ಇಂದಿರಾ ಕ್ಯಾಂಟಿನ್ ಶುಲ್ಕ ಬಾಕಿ: ನೀರು ಪೂರೈಕೆ ಕಡಿತ
ಕಳೆದ ಏಳು ತಿಂಗಳಿಂದ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದ ರಾಜ್ಯ ಸರ್ಕಾರ-ಬಿಬಿಎಂಪಿ| ನೀರು ಪೂರೈಕೆ ಇಲ್ಲದೆ ಬಡವರು ಹಾಗೂ ನಿರ್ಗತಿಕರಿಗೆ ಕಡಿಮೆ ದರದಲ್ಲಿ ಆಹಾರ ನೀಡುವ ಇಂದಿರಾ ಕ್ಯಾಂಟಿನ್ಗಳು ಸಂಕಷ್ಟದ ಸ್ಥಿತಿ ತಲುಪಿವೆ|
ಬೆಂಗಳೂರು(ನ.07): ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ನೀರಿನ ಶುಲ್ಕ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿ ಹಲವು ಇಂದಿರಾ ಕ್ಯಾಂಟಿನ್ಗಳಿಗೆ ನೀರು ಪೂರೈಕೆ ಕಡಿತ ಹಾಗೂ ಒಳಚರಂಡಿ ಪೈಪ್ಲೈನ್ ಬಂದ್ ಮಾಡಿರುವ ಆರೋಪ ಕೇಳಿ ಬಂದಿದೆ.
ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಕಳೆದ ಏಳು ತಿಂಗಳಿಂದ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದಿರುವ ಪರಿಣಾಮ ಗುತ್ತಿಗೆದಾರರು ನೀರಿನ ಶುಲ್ಕ ಪಾವತಿಸಲು ಸಾಧ್ಯವಾಗಿಲ್ಲ. ಇದೀಗ ನೀರು ಪೂರೈಕೆ ಇಲ್ಲದೆ ಬಡವರು ಹಾಗೂ ನಿರ್ಗತಿಕರಿಗೆ ಕಡಿಮೆ ದರದಲ್ಲಿ ಆಹಾರ ನೀಡುವ ಇಂದಿರಾ ಕ್ಯಾಂಟಿನ್ಗಳು ಸಂಕಷ್ಟದ ಸ್ಥಿತಿ ತಲುಪಿವೆ. ಇತ್ತ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡದ ಗುತ್ತಿಗೆದಾರರು, ಬಿಬಿಎಂಪಿಯತ್ತ ಮುಖಮಾಡಿ ಕೂರುವ ಸ್ಥಿತಿ ನಿರ್ಮಾಣವಾಗಿದೆ.
ಹಾಳಾದ ಪಾತ್ರೆಗಳು: ಇಂದಿರಾ ಕ್ಯಾಂಟೀನ್ನಲ್ಲಿ ಸಿಗ್ತಿಲ್ಲ ಇಡ್ಲಿ..!
ಇಂದಿರಾ ಕ್ಯಾಂಟಿನ್ಗಳು ಸಮಸ್ಯೆಗಳ ಆಗರವಾಗುತ್ತಿರುವ ಬಗ್ಗೆ ಪ್ರಶ್ನಿಸಿದರೆ ಪಾಲಿಕೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಪಾಲಿಕೆಯ ಆರ್ಥಿಕ ಸ್ಥಿತಿ ಕುಸಿದಿರುವ ಪರಿಣಾಮ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲು ತೊಂದರೆಯಾಗಿದೆ ಎಂದು ಹೇಳುತ್ತಾರೆ.