ವಿಜಯಪುರದಲ್ಲಿ ರೈತರ ಪಹಣಿಯಲ್ಲಿ ವಕ್ಫ್‌ ಹೆಸರು ಸೇರಿಸಿದ್ದಕ್ಕೆ ರೈತರು ಡಿಸಿ ಕಚೇರಿ ಎದುರು ತಡರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಪಹಣಿಯಿಂದ ವಕ್ಫ್ ಹೆಸರು ತೆಗೆದ ದಾಖಲೆ ತೋರಿಸುವಂತೆ ಪಟ್ಟು ಹಿಡಿದ ರೈತರು, ಡಿಸಿ ಕಚೇರಿ ಬಾಗಿಲಿನ ಎದುರಲ್ಲಿಯೇ ಮಲಗಿ ಪ್ರತಿಭಟನೆ ಮುಂದುವರಿಸಿದ್ದಾರೆ.

ವಿಜಯಪುರ (ಅ.30): ಮುತ್ತಾತ, ತಾತನ ಕಾಲದಿಂದಲೂ ಬಂದ ಜಮೀನಿನಲ್ಲಿ ನೆಮ್ಮದಿಯಾಗಿ ಉಳುಮೆ ಮಾಡಿಕೊಂಡು ಬದುಕುತ್ತಿದ್ದ ರೈತರ ಪಹಣಿಯಲ್ಲಿ ಸಚಿವರೊಬ್ಬರ ಸೂಚನೆಯ ಮೇಲೆ ವಕ್ಫ್‌ ಹೆಸರು ಸೇರಿಸಿದ್ದ ವಿಜಯಪುರ ಜಿಲ್ಲಾಧಿಕಾರಿಗೆ ಅಲ್ಲಿನ ರೈತರು ಸ್ಲೀಪ್‌ ಟಾರ್ಚರ್‌ ನೀಡಿದ್ದಾರೆ. ಮಂಗಳವಾರ ತಡರಾತ್ರಿ ವಿಜಯಪುರ ಡಿಸಿ ಆಫೀಸ್ ಎದುರು ಭಾರೀ ಹೈಡ್ರಾಮಾ ನಡೆದಿದೆ. ವಕ್ಫ ಸರ್ವೇ ವಿರೋಧಿಸಿ ವಿಜಯಪುರ ಡಿಸಿ ಕಚೇರಿ ಎದುರು ರೈತರಿಂದ ಕರಾಳ ದೀಪಾವಳಿ ಆಚರಣೆ ಮಾಡಲಾಗಿದೆ. ರೈತರಿಗೆ ಪ್ರತಿಭಟನೆ ಕೈಬಿಡುವಂತೆ ಪೊಲೀಸರಿಂದ ಮನವೊಲಿಕೆಗೆ ಭಾರೀ ಪ್ರಯತ್ನ ನಡೆದರೂ ಅದರ ಪ್ರಯೋಜನವಾಗಲಿಲ್ಲ. ತಡರಾತ್ರಿ ಡಿಸಿ ಕಚೇರಿ ಎದುರು ಪೊಲೀಸ್ VS ರೈತರ ನಡುವೆ ಭಾರೀ ಸೀನ್‌ ಕ್ರಿಯೇಟ್‌ ಆಗಿದೆ. ಇದರಿಂದಾಗಿ ಮಧ್ಯರಾತ್ರಿಯೇ ಜಿಲ್ಲಾಧಿಕಾರಿ ಕಚೇರಿ ಬಾಗಿಲು ತೆರೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರೈತರ ಪಹಣಿಯಿಂದ ವಕ್ಫ ಹೆಸರು ಕೈಬಿಡಲು ಮಾಡಿದ ಆದೇಶ ಪ್ರತಿಯನ್ನು ಡಿಸಿ ಕಚೇರಿಯಿಂದ ತಂದು ರೈತರಿಗೆ ತೋರಿಸಿದ್ದರು. ರೈತರಿಗೆ ಆದೇಶ ಪ್ರತಿ ನೀಡಿ ಪ್ರತಿಭಟನೆ ಕೈಬಿಡಲು ಪೊಲೀಸರ ಮನವಿ ಮಾಡಿದ್ದರು. ಆದರೆ, ರೈತರು ಈ ಆದೇಶ ಪ್ರತಿಯನ್ನು ನೀವೇ ಇಟ್ಟುಕೊಳ್ಳಿ, ಪಹಣಿಯಿಂದಲೇ ವಕ್ಫ್‌ ಹೆಸರು ಕೈಬಿಟ್ಟ ದಾಖಲೆ ತೋರಿಸಿ ಎಂದು ಪಟ್ಟು ಹಿಡಿದಿದ್ದಾರೆ.

ಈ ವೇಳೆ ರೈತರು ಹಾಗೂ ಪೊಲೀಸರು ನಡುವೆ ದೊಡ್ಡ ಮಟ್ಟದ ಮಾತಿನ ಚಕಮಕಿ ನಡೆದಿದೆ. ತಡರಾತ್ರಿ ಡಿಸಿ ಕಚೇರಿ ಎದುರು ರೈತರು-ಪೊಲೀಸರ ನಡುವೆ ಹೈಡ್ರಾಮಾ ನಡೆದಿದೆ. ಈ ವೇಳೆ ಸ್ಥಳಕ್ಕೆ ಬಂದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ್, ಪ್ರತಿಭಟನೆ ಕೈಬಿಡಲು ಮನವಿ ಮಾಡಿದ್ದಾರೆ. ಆದರೆ, ಎಡಿಸಿ ಮಾತಿಗೂ ರೈತರು ಕ್ಯಾರೇ ಎಂದಿಲ್ಲ. ಪಹಣಿಯಿಂದ ವಕ್ಫ ಹೆಸರು ಕೈಬಿಡಲು ಇಂಡಿ ಎ.ಸಿ ಮಾಡಿದ ಆದೇಶ ಪ್ರತಿಯನ್ನ ರೈತರಿಗೆ ಎಡಿಸಿ ಮಾಡಿದ್ದಾರೆ.

ವಕ್ಫ್ ವಿಚಾರವಾಗಿ ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್‌ ಖರ್ಗೆ

ತೋರಿಸೋದಿದ್ರೆ ಪಹಣಿಯಲ್ಲಿ ವಕ್ಫ್‌ ಹೆಸರು ತೆಗೆದಿರೋ ದಾಖಲೆ ತೋರಿಸಿ. ಇದೆಲ್ಲ ಬೇಡ. ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ರೈತರು ಗಲಾಟೆ ಮಾಡಿದ್ದಾರೆ. ಅದಲ್ಲದೆ, ಡಿಸಿ ಕಚೇರಿ ಬಾಗಿಲಿನ ಎದುರಲ್ಲಿಯೇ ಹಾಸಿಗೆ ಹಾಸಿ ರೈತರು ಮಲಗಿಕೊಂಡಿದ್ದರು. ಈ ಹಂತದಲ್ಲಿ ಪ್ರತಿಭಟನೆಯ ಸ್ಥಳ ಬದಲಾಯಿಸಲು ಪೊಲೀಸರು ಮನವಿ ಮಾಡಿದ್ದಾರೆ. ಏನೇ ಆಗಲಿ, ಬೆಳಿಗ್ಗೆ 6 ಗಂಟೆಯವರೆಗೂ ಇಲ್ಲಿಂದ ತೆರಳಲ್ಲ ಎಂದು ರೈತರ ಪಟ್ಟು ಹಿಡಿದಿದ್ದಾರೆ. ಪೊಲೀಸರು ಎಷ್ಟೇ ಒತ್ತಡ ಹಾಕಿದರೂ ರೈತರು ಮಣಿದಿಲ್ಲ.

ಮಠ, ದೇವಾಲಯಗಳ ಆಸ್ತೀಲೂ ವಕ್ಫ್‌ ಹೆಸರು: ಸೋಮೇಶ್ವರ, ಬೀರೇಶ್ವರ ದೇಗುಲಕ್ಕೂ ಸಂಕಷ್ಟ

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭೇಟಿ: ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ವಿವಾದ ವಿಚಾರದಲ್ಲಿ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11-30ಕ್ಕೆ ವಿಜಯಪುರಕ್ಕೆ ಜೋಶಿ ಆಗಮಿಸಲಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಅಹೋರಾತ್ರಿ ಧರಣಿ ನಡೆದಿದ್ದು, ಕಚೇರಿ ಬಳಿ ರೈತರ ಜೊತೆಗೆ ಸಭೆ ನಡೆಸಲಿದ್ದಾರೆ. ರೈತರ ಜಮೀನು,ಮಠದ ಆಸ್ತಿಯ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಹಿನ್ನೆಲೆ, ರೈತರೊಂದಿಗೆ ಚರ್ಚಿಸಿ, ಹೋರಾಟಕ್ಕೆ ಬೆಂಬಲಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಲಿದ್ದಾರೆ. ನಿನ್ನೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ತಂಡ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ವಿವಾದದ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ರೈತರ ಅಹೋರಾತ್ರಿ ಧರಣಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬೆಂಬಲಿಸಿದ್ದಾರೆ.