ಭದ್ರಾವತಿ ತಾಲೂಕಿನ ಲಕ್ಕಿನಕೊಪ್ಪ  ಸುತ್ತಮುತ್ತ ಕಾಡಾನೆಗಳ ಹಾವಳಿ ರೈತರ ತೋಟಕ್ಕೆ  ನುಗ್ಗಿ ಬೆಳೆಗಳನ್ನು  ನಾಶಪಡಿಸುತ್ತಿರುವ ಕಾಡಾನೆಗಳು ಕಳೆದ ಮೂರು ತಿಂಗಳಿನಿಂದಲೂ ಈ ಭಾಗದಲ್ಲಿ ವಿಪರೀತ ಹಾವಳಿ

 ಶಿವಮೊಗ್ಗ (ಜೂ.28): ಭದ್ರಾವತಿ ತಾಲೂಕಿನ ಲಕ್ಕಿನಕೊಪ್ಪ ಸುತ್ತಮುತ್ತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಇಲ್ಲಿನ ರೈತರ ತೋಟಕ್ಕೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭದ್ರಾ ಅಭಯಾರಣ್ಯದಿಂದ ಮಾರೀದೀಪ ಉಂಬ್ಳೆಬೈಲು ಮೂಲಕ ಲಕ್ಕಿನಕೊಪ್ಪ, ಕಾಚಿನಕಟ್ಟೆ ಸೇರಿದಂತೆ ಸುತ್ತಮುತ್ತ ಪ್ರದೇಶಗಳಿಗೆ ಕಾಡಾನೆಗಳು ಬಂದು ಬೆಳೆಗಳನ್ನು ನಾಶಪಡಿಸುವ ಮೂಲಕ ರೈತರಿಗೆ ತೊಂದರೆ ನೀಡುತ್ತಿವೆ. 

ಹಾಸನದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ : ಒಂಟಿ ಸಲಗ ಸೆರೆ .

ಕೆಲ ದಿನಗಳ ಹಿಂದೆ ಅರಣ್ಯಾಧಿಕಾರಿಗಳು ಸಕ್ರೆಬೈಲಿನ ಆನೆಗಳ ಸಹಾಯದಿಂದ ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಅಟ್ಟಿದ್ದರು. ಮತ್ತೆ ವಾಪಸ್ ಇದೇ ದಾರಿಯಲ್ಲಿ ಕಾಡಾನೆಗಳು ಬರಲಾರವು ಎಂದು ತಜ್ಞರು ತಿಳಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಕಾಡಾನೆಗಳು ಮತ್ತೆ ಈ ಭಾಗದಲ್ಲಿ ಪ್ರತ್ಯಕ್ಷವಾಗಿವೆ. 

ಈಗಾಗಲೇ ಸುಮಾರು ಪ್ರದೇಶದಲ್ಲಿ ಬೆಳೆಗಳನ್ನು ಹಾಳು ಮಾಡಿರುವ ಕಾಡಾನೆಗಳು ದಿನಕ್ಕೊಬ್ಬರ ತೋಟಕ್ಕೆ ನುಗ್ಗಿ ಬೆಳೆಗಳನ್ನು ತಿಂದು ತೇಗುತ್ತಿವೆ. 

ಇಲ್ಲಿನ ಗೋಣಿಬೀಡಿನಲ್ಲಿ ಗುರುವಾರ ನಾಲ್ಕು ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ರಸ್ತೆಯ ಅಂಚಿಗೆ ಬಂದಿದ್ದ ಕಾಡಾನೆಗಳನ್ನು ಜನರೇ ಅರಣ್ಯ ಸಿಬ್ಬಂದಿ ನೆರವಿನೊಂದಿಗೆ ಪಟಾಕಿಗಳ ಸಿಡಿಸಿ ಹಿಮ್ಮೆಟ್ಟಿಸಿದ್ದರು. 

ಎಂಥಾ ಹಸಿವು..! ಅಡು​ಗೆ​ಕೋ​ಣೆಯ ಗೋಡೆ ಒಡೆದು ಆಹಾರ ತಿಂದ ಆನೆ .

ಆದರೆ ಕಾಡಿಗೆ ವಾಪಸ್ ತೆರಳದ ಕಾಡಾನೆಗಳು ಮತ್ತೆ ತೋಟಗಳಿಗೆ ನುಗ್ಗಿ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆ ಹಾಳು ಮಾಡಿವೆ. 

ಕಳೆದ ಮೂರು ತಿಂಗಳಿನಿಂದಲೂ ಈ ಭಾಗದಲ್ಲಿ ವಿಪರೀತ ತೊಂದರೆ ನೀಡುತ್ತಿರುವ ಕಾಡಾನೆಗಳ ಬಗ್ಗೆ ಅರಣ್ಯ ಇಲಾಖೆ ದಿಟ್ಟ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.