ರಾಜ್ಯಕ್ಕೆ ಟಿಪ್ಪು ಸುಲ್ತಾನ್‌ ಕೊಡುಗೆ ಏನು? ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿಕೆ

ಗದಗ (ನ.13) : ರಾಜ್ಯಕ್ಕೆ ಟಿಪ್ಪು ಸುಲ್ತಾನರ ಕೊಡುಗೆ ಏನಿದೆ ಎಂದು ಎಲ್ಲರಿಗೂ ಗೊತ್ತಿದೆ. ಯಾವ ಕಾರಣಕ್ಕೆ ಅವರ ಪ್ರತಿಮೆ ಸ್ಥಾಪಿಸುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ಶನಿವಾರ ನಗರದಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮೂರ್ತಿ ಪ್ರತಿಷ್ಠಾಪನೆ ಮಾಡಲಿಕ್ಕೆ ಹಲವಾರು ನಿಯಮಗಳಿವೆ ಅದನ್ನು ಗಮನಿಸಬೇಕು. ನಾಡಪ್ರಭು ಕೆಂಪೇಗೌಡ ಅವರ ಮೂರ್ತಿ ಮಾಡಿದ್ದೀವಿ ಅಂತಾ ಟಿಪ್ಪು ಮೂರ್ತಿ ಮಾಡುತ್ತೇವೆ ಎನ್ನುವುದು ಎಷ್ಟುಸರಿ. ಮತಾಂಧತೆ, ಬರ್ಬರ ಹತ್ಯೆ, ಇದನ್ನ ಬಿಟ್ಟು ಟಿಪ್ಪು ಕೊಡುಗೆ ಏನು?, ಟಿಪ್ಪುಗೆ ಕೆಂಪೇಗೌಡ ಅವರನ್ನ ಹೋಲಿಸುತ್ತಾರೆ ಅಂದರೆ ಅವರ ಪಕ್ಷ ಯಾವ ಸ್ಥಿತಿಯಲ್ಲಿದೆ ಎಂಬುದು ಗೊತ್ತಾಗುತ್ತೆ. ಈ ಬಗ್ಗೆ ಸಿದ್ದರಾಮಯ್ಯ, ಕುಮಾರಸ್ವಾಮಿ ಮಾಡಿರುವ ಟೀಕೆಗೂ ಪ್ರತಿಕ್ರಿಯಿಸಿದ ಅವರು, ಒಕ್ಕಲಿಗರ ವೋಟ್‌ ಸಲುವಾಗಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡುತ್ತಾರಾ?, ಇವರ ಲೆಕ್ಕ ನೋಡಿದರೆ ಯಾವ ಮೂರ್ತಿಗಳನ್ನ ಮಾಡಲೇ ಬಾರದು, ಇದ್ದ ಮೂರ್ತಿಗಳನ್ನ ತೆಗೆಯಬೇಕಾ, ಹೇಳುವುದಕ್ಕೆ ಇವರಿಗೆ ಏನು ನೈತಿಕತೆ ಇದೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಹರಿಹಾಯ್ದರು.

ಮತದಾರರ ಋುಣ ತೀರಿಸಿದಲ್ಲಿ ರಾಜಕಾರಣ ಸಾರ್ಥಕ: ಸಚಿವ ಸಿ.ಸಿ.ಪಾಟೀಲ್

ಅಧಿಕಾರ ಇಲ್ಲದವರು ಕಿರುಚಾಡುತ್ತಾರೆ ಅನ್ನುತ್ತಾರೆ. ಆದರೆ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಅಧಿಕಾರ ಮಾಡಿದವರಿದ್ದಾರೆ. ಬೆಂಗಳೂರು ಕಟ್ಟಿದ ಕೆಂಪೇಗೌಡ ಅವರಿಗೆ ಆವಾಗಲೇ ಯಾಕೆ ನೆನಪಾಗಲಿಲ್ಲ. ನಾವು ಮಾಡಿದಾಗ ಇವರಿಗೆ ಹೊಟ್ಟೆಕಿಚ್ಚು ಶುರುವಾಗಿದೆ. ಅಭೂತಪೂರ್ವ ಜನಬೆಂಬಲ ನೋಡಿ ಹೊಟ್ಟೆಯಲ್ಲಿ ಮೆಣಸಿನಕಾಯಿ ಕಲಸಿದಂತಾಗಿದೆ. ಸರ್ಕಾರದ ದುಡ್ಡಿನಲ್ಲಿ ಪ್ರತಿಮೆ ಮಾಡಿದ್ದೀರಿ ಅಂತಾರೆ, ಮಾಡಿದ್ದರೆ ತಪ್ಪೇನಿದೆ. ಯಾರು ಸ್ವಂತಕ್ಕೆ ಮಾಡಿಲ್ಲ, ನಾಳೆ ಅದು ಆಕರ್ಷಣೀಯ ಸ್ಥಳವಾಗುತ್ತೆ. ಎಲ್ಲ ರಾಜಕಾರಣಿಗಳಿಗೆ ಕೆಂಪೇಗೌಡರು ಮಾದರಿಯಾಗಿದ್ದಾರೆ. ಅವರ ದೂರದೃಷ್ಟಿಯಂತೆ ನಮ್ಮ ಕ್ಷೇತ್ರ, ಊರು ಅಭಿವೃದ್ಧಿ ಮಾಡಬೇಕು ಎನ್ನಿಸುತ್ತೆ. ಇದನ್ನೆಲ್ಲ ಏಕೆ ಕ್ರೀಡಾ ಮನೋಭಾವನೆಯಿಂದ ತೆಗೆದುಕೊಳ್ಳಬಾರದು.

ಮಾಜಿ ಪ್ರಧಾನಿ ದೇವೇಗೌಡರನ್ನು ದೂರವಾಣಿಯ ಮೂಲಕ ಸಿಎಂ ಆಹ್ವಾನಿಸಿದ್ದಾರೆ. ಪತ್ರ ಬರೆದಿದ್ದಾರೆ. ಆದರೆ, ಕರೆದಿಲ್ಲ ಅಂತಾ ಸುಳ್ಳು ಹೇಳುತ್ತಿದ್ದಾರೆ. ಪ್ರತಿಯೊಂದರಲ್ಲಿ ರಾಜಕೀಯ ಮಾಡುವುದು ಇವರ ಉದ್ದೇಶವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಹೆಗಲ ಮೇಲೆ ಕಂಬಳಿ ಹಾಕಿದರೆ ಕುರುಬರ ಓಟು ಪಡೆಯೋದಕ್ಕೆ ಅಂತಾರೆ. ಕಂಬಳಿ ಸಿದ್ದರಾಮಯ್ಯ ಅವರ ಪೇಟೆಂಟ್‌ ಇದೆಯಾ?. ಇವರು ಕಂಬಳಿ ಹಾಕಿರೋ ಫೋಟೋವನ್ನ ನಾವು ನೋಡಿಲ್ಲವಾ..? ಅವರೊಬ್ಬರೇ ಕಂಬಳಿ ಹಾಕ್ಕೋಬೇಕಾ, ನರೇಂದ್ರ ಮೋದಿ ಅವರು ಕಂಬಳಿ ಹಾಕಿದರೆ ಏನು ತಪ್ಪು. ಹಬ್ಬದ ದಿನಗಳಲ್ಲಿ ನಮ್ಮ ಮನೆಯಲ್ಲಿ ಕಂಬಳಿ ಹಾಸಿ ಪೂಜೆ ಮಾಡುತ್ತೇವೆ. ಸಿದ್ದರಾಮಯ್ಯ ಅವರ ಪ್ರಕಾರ ಮನೆಯಲ್ಲಿ ಕಂಬಳಿ ಹಾಕಬಾರದು ಅಂತಾ ಆಯಿತಲ್ಲಾ..

ಸೂಟ್‌ ಬೂಟ್‌ ಸರ್ಕಾರದಿಂದ ಕೆ.ಆರ್‌.ಕ್ಷೇತ್ರಕ್ಕೆ 6 ಸಾವಿರ ಮನೆ: ಸಚಿವ ಸಿ.ಸಿ.ಪಾಟೀಲ್‌

ಪ್ರಗತಿ, ಸಾಧನೆ, ವೈಫಲ್ಯ ವಿಶ್ಲೇಷಣೆ ಮಾಡಿ ರಾಜಕಾರಣ ಮಾಡಬೇಕು, ಅಂದರೆ ಅದಕ್ಕೆ ಮೌಲ್ಯ ಇರುತ್ತದೆ. ಜಾತಿ ಆಧಾರಿತ ರಾಜಕಾರಣ ಮಾಡಿದವರು ಈ ದೇಶದಲ್ಲಿ ಹೆಚ್ಚು ದಿನ ಬದುಕಿಲ್ಲ ಎನ್ನುವುದನ್ನು ವಿರೋಧ ಪಕ್ಷದ ನಾಯಕರು ಗಮನಿಸಬೇಕು ಎಂದರು. ಈ ವೇಳೆ ನಗರಸಭೆ ಅಧ್ಯಕ್ಷೆ ಉಷಾ ದಾಸರ ಸೇರಿದಂತೆ ಹಲವರಿದ್ದರು.