Asianet Suvarna News Asianet Suvarna News

Davanagere: ನಿಮ್ಮ ಡಿಸ್ಟಿಲರಿಯಲ್ಲಿ ಏನು ತಯಾರು ಮಾಡುತ್ತಿದ್ದೀರಿ?

ಬಿಜೆಪಿಯವರ ವಿರುದ್ಧ ಗುಟ್ಕಾ, ಕಳ್ಳಭಟ್ಟಿ, ಹೆಂಡ ಮಾರುತ್ತಾರೆಂದು ಆರೋಪಿಸಿದ ಡಾ.ಶಾಮನೂರು ಶಿವಶಂಕರಪ್ಪ ತಮ್ಮದೇ ಒಡೆತನದ ಸ್ಯಾಮ್ಸನ್‌ ಡಿಸ್ಟಿಲರಿಯಲ್ಲಿ ಹಾಲು ಉತ್ಪಾದಿಸುತ್ತಿದ್ದಿರಾ? ಅಲ್ಲಿ ಏನು ತಯಾರು ಮಾಡುತ್ತಿದ್ದೀರಿ ಎಂಬುದನ್ನು ಸಾರ್ವಜನಿಕವಾಗಿ ಹೇಳಲಿ ಎಂದರು.

What are you brewing at your distillery yashwant jadhav questionn at davanagere rav
Author
First Published Jan 19, 2023, 7:39 AM IST

ದಾವಣಗೆರೆ (ಜ.19) : ನಿಮ್ಮ ಡಿಸ್ಟಿಲರಿಯಲ್ಲಿ ಸೆಕೆಂಡ್‌್ಸ ಮದ್ಯ ತಯಾರಿಸುವ ಜೊತೆಗೆ ಓರ್ವ ಕೂಲಿ ಕಾರ್ಮಿಕ ಕುಡಿದು ಸತ್ತಿದ್ದನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮರೆತಂತಿದೆ. ಅಲ್ಲದೇ, ಈ ಬಗ್ಗೆ ಸುದ್ದಿ ಪ್ರಕಟಿಸಿದ್ದ ಪತ್ರಿಕೆಯೊಂದರ ಸಂಪಾದಕನಿಗೆ ಪೊಲೀಸ್‌ ಠಾಣೆಯಲ್ಲೇ ನಿಮ್ಮ ಪುತ್ರ ಎಸ್‌.ಎಸ್‌.ಮಲ್ಲಿಕಾರ್ಜುನ ಚಪ್ಪಲಿಯಿಂದ ಹೊಡೆದಿದ್ದನ್ನು ಮರೆತಂತಿದೆ ಎಂದು ಬಿಜೆಪಿ ಮುಖಂಡ ಯಶವಂತರಾವ್‌ ಜಾಧವ್‌ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರ ವಿರುದ್ಧ ಗುಟ್ಕಾ, ಕಳ್ಳಭಟ್ಟಿ, ಹೆಂಡ ಮಾರುತ್ತಾರೆಂದು ಆರೋಪಿಸಿದ ಡಾ.ಶಾಮನೂರು ಶಿವಶಂಕರಪ್ಪ ತಮ್ಮದೇ ಒಡೆತನದ ಸ್ಯಾಮ್ಸನ್‌ ಡಿಸ್ಟಿಲರಿಯಲ್ಲಿ ಹಾಲು ಉತ್ಪಾದಿಸುತ್ತಿದ್ದಿರಾ? ಅಲ್ಲಿ ಏನು ತಯಾರು ಮಾಡುತ್ತಿದ್ದೀರಿ ಎಂಬುದನ್ನು ಸಾರ್ವಜನಿಕವಾಗಿ ಹೇಳಲಿ ಎಂದರು.

Davanagere: 92ರ ಇಳಿವಯಸ್ಸಿನಲ್ಲೂ ಶಾಮನೂರು ಶಿವಶಂಕರಪ್ಪ ಸ್ಪರ್ಧೆ ಖಚಿತ: ಕಣಕ್ಕಿಳಿದ ಅಪ್ಪ-ಮಗ

ಶಾಮನೂರು ಶಿವಶಂಕರಪ್ಪ ಬಗ್ಗೆ ಗೌರವವಿದ್ದರೂ ಆರೋಪಗಳಿಗೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ನಿಮ್ಮ ಪುತ್ರನ ಮಿಲ್‌ನ ಫಾರಂ ಹೌಸ್‌ನಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಸಾಕಿದ್ದವರು, ಹಿಂದೆ ಬ್ರಾಂಡಿ ತಯಾರಿಸಿ ಓರ್ವನ ಸಾವಿಗೆ ಕಾರಣವಾದವರು ಬಿಜೆಪಿಯವರ ಮೇಲೆ ಪ್ರಶ್ನೆ ಮಾಡುತ್ತಿರುವುದು ಹಾಸ್ಯಾಸ್ಪದ. ಅಕ್ರಮ ಬ್ರಾಂಡಿ ಪಿತಾಮಹ ನೀವೇ ಆಗಿದ್ದು, ಅದಕ್ಕಾಗಿಯೇ ನಿಮ್ಮ ಬಾಯಿಂದ ಇಂತಹ ಮಾತುಗಳು ಬರುತ್ತಿವೆ ಎಂದು ಟೀಕಿಸಿದರು.

ಹೋರಾಟ ಮಾಡಿಲ್ಲವೇಕೆ?

ನಿಮ್ಮ ಮಗ ಮಲ್ಲಿಕಾರ್ಜುನ್‌ ನಿಮ್ಮ ಮಿಲ್‌ನ ಸಂಪನ್ನ, ಕರಿಬಸಯ್ಯ ಮೂವರ ಮೇಲೂ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರಿನಲ್ಲಿ ಜಿಂಕೆ ಕೊಂಬು, ಚರ್ಮ ಮಾರಾಟ ಮಾಡಲು ಹೋಗಿದ್ದ ಸೆಂಥಿಲ್‌ನಿಂದಾಗಿ ವನ್ಯ ಜೀವಿ ಸಾಕಿದ್ದ ಪ್ರಕರಣ ಬಯಲಾಗಿದೆಯೇ ಹೊರತು, ಬಿಜೆಪಿ ಹೊರ ತಂದ ಸಂಗತಿಯಲ್ಲ ಎಂದರು. ವನ್ಯಜೀವಿ ಸಾಕಿದ್ದ ಪ್ರಕರಣದಲ್ಲಿ ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಅರಣ್ಯ ಇಲಾಖೆ ಅನುಮತಿ ಕೇಳಿತ್ತು. ಆಗ ನಿಮ್ಮ ಮಗ ಸೇರಿ ಇಬ್ಬರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ನೀವು ಆಕಳು, ಕುರಿ ಸಾಕಿದ್ದರೆ ಏಕೆ ಕೇಸ್‌ ದಾಖಲಿಸಿದ್ದೀರೆಂದು ಹೋರಾಟ ಮಾಡಬಹುದಿತ್ತಲ್ಲವೇ? ಅರಣ್ಯಾಧಿಕಾರಿ ವಿರುದ್ಧ ಯಾಕೆ ಹೋರಾಟ ಮಾಡಲಿಲ್ಲ? ತಲೆಯಲ್ಲಿ ಮಿದುಳು ಇದ್ದವರು ಕೃಷ್ಣಮೃಗ, ಜಿಂಕೆ, ನರಿ, ಮುಂಗುಸಿ, ಕಾಡು ಹಂದಿಯಂತಹ ವನ್ಯಜೀವಿಗಳ ಸಾಕಿದ್ದಾರೆ. ನಮಗೆ ಮಿದುಳಿಲ್ಲ ಅದಕ್ಕೆ ಸಾಕಿಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಸವಾಲು ಸ್ವೀರಿಸಿಲ್ಲ:

ನನ್ನ ವಿರುದ್ಧ ಕಾಂಗ್ರೆಸ್ಸಿನವರು ಸಾಕಷ್ಟುಸಲ ಆರೋಪ ಮಾಡಿದ್ದಾರೆ. ನಾನೂ ದಾಖಲೆ ಸಮೇತ ಆರೋಪ ಸಾಬೀತುಪಡಿಸಿ, ನನ್ನೆಲ್ಲಾ ಆಸ್ತಿಯನ್ನು ಪಾಲಿಕೆ, ದೂಡಾ, ಸರ್ಕಾರಕ್ಕೆ ಬರೆದುಕೊಡುತ್ತೇನೆ. ನಿಮ್ಮ ನಾಯಕರ ವಿರುದ್ಧ ನಾನು ಮಾಡಿದ ಆರೋಪಕ್ಕೆ ಸಂಬಂಧಿಸಿ ಆರ್‌ಟಿಐನಡಿ ಪಡೆದ ದಾಖಲೆ ಹಾಜರುಪಡಿಸುತ್ತೇನೆ, ಎಲ್ಲಾ ಆಸ್ತಿ ಸರ್ಕಾರಕ್ಕೆ ಮರಳುಸುತ್ತೀರಾ ಎಂಬ ಪ್ರಶ್ನೆಗೆ ಯಾವೊಬ್ಬ ಕಾಂಗ್ರೆಸ್ಸಿಗನೂ ಸವಾಲು ಸ್ವೀಕರಿಸಿಲ್ಲ ಏಕೆ ಎಂದು ಯಶವಂತ ರಾವ್‌ ಪ್ರಶ್ನಿಸಿದರು.

ಮೇಯರ್‌ ಜಯಮ್ಮ ಗೋಪಿನಾಯ್ಕ, ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ, ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಪೈಲ್ವಾನ್‌, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ, ಸದಸ್ಯ ಆರ್‌.ಶಿವಾನಂದ, ಆನಂದರಾವ್‌ ಶಿಂಧೆ, ಶಿವನಗೌಡ ಪಾಟೀಲ್‌, ಟಿಂಕರ್‌ ಮಂಜಣ್ಣ ಇತರರು ಇದ್ದರು. 

Prajadhwani yatre: ಬಿಜೆಪಿ ಸರ್ಕಾರದ ಪಾಪದ ಕೊಡ ಭರ್ತಿ: ಎಸ್‌.ಎಸ್‌.ಮಲ್ಲಿಕಾರ್ಜುನ ವಾಗ್ದಾಳಿ

ಕಾಂಗ್ರೆಸ್ಸಿನ ನಾಯಕರು ತಮ್ಮ ಮಕ್ಕಳ ಮೇಲಿನ ಕುರುಡು ಪ್ರೇಮ ಬಿಟ್ಟು, ತಿಳಿ ಹೇಳಲಿ. ಸಣ್ಣ ಸಣ್ಣ ವಿಚಾರಕ್ಕೂ ದಾಂಧಲೆ ಮಾಡುವ ಕಾಂಗ್ರೆಸ್ಸಿನ ಮುಖಂಡರು, ತಮ್ಮನ್ನು ಹೋರಾಟಗಾರರೆಂದು ತೋರಿಸುವವರು ಮಿಲ್‌ನಲ್ಲಿ ವನ್ಯಜೀವಿಗಳನ್ನು ಅಕ್ರಮವಾಗಿ ಸಾಕಿದ್ದ ಬಗ್ಗೆ ಯಾಕೆ ಬೀದಿಗಿಳಿದು ಹೋರಾಡಲಿಲ್ಲ? ನಿಮ್ಮ ಹೋರಾಟ, ಸುದ್ದಿಗೋಷ್ಠಿಗಳಲ್ಲಿ ಅಬ್ಬರಿಸುತ್ತಿದ್ದವರೂ ಈ ಪ್ರಕರಣದ ಬಗ್ಗೆ ಯಾಕೆ ಧ್ವನಿ ಎತ್ತಿಲ್ಲವೆಂದು ಜನತೆಗೆ ತಿಳಿಸಲಿ.

- ಯಶವಂತರಾವ್‌, ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ.

Follow Us:
Download App:
  • android
  • ios