಎನ್ನುವ ಮಹಿಳೆಯನ್ನು ಆಕೆಯ ಪತಿ ಚಂದಪ್ಪ ಬಸವರಾಜ ಸಂಗನಾಳ ಸೇರಿದಂತೆ ಇತರೆ 5 ಜನರು ಸೇರಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ, ನನ್ನ ಮಗಳಿಗೆ ಹೆಚ್ಚಿನ 50,000 ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಸುದ್ದಿ ತಿಳಿದ ನಾನು ನನ್ನ ಮಗಳ ಗಂಡನ ಊರಿಗೆ ತೆರಳಿ ಈ ಕುರಿತು ಹಿರಿಯ ಸಮಕ್ಷಮ ಬುದ್ಧಿವಾದ ಹೇಳಿದ್ದರೂ ಆರೋಪಿಗಳು ನನ್ನ ಮಗಳಿಗೆ ವರದಕ್ಷಣೆ ಕಿರುಕುಳ ನೀಡಿದ್ದು ಅಲ್ಲದೆ ಮಗಳಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಮೃತಳ ತಂದೆ ಸಂಗನಗೌಡ ಕರಿಗೌಡ ಗೌಡರ ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಮಹಿಳೆಯ ಮೈದುನನ ರುಂಡ ತುಂಡರಿಸಿದ ಕೀಚಕ...!
ಇನ್ನು ಘಟನೆಗೆ ಸಂಬಂಧಿಸಿದಂತೆ ಗಂಗಾವತಿ ವೃತ್ತದ ಡಿಎಸ್ಪಿ ಚಂದ್ರಶೇಖರ ಬಿಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಪಿಐ ಚಂದ್ರಶೇಖರ ಜಿ, ಪಿಎಸ್ಐ ಚಿತ್ತರಂಜನ್ ಡಿ, ಎಸ್ಐ ಈರಪ್ಪ ನಾಯಕ ಸೇರಿದಂತೆ ಇತರರು ಇದ್ದರು.