ಕುರುಗೋಡು ತಾಲೂಕಿನಲ್ಲಿ ಮುಂಗಾರು ಮಳೆ ಸಂಪೂರ್ಣ ವಿಫಲವಾದ ಕಾರಣ, ಎಚ್.ವೀರಾಪುರ ಗ್ರಾಮದ ರೈತರೊಬ್ಬರು ತಮ್ಮ ಐದು ಎಕರೆ ಮೆಕ್ಕೆಜೋಳ ಬೆಳೆಯನ್ನು ಟ್ರ್ಯಾಕ್ಟರ್ ಬಳಸಿ ನಾಶಪಡಿಸಿದ್ದಾರೆ. ಕೊಳವೆಬಾವಿ ಇದ್ದರೂ, ಅನಿಯಮಿತ ವಿದ್ಯುತ್ ಕಡಿತ ಮತ್ತು ಅಂತರ್ಜಲ ಕುಸಿತದಿಂದ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದೆ, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಬಳ್ಳಾರಿ: ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಎಚ್.ವೀರಾಪುರ ಗ್ರಾಮದ ರೈತ ರಾಜಾಸಾಬ್ ಐದು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಯನ್ನು ಗುರುವಾರ ಟ್ರ್ಯಾಕ್ಟರ್ ಬಳಸಿ ನಾಶಪಡಿಸಿದರು.
ಮುಂಗಾರು ಪೂರ್ವ ಮಳೆಯಿಂದ ಪುಳಕಿತರಾಗಿದ್ದ ರೈತ ರಾಜಾಸಾಬ್ ಮೂರು ಎಕರೆ ಕೊಳವೆಬಾವಿ ಆಶ್ರಿತ ಭೂಮಿ ಮತ್ತು ಎರಡು ಎಕರೆ ಮಳೆಯಾಶ್ರಿತ ಭೂಮಿ ಸೇರಿ ಒಟ್ಟು ಐದು ಎಕರೆಯಲ್ಲಿ ಮೆಕ್ಕಜೋಳ ಬೆಳೆಯುವ ಪ್ರಯತ್ನ ಮಾಡಿದ್ದರು. ನಂತರ ದಿನಗಳಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ಬೆಳೆಯನ್ನು ಉಳಿಸಿಕೊಳ್ಳಲು ಕೊಳವೆ ಬಾವಿಯ ನೀರು ಹರಿಸಲು ಪ್ರಯತ್ನಿಸಿದ್ದಾರೆ.
ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕುಸಿತ
ಅನಿಯಮಿತ ವಿದ್ಯುತ್ ಕಡಿತ ಮತ್ತು ಅಂತರ್ಜಲ ಕೃಷಿಯಿಂದ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಕೈಗೆಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆ ಉಳಿಸಿಕೊಳ್ಳಲು ದಾರಿ ಕಾಣದೆ ಬೆಳೆಯನ್ನು ಟ್ರ್ಯಾಕ್ಟರ್ ಸಹಾಯ ದಿಂದ ನಾಶ ಮಾಡಿದ್ದಾರೆ.15 ದಿನಗಳ ಹಿಂದೆ ಮಳೆ ಬಂದಿದ್ದರೆ ಫಸಲು ಸಮೃದ್ಧವಾಗಿ ಬೆಳೆದು ಆಗಸ್ಟ್ ತಿಂಗಳ ಅಂತ್ಯದಲ್ಲಿ ಕಟಾವಿಗೆ ಬರುತ್ತಿತ್ತು.
ಎಕರೆಗೆ 50 ಕ್ವಿಂಟಲ್ ಇಳುವರಿ ನಿರೀಕ್ಷಿಸಲಾಗಿತ್ತು. ಕನಿಷ್ಠ ₹5 ಲಕ್ಷ ಮೌಲ್ಯದ ಮೆಕ್ಕೆಜೋಳ ದೊರೆಯುತ್ತಿತ್ತು. ಮಳೆ ಬಾರದ ಪರಿಣಾಮ ವೆಚ್ಚ ಮಾಡಿದ ₹2 ಲಕ್ಷದ ಜತೆಗೆ ಸಮಯ ಮತ್ತು ಶ್ರಮ ವ್ಯರ್ಥವಾಗಿದೆ ಎನ್ನುತ್ತಾರೆ ರೈತ ರಾಜಾ ಸಾಬ್.
ರೈತರಿಗೆ ಕೃಷಿ ನಿರ್ದೇಶಕರ ಸಲಹೆ
ಬೆಳೆ ಆ್ಯಪ್ನಲ್ಲಿ ರೈತರು ಸ್ವಯಂ ಬೆಳೆ ಸಮೀಕ್ಷೆ ಮಾಡಿಕೊಂಡರೆ ಮಾತ್ರ, ಅದರ ಆದಾರದಲ್ಲಿ ಬೆಳೆನಷ್ಟ ಪರಿಹಾರ ದೊರೆಯುತ್ತದೆ. ರೈತರು ಬೆಳೆನಾಶ ಮಾಡುವ ಮೊದಲು ಬೆಳೆ ಆ್ಯಪ್ನಲ್ಲಿ ಸ್ವಯಂ ಸಮೀಕ್ಷೆ ಮಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಗರ್ಜೆಪ್ಪ ಸಲಹೆ ನೀಡಿದ್ದಾರೆ.


