ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿಗೆ ಗೂಂಡಾಗಳ ಬಳಕೆ ಸಹಿಸಲ್ಲ: ಶಾಸಕ ಕೋಳಿವಾಡ
ಮೈಕ್ರೋ ಫೈನಾನ್ಸ್ಗಳು ಆರ್ಬಿಐ ನಿಯಮಾಳಿಗಳನ್ನು ಮೀರಿ ಬಡ್ಡಿ ಆಕರಿಸುವುದು ಹಾಗೂ ಸಾಲ ವಸೂಲಾತಿಗಾಗಿ ಗೂಂಡಾಗಳನ್ನು ಬಳಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ರಾಣಿಬೆನ್ನೂರು (ಫೆ.04): ಮೈಕ್ರೋ ಫೈನಾನ್ಸ್ಗಳು ಆರ್ಬಿಐ ನಿಯಮಾಳಿಗಳನ್ನು ಮೀರಿ ಬಡ್ಡಿ ಆಕರಿಸುವುದು ಹಾಗೂ ಸಾಲ ವಸೂಲಾತಿಗಾಗಿ ಗೂಂಡಾಗಳನ್ನು ಬಳಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ನಗರದ ನಗರಸಭೆ ಸಭಾಭವನದಲ್ಲಿ ಸೋಮವಾರ ಕರೆಯಲಾಗಿದ್ದ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು. ಮೈಕ್ರೋ ಫೈನಾನ್ಸ್ಗಳು ಸಮಾಜದ ಜವಾಬ್ದಾರಿಯುತ ಹಣಕಾಸು ಸಂಸ್ಥೆಗಳಾಗಿದ್ದು, ಬಡವರ ಅಭ್ಯುದಯಕ್ಕೆ ದಾಖಲಾತಿಯಿಲ್ಲದೆ ಸಾಲ ನೀಡುತ್ತಿರುವುದು ಒಳ್ಳೆಯ ಕೆಲಸ. ಹಾಗಂತ ಸಾಲ ವಸೂಲಾತಿಗೆ ಕಿರುಕುಳ ನೀಡುವುದು ಸರಿಯಲ್ಲ.
ಸಿಬಿಲ್ ಸ್ಕೂರ್ ಗಮನಿಸದೇ ಸಾಲ ನೀಡುವುದು ಸರಿಯಲ್ಲ. ಸಾಲಗಾರರಿಂದ ಶೇ. 36ರಷ್ಟು ಬಡ್ಡಿ ಆಕರಣೆ ಮಾಡುವುದು ತಪ್ಪು. ಯಾವ ವ್ಯವಹಾರದಲ್ಲಿಯೂ ಇಷ್ಟೊಂದು ಅಗಾಧ ಪ್ರಮಾಣದ ಲಾಭ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಸಾಲಗಾರರಿಗೆ ಕಿರುಕುಳ ನೀಡುತ್ತಿರುವ ವಿಷಯ ಗೊತ್ತಾದರೆ ತಕ್ಷಣವೇ ದೂರು ಬರುವ ಪೂರ್ವದಲ್ಲಿಯೇ ಕಿರುಕುಳ ನೀಡುತ್ತಿರುವವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದಲ್ಲದೆ ತಮ್ಮ ಪಿಕೆಕೆ (ಪಕ್ಷಾತೀತ ಕಾಯಕದ ಕನಸು) ಇನಿಷಿಯೇಟಿವ್ಸ್ ವತಿಯಿಂದ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಸಹಾಯವಾಣಿ ತೆರೆಯಾಗುವುದು.
ಯಾರಿಗಾದರೂ ಅಂತಹ ಸಮಸ್ಯೆ ಎದುರಾದಲ್ಲಿ ಸಹಾಯವಾಣಿ ಸಂಖ್ಯೆ 7483646820 ಕರೆ ಮಾಡಿದಲ್ಲಿ ತಕ್ಷಣ ಅವರಿಗೆ ಅಗತ್ಯ ನೆರವು ಕಲ್ಪಿಸಲಾಗುವುದು ಎಂದರು. ತಾಲೂಕಿನ ಚಂದಾಪುರ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಾಳಲಾರದೆ ಮೂರು ಜನರು ಗ್ರಾಮ ತೊರೆದಿದ್ದಾರೆ. ಆದ್ದರಿಂದ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಸಂಯಮದಿಂದ ಸಾಲ ವಸೂಲಿ ಮಾಡಬೇಕು ಎಂದರು. ತಹಸೀಲ್ದಾರ್ ಆರ್.ಎಚ್. ಬಾಗವಾನ ಮಾತನಾಡಿ, ಅಧಿಕಾರಿಗಳು ಮೃದುವಾಗಿ ವರ್ತಿಸುವುದನ್ನು ಮೈಕ್ರೋ ಫೈನಾನ್ಸ್ನವರು ದುರ್ಬಳಕೆ ಮಾಡಿಕೊಳ್ಳುವುದು ಸಲ್ಲದು. ಸಾಲ ವಸೂಲಾತಿ ವೇಳೆ ಕಿರುಕುಳ ನೀಡುವಂತಿಲ್ಲ. ಒಂದು ವೇಳೆ ಕಿರುಕುಳ ನೀಡಿದ ಪ್ರಸಂಗ ಗಮನಕ್ಕೆ ಬಂದಲ್ಲಿ ಅಂತಹವರ ಲೈಸೆನ್ಸ್ ರದ್ದು ಪಡಿಸಲಾಗುವುದು ಎಂದರು.
ನೆಟ್ಕಲ್ ಯೋಜನೆಯಲ್ಲಿ ಕಳಪೆ ಕಾಮಗಾರಿ: ಶಾಸಕ ಇಕ್ಬಾಲ್ ಹುಸೇನ್ ಆರೋಪ
ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಪರವಾಗಿ ಕೊಟ್ಟೂರಗೌಡ್ರ ಮಾತನಾಡಿ, ಇನ್ಮುಂದೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಜಾಗೃತಿ ವಹಿಸಲಾಗುವುದು. ಬೆಳಗ್ಗೆ 9ರಿಂದ ಸಂಜೆ 5ರ ಒಳಗಾಗಿ ಸಾಲ ವಸೂಲಾತಿ ಕ್ರಮ ಜರುಗಿಸಲಾಗುವುದು. ಮುಂದಿನ ದಿನಗಳಲ್ಲಿ ಸಿಬಿಲ್ ಸ್ಕೋರ್ ಗಮನಿಸಿ ಸಾಲ ನೀಡಲಾಗುವುದು ಎಂದರು. ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ಸಿಪಿಐಗಳಾದ ಡಾ. ಶಂಕರ, ಎಂ.ಡಿ., ಸಿದ್ದೇಶ, ಡಾ. ಪ್ರವೀಣ ಹಾಗೂ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.