ಜಾತಿ ಗಣತಿ ವರದಿಯನ್ನು ನೋಡಿದರೆ ಆಶ್ಚರ್ಯ ಆಗುತ್ತದೆ. ಈ ಸಮಾಜ ಕವಲುದಾರಿಯಲ್ಲಿ ಹೋಗುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಕಳವಳ ವ್ಯಕ್ತಪಡಿಸಿದರು.

ಮೈಸೂರು : ಜಾತಿ ಗಣತಿ ವರದಿಯನ್ನು ನೋಡಿದರೆ ಆಶ್ಚರ್ಯ ಆಗುತ್ತದೆ. ಈ ಸಮಾಜ ಕವಲುದಾರಿಯಲ್ಲಿ ಹೋಗುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಕಳವಳ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ನಗರದ ಕಲಾಮಂದಿರದಲ್ಲಿ ಭಾನುವಾರ ಬಸವ ಬಳಗಗಳ ಒಕ್ಕೂಟವು ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬುದ್ಧಿವಂತರಿದ್ದರೆ ಅವರನ್ನು ಮೂಲೆಗುಂಪು ಮಾಡುವ ಕೆಲಸ ನಡೆಯುತ್ತಿದೆ. ಕರ್ನಾಟಕದಲ್ಲಿ ಜಾತಿ ಗಣತಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಜಾತಿ ಗಣತಿ ವರದಿ ನೋಡಿದರೆ ಆಶ್ಚರ್ಯವಾಗುತ್ತದೆ. ನೀವು ಒಗ್ಗಟ್ಟಾಗಬೇಕು. ಇಲ್ಲದಿದ್ದರೆ ಹೇಳುವವರು, ಕೇಳುವವರು ಇಲ್ಲದಂತಾಗುತ್ತದೆ. ನಮ್ಮಲ್ಲಿ ಎಲ್ಲವೂ ಇದೆ. ಆದರೆ ಅವಕಾಶ ಬಂದಾಗ ಕಣ್ಣುಮುಚ್ಚಿ ಕುಳಿತುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ನಾನು ನಿಷ್ಟುರವಾಗಿ ಮಾತನಾಡುತ್ತೇನೆ. ಆದರಿಂದ ಏನಾಗಿದೆ ಎಂಬ ಬಗ್ಗೆ ಚರ್ಚೆ ಬೇಡ. ಕಷ್ಟಪಟ್ಟು ಬೆಂಗಳೂರಿನಲ್ಲಿ ಬೆಳೆದಿದ್ದೇನೆ. ನಾನು ಕೆಲಸಗಾರ ಎಂಬ ಭಾವನೆ ಇದೆ. ತಮಿಳುನಾಡಿಗೆ ಹೋಗಿದ್ದಾಗ ಅಲ್ಲಿನ ಮಂತ್ರಿ ಕೇಳಿದರು.

ಗೋವಿಂದರಾಜನಗರ ಯಾಕೆ ಬಿಟ್ಟಿದ್ದೀರಿ ಅಂದರು. ಆದರೆ ನಾನು ಕ್ಷೇತ್ರ ಬಿಡಲಿಲ್ಲ, ನನ್ನನ್ನುಬೇರೆ ಕ್ಷೇತ್ರಕ್ಕೆ ಕಳುಹಿಸಿದರು. ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ 10 ಬಾರಿ ಗೆದಿದ್ದಾರೆ. ಪ್ರತಿ ಬಾರಿಯೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಅಂತೆಯೇ ಮುಂದೆ ನೀವು ಬೇರೆ ಬೇರೆ ಕ್ಷೇತ್ರಕ್ಕೆ ಹೋಗಿ. ಸೋಲಿನಿಂದ ಧೃತಿಗೆಡಬೇಡಿ ಎಂದು ಸಲಹೆ ನೀಡಿರುವುದಾಗಿ ಅವರು ಹೇಳಿದರು.

ಬಿಜೆಪಿಗೆ ಬರುವವರೆಗೆ ನಾನು ಸೋತೆ ಇಲ್ಲ. ಬಿಜೆಪಿಗೆ ಬಂದಾಗ ನಾನು 4 ಬಾರಿ ಸೋತೆ. ಕಾಂಗ್ರೆಸ್‌ನಲ್ಲಿ ನಿಂತು ಗೆದ್ದಿದ್ದೇನೆ. ಸ್ವತಂತ್ರ ಅಭ್ಯರ್ಥಿಯಾಗಿ 2 ಬಾರಿ ಗೆದ್ದಿದ್ದೇನೆ. ಬಿಜೆಪಿ ಬಂದು ಸೋತೆ. ನಾನು ಏನಾಗಿ ಬಿಡುತ್ತೇನೋ ಎಂಬ ಭಯದಲ್ಲಿ ಸೋಲಿಸಿದ್ದಾಗಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆ ರಾಷ್ಟ್ರದ ಪ್ರತಿಷ್ಟಿತ ಜಿಲ್ಲೆ. ಶರಣರ ಆದರ್ಶಗಳನ್ನು ನಾವು ಬಸವ ಕಲ್ಯಾಣಕ್ಕೆ ಹೋದಾಗ ನೆನಪಿಸಿಕೊಳ್ಳುತ್ತೇವೆ. ಹಲವಾರು ವರ್ಷಗಳಿಂದ ಬಸವಕಲ್ಯಾಣಕ್ಕೂ ನನಗೂ ಸಂಬಂಧ ಇದೆ. ಬಸವಣ್ಣನವರ ಆದರ್ಶಪ್ರಾಯವಾದ ಚಿಂತನೆ ಇಂದಿಗೂ ಅಗತ್ಯವಿದೆ. ಅನೇಕ ವಿಚಾರ ಮಾತನಾಡಿದರೆ ಕೆಲವರಿಗೆ ಕಸಿವಿಸಿಯಾಗುತ್ತೆ. ಒಬ್ಬನೇ ಒಬ್ಬ ಸೋಮಣ್ಣ ಸಣ್ಣ ಅಪಾಚಾರವನ್ನೂ ಮಾಡದೆ ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದೇನೆ. ಇದಕ್ಕೆ ಕಾರಣ ನಮ್ಮ ಗುರುಗಳು ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ದೇವನೂರು ಮಠದ ಶ್ರೀ ಮಹಂತಸ್ವಾಮೀಜಿ, ಡಾ. ಶರತ್ಚಂದ್ರ ಸ್ವಾಮೀಜಿ, ಬೆಟ್ಟದಪುರ ಶ್ರೀಗಳು ಮೊದಲಾದವರು ಇದ್ದರು.