ವಂಚಿಸಿ ವಿವಾಹವಾಗಿ ಕುವೈಟ್ನಲ್ಲಿ ಕಳೆದ 6 ವರ್ಷದಿಂದ ಗೃಹಬಂಧನ ಮಂಗಳೂರು ಮೂಲದ ಮಹಿಳೆಯೊಬ್ಬರು ತನ್ನ ಪತಿಯಿಂದ ನ್ಯಾಯಕ್ಕೆ ಬೆಂಗಳೂರಿನ ಪೊಲೀಸ್ ಠಾಣೆ ಮೊರೆ
ಮಂಗಳೂರು (ಆ.14): ವಂಚಿಸಿ ವಿವಾಹವಾಗಿ ಕುವೈಟ್ನಲ್ಲಿ ಕಳೆದ 6 ವರ್ಷದಿಂದ ಗೃಹಬಂಧನದಲ್ಲಿರುವ ಮಂಗಳೂರು ಮೂಲದ ಮಹಿಳೆಯೊಬ್ಬರು ತನ್ನ ಪತಿಯಿಂದ ನ್ಯಾಯಕ್ಕೆ ಬೆಂಗಳೂರಿನ ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ.
ಎರಡು ವಿವಾಹವಾಗಿ ವಿಚ್ಛೇದನ ಪಡೆದು ಮತ್ತೆ ಮೂರನೇ ವಿವಾಹವಾಗಿ ಇಬ್ಬರು ಪತ್ನಿಯರ ಜೊತೆ ಕುವೈಟ್ನಲ್ಲಿ ಕದ್ದುಮುಚ್ಚಿ ಜೀವನ ನಡೆಸುತ್ತಿರುವ ಪತಿರಾಯನ ಕಣ್ಣಾಮುಚ್ಚಾಲೆ ಈಗ ಬಹಿರಂಗವಾಗಿದೆ. ಈಗ ಮೊದಲ ಪತ್ನಿ ಹಾಗೂ ಮಗನ ಜೊತೆ ಪತಿ ದೀಪಕ್ ರವೀಂದ್ರನಾಥ್ ಎಂಬಾತ ಬೆಂಗಳೂರಿನಲ್ಲಿ ಇದ್ದಾರೆ. ಮೊದಲ ಪತ್ನಿ ಹಾಗೂ ಮಗನ ಜೊತೆ ಕುವೈಟ್ಗೆ ಮತ್ತೆ ತೆರಳಲು ಸಿದ್ಧತೆ ನಡೆಸಿರುವಂತೆಯೇ ಕುವೈಟ್ನಲ್ಲಿ ಗೃಹಬಂಧನದಲ್ಲಿ ಇರುವ 3ನೇ ಪತ್ನಿ ಈಗ ನ್ಯಾಯಕ್ಕಾಗಿ ತಾಯ್ನಾಡಿನಲ್ಲಿ ಪೊಲೀಸ್ ಇಲಾಖೆಯ ಕದತಟ್ಟಲು ನಿರ್ಧರಿಸಿದ್ದಾರೆ.
ಸೆಕ್ಸ್ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ : ಯುವಕ ಆತ್ಮಹತ್ಯೆ
ಏನಿದು ಘಟನೆ?: ಕುವೈಟ್ನಲ್ಲಿ ಎಂಜಿನಿಯರ್ ಆಗಿರುವ ಬೆಂಗಳೂರು ಮೂಲದ ದೀಪಕ್ ರವೀಂದ್ರನಾಥ್ ಎಂಬಾತ 2011ರಲ್ಲಿ ತಾನು ಅವಿವಾಹಿತ ಎಂದು ವೈವಾಹಿಕ ವೆಬ್ಸೈಟ್ನಲ್ಲಿ ಜಾಹಿರಾತು ನೀಡಿದ್ದರು. ಅದನ್ನು ನಂಬಿದ ಮಂಗಳೂರಿನ ಯುವತಿ ವಿವಾಹ ಪ್ರಸ್ತಾಪವಿಟ್ಟಿದ್ದಳು. 2013 ಜೂ.17ರಂದು ಮಂಗಳೂರಿನಲ್ಲೇ ಇಬ್ಬರೂ ವಿವಾಹವಾಗಿ ನೋಂದಣಿ ಮಾಡಿಕೊಂಡಿದ್ದರು. ನಂತರ ಇಬ್ಬರೂ ಬೆಂಗಳೂರಿಗೆ ತೆರಳಿ ಅಲ್ಲಿ ಕೆಲವು ದಿನ ಇದ್ದರು. ಬಳಿಕ ದೀಪಕ್ ಕುವೈಟ್ಗೆ ತೆರಳಿದ್ದ. ಕುವೈಟ್ಗೆ ತೆರಳಿದರೂ ಈಕೆಯನ್ನು ಕರೆಸಿಕೊಂಡಿರಲಿಲ್ಲ. ನಾನಾ ಸಬೂಬು ಹೇಳಿ ದೀಪಕ್ ದಿನಗಳೆಯುತ್ತಿದ್ದ. ಇದರಿಂದ ಸಂಶಯಗೊಂಡ ವಿವಾಹಿತೆ, ಮಂಗಳೂರಿನ ಕೋರ್ಟ್ ಮೂಲಕ ಆದೇಶ ಹೊರಡಿಸಿದ್ದಳು. ನಿರುಪಾಯನಾದ ಪತಿ ದೀಪಕ್ 2016ರಲ್ಲಿ ಆಕೆಯನ್ನು ಕುವೈಟ್ಗೆ ಕರೆಸಿಕೊಂಡಿದ್ದ.
ಕುವೈಟ್ಗೆ ತೆರಳಿದಾಗ ಅಲ್ಲಿ ಪತಿ ದೀಪಕ್ ಮೊದಲೇ ವಿವಾಹವಾಗಿರುವುದು ಬೆಳಕಿಗೆ ಬಂದಿತ್ತು. ಈಕೆಗೆ ಪ್ರತ್ಯೇಕ ಮನೆ ಮಾಡಿಕೊಟ್ಟಿದ್ದ. ಸ್ವಲ್ಪ ದಿನ ಮನೆಗೆ ಬರುತ್ತಿದ್ದ ದೀಪಕ್ ನಂತರ ಬರುವುದನ್ನೇ ಬಿಟ್ಟಿದ್ದ. ಈಕೆ ತಗಾದೆ ತೆಗೆದಾಗ ಆಗಾಗ ಬಂದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ತೆರಳುತ್ತಿದ್ದ. ಇದರಿಂದ ನೊಂದ ವಿವಾಹಿತೆ ಅಲ್ಲಿನ ರಾಯಭಾರ ಕಚೇರಿಗೆ ದೂರು ನೀಡಿದ್ದರು. ರಾಯಭಾರ ಕಚೇರಿ ಕರೆಸಿ ವಿಚಾರಿಸಿದಾಗ ಆತ ಆಗಲೇ ಎರಡು ವಿವಾಹ ಆಗಿರುವುದು ಗೊತ್ತಾಗಿತ್ತು. ಈಕೆಗೆ ಸೂಕ್ತ ವಸತಿ, ಆಹಾರ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿತ್ತು.
ಮೊದಲ ಪತ್ನಿಗೆ ವಿಚ್ಛೇದನ ನೀಡಿ ಬಳಿಕ ರಾಜಿ ಮಾಡಿಕೊಂಡಿದ್ದ. ಆಕೆಯಲ್ಲಿ ಓರ್ವ ಮಗ ಇದ್ದಾನೆ. ಎರಡನೇ ವಿವಾಹವಾಗಿ ಆಕೆಗೂ ಡೈವೋರ್ಸ್ ನೀಡಿದ್ದ. ನಂತರ ಈಕೆಯನ್ನು 3ನೇ ವಿವಾಹವಾಗಿದ್ದ. ಮೊದಲ ಪತ್ನಿಗೆ ಗೊತ್ತಾಗಬಾರದು ಹಾಗೂ ಈಕೆಗೂ ಮೊದಲ ಪತ್ನಿಯ ಬಗ್ಗೆ ತಿಳಿಯಬಾರದು ಎಂದು ಸುಮಾರು 6 ವರ್ಷ ಕಾಲ ಅಲ್ಲಿಯೇ ಒಂಟಿಯಾಗಿ ಗೃಹಬಂಧನದಲ್ಲಿ ಇರಿಸಿದ್ದ ಎನ್ನುತ್ತಾರೆ ಸಂತ್ರಸ್ತ ಮಹಿಳೆ.
ಮಾರ್ಚಲ್ಲಿ ಲಾಕ್ಡೌನ್ ವೇಳೆ ಆತ ಮೊದಲ ಪತ್ನಿ ಹಾಗೂ ಮಗನ ಜೊತೆ ಬೆಂಗಳೂರಿಗೆ ತೆರಳಿದ್ದ. ಈ ನಡುವೆ ಕುವೈಟ್ನಲ್ಲಿ ಇರುವ 3ನೇ ಪತ್ನಿಗೆ ಮನೆ ಬಾಡಿಗೆ, ಆಹಾರಕ್ಕೆ ವ್ಯವಸ್ಥೆ ಕಲ್ಪಿಸದೆ ಅಸಡ್ಡೆಯಿಂದ ವರ್ತಿಸುತ್ತಿದ್ದ. ಈ ವಿಚಾರವನ್ನು ಈಕೆ ಬೆಂಗಳೂರಿನಲ್ಲಿ ಇರುವ ತನ್ನ ಸ್ನೇಹಿತೆಗೆ ತಿಳಿಸಿದ್ದಳು. ಆಕೆ ಕುವೈಟ್ನ ಅನಿವಾಸಿ ಭಾರತೀಯ ಮೋಹನದಾಸ ಪ್ರಭು ಎಂಬವರ ನೆರವು ಪಡೆಯುವಂತೆ ಸೂಚಿಸಿದ್ದಳು. ಇದೀಗ ನ್ಯಾಯ ದೊರಕಿಸಿಕೊಡುವಂತೆ ಸ್ನೇಹಿತೆಯ ನೆರವಿನಲ್ಲಿ ಕರ್ನಾಟಕ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ದೀಪಕ್ ರವಿಂದ್ರನಾಥ್ ವಿರುದ್ಧ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರಿಗೆ ಶುಕ್ರವಾರ ದೂರು ನೀಡಿದ್ದಾರೆ.
