ಮೀಸಲಾತಿ ಹೆಚ್ಚಳಕ್ಕೆ ಬಿಜೆಪಿಗೆ ವಾಲ್ಮೀಕಿ ಸಮಾಜ ಕೃತಜ್ಞ ಬಳ್ಳಾರಿಯಲ್ಲಿ ಬೃಹತ್‌ ಎಸ್ಟಿಸಮಾವೇಶ ಚಿತ್ರದುರ್ಗದಲ್ಲಿ ಸಚಿವ ಬಿ.ಶ್ರೀರಾಮುಲು ಹೇಳಿಕೆ

ಚಿತ್ರದುರ್ಗ (ಅ.29) : ನಾಯಕ ಸಮಾಜದ ಮೀಸಲಾತಿಯನ್ನು ಶೇ.3.5 ರಿಂದ ಶೇ.7 ಕ್ಕೆ ಹೆಚ್ಚಿಸಿದ ಬಿಜೆಪಿ ವರಿಷ್ಠರ ಕ್ರಮಕ್ಕೆ ವಾಲ್ಮೀಕಿ ಸಮಾಜ ಕೃತಜ್ಞವಾಗಿದೆ . ಈ ಸಂಬಂಧ ನವೆಂಬರ್‌ 29ರಂದು ಬಳ್ಳಾರಿಯಲ್ಲಿ ಬೃಹತ್‌ ಸಮಾವೇಶ ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಕೃತಜ್ಞತೆ ಸಲ್ಲಿಸಲಾಗುವುದೆಂದರು.

ವಾಲ್ಮೀಕಿ ಮೀಸಲಾತಿ ಆಯ್ತು, ಈಗ ಕುರುಬ, ಬ್ರಾಹ್ಮಣ ಮಿಸಲಾತಿ ಕೂಗೆಬ್ಬಿಸಿದ ಯತ್ನಾಳ್

ಎಸ್ಟಿಸಮಾವೇಶದ ಹಿನ್ನೆಲೆ ಶುಕ್ರವಾರ ಇಲ್ಲಿನ ಎಸ್‌ಎಸ್‌ಕೆಸ್‌ ಸಮುದಾಯ ಭವನದಲ್ಲಿ ನಡೆದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ಐದು ಲಕ್ಷಕ್ಕೂ ಹೆಚ್ಚು ನಾಯಕ ಸಮಾಜದ ಜನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಮೀಸಲಾತಿ ಹೆಚ್ಚಳಕ್ಕಾಗಿ ಅನೇಕ ವರ್ಷಗಳಿಂದಲೂ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗಿದ್ದು, ಸಮಾಜದ ಪ್ರಸನ್ನಾನಂದಪುರಿ ಸ್ವಾಮಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸಿದ ಫಲವಾಗಿ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸಿದೆ. ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಯಿಂದ ಐದು ಲಕ್ಷ ಜನ ನಾಯಕ ಸಮಾಜದವರು ಬಳ್ಳಾರಿ ಸಮಾವೇಶಕ್ಕೆ ಆಗಮಿಸಿ ಬಿಜೆಪಿ ನಾಯಕರಿಗೆ ಕೃತಜ್ಞತೆ ವ್ಯಕ್ತಪಡಿಸಲಿದ್ದಾರೆ ಎಂದರು.

ಮಾಜಿ ಸಚಿವ ಶಿವನಗೌಡ ನಾಯಕ ಮಾತನಾಡಿ, ಮೀಸಲಾತಿ ಹೆಚ್ಚಿಸುವುದೆಂದರೆ ಸುಲಭದ ಕೆಲಸವಲ್ಲ. ನಾಯಕ ಸಮುದಾಯ ಸಂಪೂರ್ಣವಾಗಿ ಬಿಜೆಪಿ ಬೆಂಬಲಿಸಲಿದೆ ಎನ್ನುವ ಭಯ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಇವರುಗಳನ್ನು ಕಾಡುತ್ತಿದೆ. ಹಾಗಾಗಿ ಮೀಸಲಾತಿ ಹೆಚ್ಚಿಸಿರುವ ಬಗ್ಗೆ ಹಗುರವಾದ ಮಾತುಗಳನ್ನಾಡುತ್ತಿದ್ದಾರೆಂದು ಆರೋಪಿಸಿದರು.

ಶಾಸಕ ಜಿ.ಹೆಚ್‌.ತಿಪ್ಪಾರೆಡ್ಡಿ ಮಾತನಾಡಿ, ಬಿಜೆಪಿ ಎಂದರೆ ಕೇವಲ ಮುಂದುವರೆದ ಜನಾಂಗಕ್ಕೆ ಸೇರಿದ ಪಕ್ಷ ಎನ್ನುವ ಭಾವನೆಯಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಪ್ರತಿ ಮನೆ, ಹಳ್ಳಿಗಳಲ್ಲಿ ಬಿಜೆಪಿಯಿದೆ. ಶ್ಯಾಂಪ್ರಸಾದ್‌ ಮುಖರ್ಜಿ, ಪಂಡಿತ್‌ ದೀನ್‌ದಯಾಳ್‌ ಇವರುಗಳು ಕಟ್ಟಿಬೆಳೆಸಿರುವ ಪಕ್ಷಕ್ಕೆ ತನ್ನದೆ ಆದ ಸಿದ್ಧಾಂತವಿದೆ. ಪಕ್ಷಕ್ಕೆ ನಿಷ್ಠರಾಗಿ ದುಡಿದವರನ್ನು ಹುಡುಕಿ ಅಧಿಕಾರ ಕೊಡುವ ಏಕೈಕ ಪಕ್ಷ ಬಿಜೆಪಿ ಎಂದು ಬಣ್ಣಿಸಿದರು.

ಕಳೆದ ನಲವತ್ತು ವರ್ಷಗಳಿಂದಲೂ ನಾಯಕ ಜನಾಂಗ ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟ ಮಾಡಿಕೊಂಡು ಬಂದರೂ ಇಲ್ಲಿಯವರೆಗೂ ಅಧಿಕಾರ ನಡೆಸಿದ ಕಾಂಗ್ರೆಸ್‌ ಈ ಸಮುದಾಯದವರನ್ನು ಕೇವಲ ಮತಕ್ಕಾಗಿ ಬಳಸಿಕೊಂಡಿದ್ದನ್ನು ಬಿಟ್ಟರೆ ಯಾವ ಅನುಕೂಲ ಮಾಡಲಿಲ್ಲ. ಗುಡ್ಡಗಾಡಿನ ಹೆಣ್ಣು ಮಗಳು ದ್ರೌಪದಿ ಮುರ್ಮುರವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ನಾಗಮೋಹನ್‌ದಾಸ್‌ ಸಮಿತಿ ನೀಡಿದ ವರದಿ ಹಾಗೂ ಪ್ರಸನ್ನಾನಂದ ಸ್ವಾಮೀಜಿ ಪಟ್ಟುಬಿಡದೆ ನಡೆಸಿದ ಧರಣಿಗೆ ರಾಜ್ಯ ಸರ್ಕಾರ ಕೇಂದ್ರದ ಒಪ್ಪಿಗೆ ಪಡೆದು ಮೀಸಲಾತಿಯನ್ನು ಹೆಚ್ಚಿಸಿದೆ ಎಂದರು.

ನನಗೆ ಅಧಿಕಾರಕ್ಕಿಂತ, ಸಮಾಜ ಮುಖ್ಯ : ಶ್ರೀರಾಮುಲು

ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಮಾತನಾಡಿ, ಬಳ್ಳಾರಿ ಎಸ್‌ಟಿ ಸಮಾವೇಶದಲ್ಲಿ ರಾಜ್ಯ ಹಾಗೂ ರಾಷ್ಟ್ರ ನಾಯಕರುಗಳು ಆಗಮಿಸಲಿರುವುದರಿಂದ ಜಿಲ್ಲೆಯಿಂದ ನಾಯಕ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ತೆರಳಬೇಕು. ಮುಖ್ಯಮಂತ್ರಿಗೆ ಅಭಿನಂದಿಸುವ ಈ ಸಮಾವೇಶದಲ್ಲಿ ಜಿಲ್ಲೆಯಿಂದ ಒಂದು ಲಕ್ಷದಷ್ಟುನಾಯಕ ಸಮಾಜದವರು ಸಮಾವೇಶದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜ್‌ ಹವಾಲ್ದಾರ್‌, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜೈಪಾಲ್‌, ನರೇಂದ್ರ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಶಿವಣ್ಣ, ಯುವ ಮುಖಂಡ ಅನಿತ್‌ಕುಮಾರ್‌, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್‌, ಜೈರಾಂ, ನರಸಿಂಹ ನಾಯಕ, ಹೇಮಲತ ವೇದಿಕೆಯಲ್ಲಿದ್ದರು.