ಮೈಸೂರಿನಲ್ಲಿ ಉದ್ದೇಶಿತ ಏಕತಾ ಮಹಲ್ ನಿರ್ಮಾಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಜಾಗವು ತಮ್ಮ ಪೂರ್ವಜರಿಗೆ ಸೇರಿದ್ದು ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಂಸದ ಯದುವೀರ್ ಒಡೆಯರ್ ಕಾಮಗಾರಿ ಪರಿಶೀಲಿಸಿದ್ದು, ಒಂದೇ ಕುಟುಂಬದಲ್ಲಿ ಭಿನ್ನ ನಿಲುವು ವ್ಯಕ್ತವಾಗಿದೆ.
ಮೈಸೂರು: ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಕೇಂದ್ರ ಸರ್ಕಾರ ನಿರ್ಮಿಸಲು ಉದ್ದೇಶಿಸಿದ್ದ ಏಕತಾ ಮಹಲ್ ವಿಚಾರದಲ್ಲಿ ಸರ್ಕಾರ ಮತ್ತು ರಾಜ ವಂಶಸ್ಥರ ಮಧ್ಯೆ ಈಗ ವಿವಾವೆದ್ದಿದೆ. ಜಿಲ್ಲೆಯ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸಲು ಉದ್ದೇಶಿಸಿದ್ದ ಏಕತಾ ಮಹಲ್ (ಯೂನಿಟಿ ಮಾಲ್) ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಪ್ರಮೋದಾದೇವಿ ಒಡೆಯರ್ ಈ ಜಾಗ ತಮಗೆ ಸೇರಿದೆಂದು ಹೈಕೋರ್ಟ್ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ 2 ವಾರದೊಳಗೆ ಉತ್ತರ ನೀಡುವಂತೆ ನ್ಯಾಯಾಲಯ ಸೂಚಿಸಿದೆ.
ಕೇಂದ್ರ ಪುರಸ್ಕೃತ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನಾ ಸಮಾವೇಶದ ವೇಳೆ ಚಾಲನೆ ನೀಡಿದ್ದರು. ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದ ಸರ್ವೇ ನಂ.1ರ 6.5 ಎಕರೆ ಪ್ರದೇಶದಲ್ಲಿ ಯೂನಿಟಿ ಮಾಲ್ ನಿರ್ಮಾಣಕ್ಕೆ ಕೆಲ ತಿಂಗಳುಗಳ ಹಿಂದಷ್ಟೆ ಚಾಲನೆ ಚಾಲನೆ ನೀಡಲಾಗಿತ್ತು. ಮೇಕ್ ಇನ್ ಇಂಡಿಯಾ ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಯೋಜನೆಯಲ್ಲಿ 193 ಕೋಟಿ ವೆಚ್ಚದಲ್ಲಿ ರಾಜ್ಯ ಸರ್ಕಾರ ಈ ಯುನಿಟಿ ಮಾಲ್ ನಿರ್ಮಾಣಕ್ಕೆ ಮುಂದಾಗಿತ್ತು. ಜು.28ರಂದು ಸಂಸದ ಯದುವೀರ್ ಒಡೆಯರ್, ಶಾಸಕ ಟಿ.ಎಸ್.ಶ್ರೀವತ್ಸ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಕಾಮಗಾರಿಯನ್ನು ಗುಣಮಟ್ಟದಿಂದ ನಡೆಸುವಂತೆ ಸೂಚಿಸಿದ್ದರು. ಮೈಸೂರು ದಸರಾ ಪ್ರದರ್ಶನ ಮೈದಾನದ ಒಟ್ಟು ವಿಸ್ತೀರ್ಣ 80 ಎಕರೆಯಿದೆ.
ಸ್ಪಷ್ಟನೆ ನೀಡಿ ಪತ್ರಿಕಾ ಹೇಳಿಕೆ ನೀಡಿದ ರಾಜಮಾತೆ
ಮೈಸೂರು ಯೂನಿಟಿ ಮಾಲ್ ನಿರ್ಮಾಣಕ್ಕೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ, ಯದುವಂಶದ ಪ್ರಮೋದಾದೇವಿ ಒಡೆಯರ್ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದಾರೆ. ಯೂನಿಟಿ ಮಾಲ್ ನಿರ್ಮಾಣಕ್ಕೆ ನನ್ನ ವಿರೋಧ ಇಲ್ಲ. ನಮ್ಮ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಸರಿಯಲ್ಲ. ನ್ಯಾಯಾಲಯದಲ್ಲಿ ಇದೇ ವಿಚಾರವಾಗಿ ಪ್ರಕರಣ ದಾಖಲಾಗಿದೆ. ಮೈಸೂರು ಕಸಬಾ ಹೋಬಳಿಯ ಸ. ನಂ.1 ರಲ್ಲಿರುವ ದೊಡ್ಡಕೆರೆ ಟ್ಯಾಂಕ್ ಬೆಡ್ ಭೂಮಿ. ಇಲ್ಲಿ ನಿರ್ಮಿಸಲು ಉದ್ದೇಶಿಸಲಾದ ಯೂನಿಟಿ ಮಾಲ್ ವಿಚಾರಕ್ಕೆ ಕರ್ನಾಟಕದ ಹೈಕೋರ್ಟ್ ಯಥಾಸ್ಥಿತಿ ಆದೇಶದ ನೀಡಿದೆ. ಈ ವಿಚಾರವಾಗಿ ಕೆಲ ಪತ್ರಿಕೆ ಕೆಲ ಟಿವಿಗಳಲ್ಲಿ ತಪ್ಪು ವರದಿ ಪ್ರಕಟವಾಗಿದೆ.
ಬಹಿರಂಗ ಮತ್ತು ಅಂತರಂಗ ಜಗಳ ಇಲ್ಲಿಲ್ಲ
ರಾಜ್ಯದ ಕರಕುಶಲ ವಸ್ತುಗಳು ಮತ್ತು ಜಿಐ ಟ್ಯಾಗ್ ಮಾಡಲಾದ ಉತ್ಪನ್ನಗಳನ್ನು ಪ್ರದರ್ಶಿಸುವುದನ್ನು ನಾನು ವಿರೋಧಿಸುವುದಿಲ್ಲ. ಬಹಿರಂಗ ಮತ್ತು ಅಂತರಂಗ ಜಗಳ ವಿಚಾರ ಸಹಾ ಇಲ್ಲಿ ಇಲ್ಲ. ಕರ್ನಾಟಕ ಸರ್ಕಾರವು ಮಾಲ್ ಸ್ಥಾಪಿಸಲಿ ಅದಕ್ಕೆ ನನ್ನ ವಿರೋಧ ಇಲ್ಲ. ಆದರೆ ಸರ್ಕಾರಕ್ಕೆ ಸೇರಿದ ಯಾವುದೇ ಭೂಮಿಯನ್ನು ಬೇಕಾದರೂ ಈ ಯೋಜನೆಗೆ ನೀಡಲಿ. ಅದರ ಬದಲು ಈ ನಿರ್ದಿಷ್ಟ ಖಾಸಗಿ ಆಸ್ತಿಯನ್ನು ಹಂಚಿಕೆ ಮಾಡುವುದು ಸರಿಯಲ್ಲ. ಇದು ಭಾರತ ಸರ್ಕಾರ ಮತ್ತು ಅಂದಿನ ರಾಜ್ಯ ಸರ್ಕಾರದ ನಡುವೆ ರಾಜ್ಯಗಳ ವಿಲೀನದ ಸಮಯದಲ್ಲಿ ನಂತರದ ಒಪ್ಪಂದದ ದಿನಾಂಕ 23-01-1950 ರಂದು ಇತ್ಯರ್ಥವಾಗಿದೆ.
ಪೂರ್ವಜನರ ಭೂಮಿ ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ
ನನ್ನ ಪೂರ್ವಜರ ಭೂಮಿಯನ್ನು ಉಳಿಸಿಕೊಳ್ಳುವುದು ಮತ್ತು ರಕ್ಷಿಸುವುದು ನನ್ನ ಜವಾಬ್ದಾರಿ. ಅದೇ ಕೆಲಸವನ್ನು ನಾನು ಮಾಡಿದ್ದೇನೆ. ನಾನು ಸಲ್ಲಿಸಿದ ಅರ್ಜಿಯಲ್ಲಿ ನನ್ನ ನಿಲುವನ್ನು ದೃಢೀಕರಿಸಲು ಸಂಬಂಧಿತ ದಾಖಲೆಗಳನ್ನು ಸಲ್ಲಿಸಲಾಗಿದೆ. ಸರ್ಕಾರದ ಪ್ರತಿಕ್ರಿಯೆ ಮುಂದಿನ ವಿಚಾರಣೆಗಾಗಿ ಕರ್ನಾಟಕದ ಹೈಕೋರ್ಟ್ ಮುಂದೆ ಬರಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಯದುವಂಶದ ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ


