ಇಳಿದ ತರಕಾರಿ ಬೆಲೆ: ಗ್ರಾಹಕ ಖುಷ್!
ಹಲವು ದಿನಗಳಿಂದ ತರಕಾರಿ ದರ ಏರಿಕೆಯ ಚಿಂತೆಯಲ್ಲಿದ್ದ ಗ್ರಾಹಕರ ಮೊಗದಲ್ಲಿ ನಗೆ ಮೂಡಿದ್ದರೆ, ಉತ್ತಮ ಬೆಳೆಗೆ ಬೆಲೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ.
ಬೆಂಗಳೂರು (ಏ.04): ಯುಗಾದಿ ಹಬ್ಬ ಸಮೀಪಿಸುತ್ತಿದ್ದಂತೆ ಹಣ್ಣು-ತರಕಾರಿ, ಹೂವುಗಳ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದ ಹಲವು ದಿನಗಳಿಂದ ದರ ಏರಿಕೆಯ ಚಿಂತೆಯಲ್ಲಿದ್ದ ಗ್ರಾಹಕರ ಮೊಗದಲ್ಲಿ ನಗೆ ಮೂಡಿದ್ದರೆ, ಉತ್ತಮ ಬೆಳೆಗೆ ಬೆಲೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ.
ನಗರದ ಮಾರುಕಟ್ಟೆಗಳಲ್ಲಿ ಪ್ರದೇಶವಾರು ತರಕಾರಿ-ಹಣ್ಣಿನ ಬೆಲೆಯಲ್ಲಿ ವ್ಯತ್ಯಾಸವಿದೆ. ಪ್ರಮುಖ ಕೆ.ಅರ್.ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, ಕೆಲ ತರಕಾರಿಗಳು 20-30 ರು. ಒಳಗೆ ದೊರೆಯುತ್ತಿವೆ. ಆರು ತಿಂಗಳ ಹಿಂದೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 80-100 ರು. ಇದ್ದ ಕ್ಯಾರೆಟ್ ದರ ಇದೀಗ 10 ರು.ಗೆ ತಲುಪಿದೆ. ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. ಆದರೆ ಹೊರ ರಾಜ್ಯಗಳಿಗೆ ಹೋಗುತ್ತಿಲ್ಲ. ಅಲ್ಲದೆ ಹೆಚ್ಚು ಕಾರ್ಯಕ್ರಮಗಳಿಲ್ಲದೆ ಸ್ಥಳೀಯವಾಗಿಯೂ ಬೇಡಿಕೆ ಕುಸಿದಿದೆ. ಹೀಗಾಗಿ ಬೆಲೆ ಇಳಿಕೆಯಾಗಿದೆ.
ಈ ತರಕಾರಿ ಬೆಲೆ 1ಕೆಜಿಗೆ 1 ಲಕ್ಷ ರೂಪಾಯಿ; ಸುಳ್ಳು ಎನ್ನುತ್ತಿದೆ ವರದಿ!
ಬೀನ್ಸ್, ಗೋರಿಕಾಯಿ, ಬೆಂಡೆಕಾಯಿ, ಮೂಲಂಗಿ, ಬೀಟ್ರೂಟ್, ಸೌತೆಕಾಯಿ, ನವಿಲುಕೋಸು ಹೀಗೆ ಯಾವುದೇ ತರಕಾರಿಗಳಿದ್ದರೂ ಕೆ.ಜಿ.ಗೆ 20 ರು. ಇದೆ. ಕಳೆದ ತಿಂಗಳು ಕೆ.ಜಿ.ಗೆ 30 ರು. ಇದ್ದ ಸೌತೆಕಾಯಿ ಬೆಲೆ 10 ರು. ಕಡಿಮೆಯಾಗಿದೆ. ಬೆಳ್ಳುಳ್ಳಿ, ಬಟಾಣಿ ಹೊರತುಪಡಿಸಿದರೆ ಬೇರಾವುದೇ ತರಕಾರಿ 30 ರು. ದಾಟಿಲ್ಲ. ಬಾಳೆಹಣ್ಣಿನ ದರವೂ ಇಳಿಕೆಯಾಗಿದೆ. ಪಚ್ಚಬಾಳೆ ಕೆ.ಜಿ.ಗೆ 20 ರು. ಇದ್ದರೆ, ಏಲಕ್ಕಿ ಬಾಳೆ 30-40ಕ್ಕೆ ಮಾರಾಟವಾಗುತ್ತಿದೆ. ಮೂಸಂಬಿ, ಸೇಬು, ದ್ರಾಕ್ಷಿ, ಕಿತ್ತಲೆ ಸೇರಿದಂತೆ ವಿವಿಧ ಹಣ್ಣುಗಳು ಸಹ ಕಡಿಮೆ ಬೆಲೆಗೆ ಖರೀದಿಯಾಗುತ್ತಿವೆ.
ಹೂವಿಗೆ ಬೇಡಿಕೆ ಕುಸಿತ!
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲ ಬೇಗೆ ಸಹ ಹೂವಿನ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಸದ್ಯ ಯಾವುದೇ ಹಬ್ಬ ಹರಿದಿನಗಳು ಇಲ್ಲದಿರುವುದರಿಂದ ಹೂವುಗಳಿಗೆ ಬೇಡಿಕೆ ಇಲ್ಲ. ಹೀಗಾಗಿ ಮಾರುಕಟ್ಟೆಗಳಲ್ಲಿ ಗುಲಾಬಿ, ಸೇವಂತಿ ಹೂವನ್ನು ಕೇಳುವವರಿಲ್ಲ. ಗುಲಾಬಿ ಕೆ.ಜಿ. .10, ಸೇವಂತಿ ಕೆ.ಜಿ. .40, ಮಲ್ಲಿಗೆ ಹೂವು .80ರಿಂದ .100ಕ್ಕೆ ಮಾರಾಟವಾಗುತ್ತಿದೆ.
ಹೂವಿನ ಬೆಳೆ ಹಾಗೂ ಬೆಲೆ ಒಂದು ರೀತಿಯ ಜೂಜು ಇದ್ದಂತೆ. ಉತ್ತಮ ಇಳುವರಿ ಇದ್ದಾಗ ಕೆಲವೊಮ್ಮೆ ಬೆಲೆ ಸಿಗುತ್ತದೆ. ಹಾಗೆ ಬೆಲೆ ಇಲ್ಲದೆಯೂ ರೈತರು ನಷ್ಟಕ್ಕೆ ಗುರಿಯಾಗುತ್ತಾರೆ. ಹೂವು ಬೆಳೆಯುವುದು, ಕಟಾವು, ಸರಬರಾಜು, ಸಂರಕ್ಷಣೆ ಸೇರಿದಂತೆ ಎಲ್ಲವೂ ಕಷ್ಟಕರ. ಈಗ ಕೂಲಿ ಸಹ ಹೆಚ್ಚಳವಾಗಿದೆ. ಬೇಸಿಗೆಯಲ್ಲಿ ಹೂವು ಬಿಡಿಸಲು ಕೂಲಿಕಾರ್ಮಿಕರು ದೊರೆಯುವುದಿಲ್ಲ. ಇದರ ಮಧ್ಯೆ ಮಾರುಕಟ್ಟೆಯಲ್ಲಿ ಬೆಲೆಯೂ ಇಲ್ಲದಂತಾಗಿದೆ ಎಂದು ಹೂವಿನ ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಕೆ.ಆರ್.ಮಾರುಕಟ್ಟೆಯಲ್ಲಿ ಶೇ.30ರಷ್ಟುವ್ಯಾಪಾರ ಕುಗ್ಗಿದೆ. ಮುಂಜಾನೆಯಿಂದ ಸಾಧಾರಣವಾಗಿ ವ್ಯಾಪಾರ ವಹಿವಾಟು ನಡೆಯುತ್ತದೆ. ಆದರೆ, ಮಧ್ಯಾಹ್ನದ ನಂತರ ಖರೀದಿಸುವವರ ಸಂಖ್ಯೆ ಇಳಿಕೆಯಾಗುತ್ತದೆ. ಇದೀಗ ಹೂವಿನ ಬೆಲೆ ಸಾಕಷ್ಟುಕುಸಿದಿದೆ.
-ಎಸ್.ದಿವಾಕರ್, ಅಧ್ಯಕ್ಷ, ಕೆ.ಆರ್.ಮಾರುಕಟ್ಟೆಸಗಟು ಹೂವು ಮಾರಾಟಗಾರರ ಸಂಘ.