ಮಾಜಿ ಸಚಿವ ವರ್ತೂರು ಪ್ರಕಾಶ್‌ ಅಪಹರಣ ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿರುವ ಕಾರು ಚಾಲಕ ಈ ಬಗ್ಗೆ ವಿಚಾರೊಂದನ್ನು ಬಿಚ್ಚಿಟ್ಟಿದ್ದಾರೆ. ಏನದು ಆ ವಿಚಾರ

 ಕೋಲಾರ (ಡಿ.05): ಮಾಜಿ ಸಚಿವ ವರ್ತೂರು ಪ್ರಕಾಶ್‌ ಅಪಹರಣ ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿರುವ ಕಾರು ಚಾಲಕ ಸುನೀಲ್‌ ಅವರನ್ನು ಪೊಲೀಸರು ಶುಕ್ರವಾರ ವಿಚಾರಣೆಗೊಳಪಡಿಸಿದ್ದು, ಅಪಹರಣಕಾರರು ಲಾಂಗಿನಿಂದ ಹೊಡೆದಾಗ ಸತ್ತಂತೆ ನಟಿಸಿ ತಪ್ಪಿಸಿಕೊಂಡೆ ಎಂದು ತಿಳಿಸಿದ್ದಾನೆ. ರಾಜ್ಯಾದ್ಯಂತ ಸಂಚಲನವನ್ನುಂಟು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಅವರು ಅನೇಕ ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಕನ್ನಡ ಹಾಗೂ ತಮಿಳು ಭಾಷೆ ಮಾತನಾಡುತ್ತಿದ್ದ ಅಪಹರಣಕಾರರು ಶುಕ್ರವಾರ ರಾತ್ರಿ ಯಾವುದೇ ಜಾಗಕ್ಕೆ ನಮ್ಮನ್ನು ಕರೆದುಕೊಂಡು ಹೋದರು. ಅಲ್ಲಿ ನಾನು ಊಟ ಮಾಡುವುದಿಲ್ಲ ಎಂದು ಅಪಹರಣಕಾರರಿಗೆ ಹೇಳಿದ್ದಕ್ಕೆ ತೀವ್ರವಾಗಿ ಲಾಂಗ್‌ ತಿರುಗಿಸಿ ಹೊಡೆದರು. ಆಗ ನಾನು ಸತ್ತಂತೆ ನಟನೆ ಮಾಡಿ ತೊಗರಿ ಬೆಳೆತೋಟದಲ್ಲಿ ಅವಿತುಕೊಂಡು ಅಲ್ಲಿಂದ ತಪ್ಪಿಸಿಕೊಂಡೆ.

ಪ್ರಕಾಶ್ ಕಾರಿನಲ್ಲಿ ಸಿಕ್ಕ ದುಪ್ಪಟ್ಟಾ ಹೇಳಿದ ವರ್ತೂರು 'ಆ' ರಹಸ್ಯ! .

ನಾನು ಅಲ್ಲಿಂದ ನಡೆದು ಒಂದು ಗ್ರಾಮಕ್ಕೆ ಬಂದು ಗ್ರಾಮದವರು ಕೊಟ್ಟ.200 ರು. ನೆರವಿನಿಂದ ಶ್ರೀನಿವಾಸಪುರಕ್ಕೆ ಬಂದು ಅಲ್ಲಿಂದ ಕೋಲಾರಕ್ಕೆ ಬಸ್‌ನಲ್ಲಿ ಬಂದೆ. ನಾನು ತಪ್ಪಿಸಿಕೊಳ್ಳಲಿಲ್ಲ ಅಂದಿದ್ದರೆ ನನ್ನನ್ನು ಸಾಯಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಬೆಂಗಳೂರು ಮೂಲದವರಿಂದ ಕೃತ್ಯ: ವರ್ತೂರು ಸ್ಪಷ್ಟನೆ

ಕೋಲಾರ: ತನ್ನ ಮಗ ಅಪಹರಣ ಕೃತ್ಯ ನಡೆಸಿದ್ದಾನೆ ಎಂಬ ವದಂತಿಗಳನ್ನು ಅಲ್ಲಗೆಳೆದಿರುವ ವರ್ತೂರು ಪ್ರಕಾಶ್‌, ಬೆಂಗಳೂರು ಮೂಲದ ದರೋಡೆಕೋರರು ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಎಸ್ಪಿ ಕಾರ್ತಿಕ ರೆಡ್ಡಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನನ್ನ ಮಗ ಹಾಗೂ ನನ್ನ ಫಾರಂ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದವರು ಈ ರೀತಿಯಾಗಿ ಮಾಡಿದ್ದಾರೆಂಬ ಸುದ್ದಿ ಹರಡಿದ್ದು ಅದು ಸುಳ್ಳು ಎಂದರು. ಮಗ ಎಲ್ಲಿಯಾದರೂ ತಂದೆ ಕೊಲೆ ಮಾಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಹೆಣ್ಣು, ಜಮೀನು, ಹಸು ಸಾಲ, ದ್ವೇಷದ ವಿಚಾರಗಳಿಗೆ ನನ್ನ ಅಪಹರಣ ಆಗಿಲ್ಲ. ನನ್ನ ಹತ್ತಿರ ಹಣ ಇದೆ ಎಂದು ಅಪಹರಣ ಮಾಡಿದ್ದಾರೆ. ಬೆಂಗಳೂರು ಮೂಲದ ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ. ಚಾಲಕ ತಪ್ಪಿಸಿಕೊಳ್ಳದಿದ್ದರೆ ನನ್ನ ಕೊಲೆಯಾಗುತಿತ್ತು ಎಂದರು.