Asianet Suvarna News Asianet Suvarna News

ಎಲ್ಲಾ ಇಲಾಖೆಯ ಅನುದಾನವನ್ನು ಸರಿಯಾಗಿ ಸದ್ಬಳಕೆ ಮಾಡಿ

ಎಲ್ಲಾ ಇಲಾಖೆಯ ಅಧಿಕಾರಿಗಳು ಕೇವಲ ತಮ್ಮ ಇಲಾಖೆಗೆ ಬರುವ ಅನುದಾನವನ್ನು ಖರ್ಚು ಮಾಡುವುದಷ್ಟೆ ನಿಮ್ಮ ಕೆಲಸವಲ್ಲ. ಆ ಅನುದಾನವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು. ಕೆಲಸ ಮಾಡಬೇಕು. ಜನರಿಗೆ ಅದರಿಂದ ಅನುಕೂಲವಾಗಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹೇಳಿದರು

Utilize all departmental grants properly snr
Author
First Published Jun 29, 2023, 5:44 AM IST

  ಶಿರಾ :  ಎಲ್ಲಾ ಇಲಾಖೆಯ ಅಧಿಕಾರಿಗಳು ಕೇವಲ ತಮ್ಮ ಇಲಾಖೆಗೆ ಬರುವ ಅನುದಾನವನ್ನು ಖರ್ಚು ಮಾಡುವುದಷ್ಟೆ ನಿಮ್ಮ ಕೆಲಸವಲ್ಲ. ಆ ಅನುದಾನವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು. ಕೆಲಸ ಮಾಡಬೇಕು. ಜನರಿಗೆ ಅದರಿಂದ ಅನುಕೂಲವಾಗಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹೇಳಿದರು.

ನಗರದ ತಾ.ಪಂ. ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಾಮಾನ್ಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಮಗಾರಿಗಳ ಗುಣಮಟ್ಟವನ್ನು ಅಧಿಕಾರಿಗಳು ಖುದ್ದು ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿಯಾಗದಂತೆ ಕೆಲಸ ನಿರ್ವಹಿಸಿ. ತಪ್ಪಿದರೆ ಶಿಸ್ತುಕ್ರಮಕ್ಕೆ ಮುಂದಾಗುತ್ತೇನೆ. ಶಾಲೆ, ಅಂಗನವಾಡಿ, ರಸ್ತೆ, ಸೇತುವೆ ಕಾಮಗಾರಿಗಳ ಗುಣಮಟ್ಟವನ್ನು ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲಿಸಬೇಕು. ಗುಣಮಟ್ಟದಿಂದ ಕೆಲಸ ಮಾಡದವರನ್ನು ಬದಲಾಯಿಸಿ ಉತ್ತಮ ಗುತ್ತಿಗೆದಾರರಿಗೆ ಕೆಲಸಗಳನ್ನು ಮಾಡಲು ನೀಡಬೇಕು ಎಂದು ತಿಳಿಸಿದರು.

ತಾಲೂಕಿನಲ್ಲಿ ಇತ್ತೀಚೆಗೆ ಅಂತರ್ಜಲ ಹೆಚ್ಚಾಗಿರುವ ಕಾರಣ ನೀರಿನ ಕೊರತೆ ಇಲ್ಲದೆ ಇರುವುದರಿಂದ ಅಡಿಕೆ ಬೆಳೆಯನ್ನು ಹೆಚ್ಚಾಗಿ ಇಡುತ್ತಿದ್ದಾರೆ. ಆದ್ದರಿಂದ ತೋಟಗಾರಿಕೆ ಅಧಿಕಾರಿಗಳು ಅಂತಹ ರೈತರಿಗೆ ಮನವರಿಕೆ ಮಾಡಿ ಅಡಿಕೆ ಬೆಳೆಯ ಬದಲು ತರಕಾರಿ, ಹಣ್ಣು ಬೆಳೆಯುವ ಬಗ್ಗೆ ಮಾಹಿತಿ ನೀಡಿ. ಶಿರಾ ನಗರದಲ್ಲಿ ಒಂದು ತೋಟಗಾರಿಕಾ ಇಲಾಖೆಯಿಂದ ಹಾಪ್‌ಕಾಮ್ಸ್‌ ಮಳಿಗೆ ತೆರೆದು ಈ ಮಳಿಗೆಯಲ್ಲಿ ತಾಲೂಕಿನಲ್ಲಿ ಬೆಳೆದ ರೈತರಿಂದಲೇ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಿ ಎಂದು ತಿಳಿಸಿದರು.

ಕಳೆದ ಬಾರಿ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಕಳ್ಳಂಬೆಳ್ಳ ಹಾಗೂ ಯಲಿಯೂರಿನಲ್ಲಿ ಸುಮಾರು 20 ಕ್ಕೂ ಹೆಚ್ಚು ಗ್ರಾಮಗಳಿಗೆ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಸ್ಥಾಪಿಸಿದ್ದ ಯೋಜನೆಗೆ ಇದುವರೆಗೂ ಏಕೆ ಚಾಲನೆ ನೀಡಿಲ್ಲ. ಸುಮಾರು 35 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ಯೋಜನೆಯನ್ನು ಜನರಿಗೆ ಏಕೆ ಸದ್ಬಳಕೆ ಮಾಡಿಲ್ಲ ಎಂದು ಸಂಬಂಧಪಟ್ಟಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಶೀಘ್ರವಾಗಿ ಚಾಲನೆ ನೀಡಲು ಕ್ರಮಕೈಗೊಳ್ಳಿ ಎಂದರು.

ಶಿರಾ ತಾಲೂಕಿನ ಹಲವು ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯಲು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು, ಕೆಲವು ಕೆಟ್ಟುಹೋಗಿರುವ ಹಿನ್ನೆಲೆಯಲ್ಲಿ ಶುದ್ಧಿ ಕುಡಿಯುವ ನೀರನ್ನು ಸರಬರಾಜು ಮಾಡಲು ಆಗುತ್ತಿಲ್ಲ. ಆದ್ದರಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಪಡಿಸಿಕೊಡುವಂತೆ ಅಧಿಕಾರಿಗಳು ಮನವಿ ಮಾಡಿದರು.

ಸಭೆಯಲ್ಲಿ ತಾ.ಪಂ. ಆಡಳಿತಾಧಿಕಾರಿ ಅನುಪಮ, ಕಾರ್ಯನಿರ್ವಹಣಾಧಿಕಾರಿ ಅನಂತರಾಜು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

2 ತಿಂಗಳಿಗೊಮ್ಮೆ ರೈತರ ಸಭೆ ನಡೆಸಿ

ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನಾ ಇಲಾಖೆಯಿಂದ ತಮ್ಮ ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಪ್ರಗತಿ ಪರರೈತರ ಸಂಘವನ್ನು ಮಾಡಿ ಸುಮಾರು 100 ಜನರನ್ನು ಸದಸ್ಯರನ್ನಾಗಿ ಮಾಡಿ. ಪ್ರತಿ ಎರಡು ತಿಂಗಳಿಗೊಮ್ಮೆ ರೈತರ ಸಭೆ ಮಾಡಿ ನಾನೂ ಸಭೆಗೆ ಬರುತ್ತೇನೆ. ಪ್ರಗತಿ ಪರ ರೈತರಿಂದ ಕೆಲವು ಸಲಹೆಗಳನ್ನು ಪಡೆದು ಬೇರೆ ರೈತರಿಗೆ ಮಾಹಿತಿ ಕೊಡುವ ಕೆಲಸ ಮಾಡೋಣ ಎಂದರು.

Latest Videos
Follow Us:
Download App:
  • android
  • ios