ದುಷ್ಕರ್ಮಿಗಳಿಂದ ಯುವಕನ ಹತ್ಯೆ-ಆರೋಪ| ಸಮಗ್ರ ತನಿಖೆ ನಡೆಸಿ, ಆರೋಪಿಗಳಿಗೆ ಶಿಕ್ಷೆ ವಿಧಿಸಿ| ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಕಾರರ ಒತ್ತಾಯ| 

ಮರಿಯಮ್ಮನಹಳ್ಳಿ(ಡಿ.06): ಮರಿಯಮ್ಮನಹಳ್ಳಿ ತಾಂಡದ ಯುವಕನೋರ್ವ ಕುಂದಾಪುರ ತಾಲೂಕಿನಲ್ಲಿ ನಿಗೂಢವಾಗಿ ಮೃತನಾಗಿದ್ದು, ಆತನನ್ನು ಹತ್ಯೆಗೈದು ನೇಣಿಗೆ ಹಾಕಿದ್ದು, ಆತ್ಮಹತ್ಯೆಯೆಂಬಂತೆ ಬಿಂಬಿಸಿದ್ದಾರೆ ಎಂದು ಆರೋಪಿಸಿ ತಾಂಡದ ಹೊರವಲಯದಲ್ಲಿ ಗ್ರಾಮಸ್ಥರು ಶವ ಇಟ್ಟು ಶನಿವಾರ ಪ್ರತಿಭಟನೆ ನಡೆಸಿದರು.

Add Asianetnews Kannada as a Preferred SourcegooglePreferred

ಮರಿಯಮ್ಮನಹಳ್ಳಿ ತಾಂಡದ ಯುವಕ ಕಿರಣ್‌ ನಾಯ್ಕ (18) ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮಕ್ಕೆ ಜೆಸಿಬಿ ಯಂತ್ರ ನಡೆಸಲು ಹೋಗಿದ್ದರು. ದುಷ್ಕರ್ಮಿಗಳು ಅವರನ್ನು ಹತ್ಯೆಗೈದು ನೇಣಿಗೆ ಹಾಕಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು. ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು, ಮೃತನ ಕುಟುಂಬಕ್ಕೆ ಯೋಗ್ಯ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಹೊಸಪೇಟೆ: ಅತ್ಯಾಚಾರ ಯತ್ನ, ಹತ್ಯೆಗೀಡಾದ ಬಾಲಕಿ ಶವ ಇಟ್ಟು ಪ್ರತಿಭಟನೆ

ಕೂಲಿ ಕಾರ್ಮಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಮೃತ ಯುವಕ ಕುಟುಂಬಕ್ಕೆ ದುಡಿಯುವ ಆಧಾರಸ್ತಂಭವಾಗಿದ್ದರು. ಈಗ ತಂದೆ-ತಾಯಿಗಳಿಗೆ ಆಸರೆ ಇಲ್ಲದಂತಾಗಿದೆ. ಘಟನೆಯ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಸಮಾಜ ಸೇವಕ ಲಾಲ್ಯನಾಯ್ಕ ಒತ್ತಾಯಿಸಿದರು.

ವಲಸೆ ಕಾರ್ಮಿಕರಿಗೆ ವಿಮೆ ಸೌಲಭ್ಯ ಒದಗಿಸಬೇಕು. ಜತೆಗೆ ಅವರಿಗೆ ಸೂಕ್ತ ಭದ್ರತೆ ನೀಡಬೇಕು. ಕೆಲಸಕ್ಕೆ ಕರೆದೊಯ್ಯುವವರು, ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಪಟ್ಟಣದ ಪಿಎಸ್‌ಐ ಎಂ. ಶಿವಕುಮಾರ್‌ ತಾಂಡಾದಲ್ಲಿ ಸೂಕ್ತ ಬಂದೋಬಸ್ತ್‌ ಏರ್ಪಡಿಸಿದ್ದರು. ಪಟ್ಟಣದ ನಾಡಕಾರ್ಯಾಲಯದ ಉಪತಹಸೀಲ್ದಾರ್‌ ಲಾವಣ್ಯ ಅವರಿಗೆ ಪ್ರತಿಭಟನಕಾರರು ಮನವಿ ಪತ್ರ ಸಲ್ಲಿಸಿದರು. ಕಂದಾಯ ನಿರೀಕ್ಷಕ ಅಂದಾನಗೌಡ, ಪಿಎಸ್‌ಐ ಎಂ. ಶಿವಕುಮಾರ ಉಪಸ್ಥಿತರಿದ್ದರು.