ವಿನಯ್ ಗುರೂಜಿ ದಿಢೀರ್ ಭೇಟಿ ನೀಡಿದ್ದು, ಡಾ. ಜಿ.ಪರಮೇಶ್ವರ್ ಅವರಿಗೆ ಆಶೀರ್ವಾದ ನೀಡಿದ್ದಾರೆ. ಅಲ್ಲದೇ  ಗಾಂಧಿ ವಾದ, ಕರ್ಮ ಸಿದ್ಧಾಂತವನ್ನು ಪ್ರತಿ ಕಣಕಣದಲ್ಲೂ ಆಚರಣೆಯಲ್ಲಿಟ್ಟುಕೊಂಡವರಲ್ಲಿ ಪರಮೇಶ್ವರ್‌ ಮೊದಲಿಗರು ಎಂದರು. 

ತುಮಕೂರು (ಏ.03):  ಗಾಂಧೀಜಿಯವರ ಸಿದ್ಧಾಂತದ ಮೇಲೆ ನಡೆಯುತ್ತಿರುವ ವಿನಯ್‌ ಗುರೂಜಿ ಅವರು ನಮಗೆಲ್ಲ ಪ್ರೇರಣೆಯಾಗಿದ್ದು, ಧಾರ್ಮಿಕ ಕ್ಷೇತ್ರದಲ್ಲಿ ಬಹು ದೊಡ್ಡ ಬದಲಾವಣೆಯ ಕ್ರಾಂತಿಯಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್‌ ಹೇಳಿದರು.

Add Asianetnews Kannada as a Preferred SourcegooglePreferred

ನಗರದ ಅಗಲಕೋಟೆಯಲ್ಲಿರುವ ಸಿದ್ಧಾರ್ಥ ಮೆಡಿಕಲ್‌ ಕಾಲೇಜಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ವಿನಯ್‌ ಗುರೂಜಿ ಅವರನ್ನು ಅಭಿನಂದಿಸಿ ಆಶೀರ್ವಾದ ಪಡೆದ ನಂತರ ಮಾತನಾಡಿದ ಅವರು, ಧಾರ್ಮಿಕ ಕ್ಷೇತ್ರದಲ್ಲಿ ಗಾಂಧೀಜಿ ಸಿದ್ಧಾಂತದ ಅಡಿಪಾಯದಲ್ಲಿ ವಿನಯ್‌ ಗುರೂಜಿ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.

ಗಾಂಧೀಜಿ ಸರ್ವಸ್ವವನ್ನೂ ತ್ಯಾಗ ಮಾಡಿ ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಡುವ ಕೆಲಸದಲ್ಲಿ ಯಶಸ್ವಿ ಕಂಡರು. ಅತ್ಯಂತ ದೊಡ್ಡ ಚಕ್ರಾಧಿಪತ್ಯವಾದಂತಹ ಬ್ರಿಟಿಷ್‌ ಸಾಮ್ರಾಜ್ಯವನ್ನು ಎದುರು ಹಾಕಿಕೊಂಡು ಅವರಿಂದ ಸ್ವಾತಂತ್ರ್ಯ ತಂದು ಕೊಟ್ಟವರು ಗಾಂಧೀಜಿಯವರು. ಅವರ ಸಿದ್ಧಾಂತದ ಮೇಲೆ ಗುರೂಜಿ ನಡೆಯುತ್ತಿರುವುದು ನಮಗೆಲ್ಲರಿಗೂ ಪ್ರೇರಣೆ ಎಂದು ಹೇಳಿದರು.

ಬದುಕಲ್ಲ ಎಂದವ ಬದುಕಿದ : ವಿನಯ್ ಗುರೂಜಿ ಆಶ್ರಮದಲ್ಲಿ ಡಿಸಿಎಂ ವಿಶೇಷ ಪೂಜೆ ...

ಒಳ್ಳೆಯ ಸತ್ಕಾರ್ಯಗಳ ನಿರೀಕ್ಷೆ: ವಿನಯ್‌ ಗುರೂಜಿ ಅವರಿಂದ ಇನ್ನು ಅನೇಕ ಒಳ್ಳಯೆ ಸತ್ಕಾರ್ಯಗಳನ್ನು ನಿರೀಕ್ಷೆ ಮಾಡಬಹುದು. ಆಧುನಿಕ ಜಗತ್ತಿನಲ್ಲಿ ಇದೊಂದು ರೀತಿಯಲ್ಲಿ ವಿಸ್ಮಯ. ಆಧುನಿಕ ಜಗತ್ತು ವಿಜ್ಞಾನದಲ್ಲಿ ನಂಬಿಕೆಯಲ್ಲಿ ಇರುವಂತಹದ್ದು. ಗುರೂಜಿ ಅವರು ಕೂಡಾ ಎಂಜಿನಿಯರಿಂಗ್‌ ಓದಿ ಅವರು ಕೂಡಾ ಫ್ರಾನ್ಸ್‌ನಲ್ಲಿ ಕೆಲಸ ಮಾಡಿ ಆಧುನಿಕ ಜಗತ್ತನ್ನು ಅರಿತಿರುವಂತಹವರು. ಇಡೀ ಸಮಾಜಕ್ಕೆ ಹೊಸ ಬದಲಾವಣೆಯನ್ನು ಜನಮಾನಕ್ಕೆ ಆಶೀರ್ವಾದ ನೀಡುತ್ತಿರುವುದು ಬಹಳ ಸಂತೋಷ ತಂದಿದೆ ಎಂದರು.

ಅನಿರೀಕ್ಷಿತವಾಗಿ ವಿನಯ್‌ ಗುರೂಜಿ ಅವರು ನಮ್ಮ ಕಾಲೇಜಿಗೆ ಭೇಟಿ ನೀಡಿರುವುದು ಸಂತೋಷ ತಂದಿದೆ. ಮೆಡಿಕಲ್‌ ಕಾಲೇಜಿನ ವೈದ್ಯರು, ವಿದ್ಯಾರ್ಥಿಗಳೆಲ್ಲರನ್ನೂ ಭೇಟಿ ಮಾಡಿ ಆಶೀರ್ವದಿಸಿದರು. ಅಲ್ಲದೆ ಕಾಲೇಜಿಗೆ ಒಳ್ಳೆಯದಾಗಲಿ, ಇನ್ನು ಹೆಚ್ಚು ಜನರ ಸೇವೆ ಮಾಡುವಂತಾಗಲಿ ಎಂದು ಆಶಿಸಿದರು ಎಂದು ಹೇಳಿದರು.

ಪರಮೇಶ್ವರ್‌ ಮೊದಲಿಗರು: ಪರಮೇಶ್ವರ್‌ ದಂಪತಿಯನ್ನು ಆಶೀರ್ವದಿಸಿ ಮಾತನಾಡಿದ ವಿನಯ್‌ ಗುರೂಜಿ ಅವರು, ಕಾಂಗ್ರೆಸ್‌ನಲ್ಲಿ ಗಾಂಧಿ ವಾದ, ಕರ್ಮ ಸಿದ್ಧಾಂತವನ್ನು ಪ್ರತಿ ಕಣಕಣದಲ್ಲೂ ಆಚರಣೆಯಲ್ಲಿಟ್ಟುಕೊಂಡವರಲ್ಲಿ ಪರಮೇಶ್ವರ್‌ ಮೊದಲಿಗರು. ಕಾಲೇಜು ಕಟ್ಟಿಎಷ್ಟೋ ಬಡ ಮಕ್ಕಳಿಗೆ ವಿದ್ಯೆ ಕಲಿಸಿ, ಉದ್ಯೋಗ ದೊರಕಿಸಿಕೊಟ್ಟಿದ್ದಾರೆ ಎಂದರು.

ದೂರದ ಎಲ್ಲಿಗೋ ಹೋಗಿ ಬಿಇ, ಮೆಡಿಕಲ್‌ ಓದಬೇಕಾಗಿತ್ತು. ಬಡ ಮಕ್ಕಳಿಗೆ ವಿದ್ಯೆಯನ್ನು ಅವರ ಬಳಿಗೆ ತೆಗೆದುಕೊಂಡ ಹೋಗುವ ಪ್ರಯತ್ನವನ್ನು ಪರಮೇಶ್ವರ್‌ ಕುಟುಂಬ ಮಾಡುತ್ತಿದೆ. ಜತೆಗೆ ಅದೆಷ್ಟೋ ಬಡ ಮಕ್ಕಳಿಗೆ ಉದ್ಯೋಗ ದೊರಕಿಸುವಂತಹ ಕಾಯಕವನ್ನು ಮಾಡುತ್ತಿದ್ದಾರೆ. ಈ ಕಾರ್ಯ ಹೀಗೆ ಮುಂದುವರೆಯಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಕನ್ನಿಕಾ ಪರಮೇಶ್ವರ್‌ ಮತ್ತು ಕಾಲೇಜಿನ ವೈದ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.