Asianet Suvarna News Asianet Suvarna News

ಪ್ರಕೃತಿಯಲ್ಲಿ ಎಲ್ಲ ರೋಗಗಳಿಗೂ ಮದ್ದಿದೆ: ಸಚಿವ ಮಾಧುಸ್ವಾಮಿ

ಸಾಂಪ್ರದಾಯಿಕ ಪಶುಚಿಕಿತ್ಸೆ ವಿಷಯದ ಕುರಿತ ವಿಚಾರ ಸಂಕಿರಣ| ಪ್ರಕೃತಿಯಲ್ಲಿ ಸಕಲ ರೋಗಗಳಿಗೂ ಔಷಧ ಎಂದ ಸಚಿವ ಮಾಧುಸ್ವಾಮಿ| ಪ್ರಕೃತಿಯನ್ನು ಕಾಪಡಿಕೊಳ್ಳುವ ಜವಾಬ್ದಾರಿ ನಮ್ಮೆಲರ ಮೇಲಿದೆ| ಇಂಗ್ಲಿಷ್‌ ಔಷಧ ಮೊರೆ ಹೋಗುವ ಮೂಲಕ ನಮ್ಮ ಮೂಲವನ್ನು ನಾವೆಲ್ಲರೂ ಮರೆಯುತ್ತಿದ್ದೇವೆ| 

Veterinary Surgery Seminar held at Tumakur
Author
Bengaluru, First Published Sep 19, 2019, 7:16 AM IST

ತುಮಕೂರು: (ಸೆ.19 ) ಪ್ರಕೃತಿಯಲ್ಲಿ ಎಲ್ಲ ರೋಗಕ್ಕೂ, ರೋಗನಿರೋಧಕ ಶಕ್ತಿ ಇರುತ್ತದೆ, ಅದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಬೇಕಾದ ಹಾಗೂ ಬೆಳೆಸುವ ಮೂಲಕ ಎಲ್ಲ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.
 
ನಗರದ ಸಿದ್ಧಾರ್ಥ ತಾಂತ್ರಿಕ ಕಾಲೇಜಿನಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘ ಮತ್ತು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಪ್ರದಾಯಿಕ ಪಶುಚಿಕಿತ್ಸೆ ವಿಷಯದ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವರು ಹಾಲು ಉತ್ಪಾದನೆ ರೈತರ ಉಪಕಸುಬಾಗಿದ್ದು, ಪ್ರಮುಖ ಕಸುಬಿನಲ್ಲಿ ಹೂಡುತ್ತಿದ್ದ ಬಂಡವಾಳವನ್ನು ಕಡಿಮೆ ಮಾಡುತ್ತಿತ್ತು. ಗರಿಷ್ಠ ಬೆಲೆಯನ್ನು ಉಪಕಸುಬು ದೊರೆಕಿಸಿಕೊಡುತ್ತದೆ. ಹಾಗಾಗಿ ರೈತರಿಗೆ ಉಪಕಸುಬು ನೆಚ್ಚಿಕೊಂಡಿದ್ದಾರೆ. ತುಮಕೂರು ಜಿಲ್ಲೆಯಂತಹ ಅರೆ ಬರಪೀಡಿತ ಜಿಲ್ಲೆ 75 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿರುವುದು ಸಂತಸದ ವಿಚಾರ. ಹೈನುಗಾರಿಕೆ ಲಾಭದಾಯಕವಾಗಬೇಕಾದರೆ, ಕೃತಕ ಗರ್ಭಧಾರಣೆಯಾಗಬೇಕು. ತಳಿ ಉನ್ನತೀಕರಣ ಮಾಡಬೇಕು ಎಂದರು.

ಉತ್ಪಾದನಾ ವೆಚ್ಚ ಕಡಿಮೆಯಾದರೆ, ಲಾಭ ಹೆಚ್ಚಳವಾಗುತ್ತದೆ. ಅದಕ್ಕಾಗಿಯೇ ತುಮೂಲ್‌ನಿಂದ ತಳಿಗಳನ್ನು ಸಾಕಲು ಅಗತ್ಯ ಔಷಧ ಮತ್ತು ಆಹಾರವನ್ನು ನೀಡಲಾಗುತ್ತಿತ್ತು. ಸೇವೆಯನ್ನು ಬಿಟ್ಟು ವ್ಯವಹಾರವಾದ ನಂತರ ಎಲ್ಲ ಉಚಿತ ಸೇವೆಗಳನ್ನು ನಿಲ್ಲಿಸಲಾಯಿತು. ದೇಶದ ಅಭಿವೃದ್ಧಿಗೆ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಿತ್ತು. ಆದರೆ ನಾವು ಅನುಕರಣೆಯಿಂದ ನಮ್ಮ ಮೂಲ ಉತ್ಪಾದಕರು ನಶಿಸಿದರು. ಅದು ನೇಯ್ಗೆ, ಹೈನುಗಾರಿಕೆಯನ್ನು ಅಪೋಶನ ತೆಗೆದುಕೊಂಡಿತು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಂಗ್ಲಿಷ್‌ ಔಷಧ ಮೊರೆ ಹೋಗುವ ಮೂಲಕ ನಮ್ಮ ಮೂಲವನ್ನು ನಾವೆಲ್ಲರೂ ಮರೆಯುತ್ತಿದ್ದೇವೆ. ರೋಗಕ್ಕೆ ಪ್ರತಿಯಾಗಿ ಔಷಧವೂ ಪ್ರಕೃತಿಯಲ್ಲಿ ದೊರೆಯುತ್ತದೆ. ಹಾಗಾಗಿ ಹಿಂದಿನ ಕಾಲಘಟ್ಟಕ್ಕೆ ಮರಳಬೇಕಾದ ಸ್ಥಿತಿಯಲ್ಲಿದ್ದೇವೆ. ನಮ್ಮ ನಡುವೆ ಅನುಕರಣೆಯ ಮನೋಸ್ಥಿತಿಯಿಂದಾಗಿ ಇಂದು ಇಂಗ್ಲಿಷ್‌ ಔಷಧಕ್ಕೆ ಒತ್ತು ನೀಡುತ್ತಿದ್ದು, ಭಾರತೀಯ ಪರಂಪರೆಯಲ್ಲಿಯೇ ಸಿಗುವ ಪ್ರಕೃತಿ ದತ್ತವಾದ ಔಷಧಗಳನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಬಳಿಕ ಮಾತನಾಡಿದ ಶಾಸಕ ಜ್ಯೋತಿಗಣೇಶ್‌, ಈಗಿರುವ ಚಿಕಿತ್ಸಾ ಪದ್ಧತಿಯನ್ನು ಬದಲಾಯಿಸಬೇಕಾದ ಅನಿವಾರ್ಯತೆ ಇದೆ. ನಮ್ಮ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಲ್ಲಿಯೇ ಚಿಕಿತ್ಸೆ ನೀಡಲು ಅಗತ್ಯವಾದ ಸಂಶೋಧನೆಯನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.

ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿ.ಸಿ.ರುದ್ರಪ್ರಸಾದ್‌ ಅವರು, ನಗರದ ಶಿರಾಗೇಟ್‌ನಲ್ಲಿ 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಂಡು 2 ವರ್ಷ ಕಳೆದರೂ ಉದ್ಘಾಟನೆಯಾಗದೇ ನೆನೆಗುಂದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ತಜ್ಞ ವೈದ್ಯರಿದ್ದು, ಆಸ್ಪತ್ರೆಯನ್ನು ಶೀಘ್ರವಾಗಿ ಉದ್ಘಾಟಿಸುವ ಮೂಲಕ ರೈತರಿಗೆ ಉಪಯೋಗವಾಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಾಗಾರದಲ್ಲಿ ಪಶು ವೈದ್ಯಕೀಯ ತಜ್ಞ ಡಾ.ಪಿ.ಮನೋಹರ್‌ ಉಪಾಧ್ಯ ಉಪನ್ಯಾಸ ನೀಡಿದರು.

ಈ ವೇಳೆ ಪಶು ಇಲಾಖೆ ಉಪನಿರ್ದೇಶಕ ಡಾ.ಎಲ್‌.ಪ್ರಕಾಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಶುವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಆರ್‌.ಎಂ.ನಾಗಭೂಷಣ, ಉಪಾಧ್ಯಕ್ಷ ಡಾ.ಎ.ಸಿ.ದಿವಾಕರ್‌, ಡಾ.ಮಹದೇವಯ್ಯ, ಡಾ.ಬಿ.ಆರ್‌.ನಂಜೇಗೌಡ, ಡಾ.ಶಶಿಕಲಾ ಎಚ್‌., ಡಾ.ಶಶಿಕಾಂತ್‌ ಬೂದಿಹಾಳ್‌ ಸೇರಿದಂತೆ ಜಿಲ್ಲೆಯ ಪಶು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು. 
 

Follow Us:
Download App:
  • android
  • ios