Business couple takes sanyasa ದಾವಣಗೆರೆಯ ಪ್ರಖ್ಯಾತ  ಉದ್ಯಮಿ ದಂಪತಿ ಭರತ್ ಜೈನ್ ಆರತಿ, ಇಬ್ಬರು ಉನ್ನತ ಶಿಕ್ಷಿತ ಯುವತಿಯರೊಂದಿಗೆ ಐಷಾರಾಮಿ ಜೀವನ ತ್ಯಜಿಸಿ ಜೈನ ಸನ್ಯಾಸತ್ವ ಸ್ವೀಕಾರ. ಈಗಾಗಲೇ ಸನ್ಯಾಸ ಸ್ವೀಕರಿಸಿರುವ ತಮ್ಮ ಮಕ್ಕಳ ಹಾದಿಯಲ್ಲೇ ಸಾಗುತ್ತಿರುವ ಈ ಪೋಷಕರ ನಿರ್ಧಾರ ಗಮನ ಸೆಳೆದಿದೆ.

ದಾವಣಗೆರೆ (ಮಾ.3): ಬೆಣ್ಣೆ ನಗರಿ ದಾವಣಗೆರೆಯಲ್ಲಿ ಅಧ್ಯಾತ್ಮದ ಅಲೆಯೊಂದು ಎದ್ದಿದ್ದು, ಐಷಾರಾಮಿ ಜೀವನ ಹಾಗೂ ಉದ್ಯಮವನ್ನು ತೊರೆದು ನಾಲ್ವರು ಜೈನ ಸನ್ಯಾಸತ್ವ ಸ್ವೀಕರಿಸಲು ಸಜ್ಜಾಗಿದ್ದಾರೆ. ನಗರದ ಪ್ರಖ್ಯಾತ 'ಲಲಿತಾ ಗಾರ್ಮೆಂಟ್ಸ್' ಮಾಲೀಕರಾದ ಭರತ್ ಜೈನ್ (58) ಮತ್ತು ಅವರ ಪತ್ನಿ ಆರತಿ (50) ದಂಪತಿಗಳೊಂದಿಗೆ, ಉನ್ನತ ಶಿಕ್ಷಣ ಪಡೆದ ಇಬ್ಬರು ಯುವತಿಯರು ನಾಳೆ ಸಂಸಾರಿಕ ಸುಖವನ್ನು ತ್ಯಜಿಸಿ ಸನ್ಯಾಸ ದೀಕ್ಷೆ ಪಡೆಯಲಿದ್ದಾರೆ. ವಿಶೇಷವೆಂದರೆ, ಈ ಉದ್ಯಮಿ ದಂಪತಿಯ ಇಬ್ಬರು ಮಕ್ಕಳು ಈಗಾಗಲೇ ಜೈನ ಸನ್ಯಾಸತ್ವ ಸ್ವೀಕರಿಸಿದ್ದು, ಇದೀಗ ಪೋಷಕರೂ ಸಹ ಮಕ್ಕಳ ಹಾದಿಯಲ್ಲೇ ಸಾಗುತ್ತಿರುವುದು ಅಚ್ಚರಿ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸನ್ಯಾಸತ್ವ ಸ್ವೀಕರಿಸುತ್ತಿರುವವರಲ್ಲಿ ಎಂಬಿಎ ಪದವೀಧರೆ 30 ವರ್ಷದ ಕ್ರುನಾಲಿ ಬೇನ್ ಹಾಗೂ ಬಿ.ಕಾಂ ಪದವೀಧರೆ 28 ವರ್ಷದ ದೀಕ್ಷಿತಾ ಬೇನ್ ಕೂಡ ಸೇರಿದ್ದಾರೆ. ದಾವಣಗೆರೆಯಲ್ಲಿಯೇ ಪದವಿ ಶಿಕ್ಷಣ ಮುಗಿಸಿರುವ ಈ ಇಬ್ಬರು ಯುವತಿಯರು, ಲೌಕಿಕ ಜೀವನದ ವ್ಯಾಮೋಹವನ್ನು ಬಿಟ್ಟು ಅಧ್ಯಾತ್ಮದ ಹಾದಿಯನ್ನು ಆಯ್ದುಕೊಂಡಿದ್ದಾರೆ. ಉದ್ಯಮದಲ್ಲಿ ಯಶಸ್ಸು ಕಂಡಿದ್ದ ಭರತ್ ಜೈನ್ ದಂಪತಿ ಹಾಗೂ ಉನ್ನತ ಶಿಕ್ಷಣ ಪಡೆದ ಯುವತಿಯರು ಏಕಕಾಲಕ್ಕೆ ದೀಕ್ಷೆ ಪಡೆಯುತ್ತಿರುವುದು ಜೈನ ಸಮಾಜದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದೆ.

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದಾವಣಗೆರೆಯಲ್ಲಿ ಇಂದು ಸನ್ಯಾಸ ದೀಕ್ಷೆ ಸ್ವೀಕರಿಸಲಿರುವ ನಾಲ್ವರ ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ನಗರದ ಚೌಕಿಪೇಟೆಯ ಸುಪಾರ್ಶ್ವನಾಥ ಜೈನ ದೇವಸ್ಥಾನದಿಂದ ಆರಂಭವಾದ ಈ ಮೆರವಣಿಗೆಯು ಹಾಸಭಾವಿ ವೃತ್ತ, ಚಾಮರಾಜಪೇಟೆ ವೃತ್ತ, ಮಂಡಿಪೇಟೆ ಹಾಗೂ ವಸಂತರಸ್ತೆ ಮಾರ್ಗವಾಗಿ ಸಾಗಿತು. ಸಾವಿರಾರು ಜೈನ ಬಾಂಧವರು ಪಾಲ್ಗೊಂಡಿದ್ದ ಈ ಮೆರವಣಿಗೆಯು ಪಿಬಿ ರಸ್ತೆಯ ಅಭಿನವ ರೇಣುಕ ಮಂದಿರದವರೆಗೆ ಬಹಳ ವೈಭವದಿಂದ ನಡೆಯಿತು.

ನಾಳೆ ಬೆಳಗ್ಗೆ 6 ಗಂಟೆಗೆ ಅಭಯ್ ಶೇಖರ್ ಸುರೀಶ್ವರ್ ಮಹಾರಾಜರ ದಿವ್ಯ ಸಮ್ಮುಖದಲ್ಲಿ ಈ ನಾಲ್ವರಿಗೂ ಶಾಸ್ತ್ರೋಕ್ತವಾಗಿ ಸನ್ಯಾಸ ದೀಕ್ಷೆ ನೀಡಲಾಗುವುದು. ಈ ಮೂಲಕ ಇವರು ಅಧಿಕೃತವಾಗಿ ಸನ್ಯಾಸತ್ವ ಜೀವನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಭೌತಿಕ ಸುಖಕ್ಕಿಂತ ಮಾನಸಿಕ ಶಾಂತಿ ಮತ್ತು ಮುಕ್ತಿ ಮಾರ್ಗವೇ ಶ್ರೇಷ್ಠವೆಂದು ಸಾರುತ್ತಿರುವ ಈ ಘಟನೆ ಇಡೀ ಜಿಲ್ಲೆಯ ಗಮನ ಸೆಳೆದಿದೆ.