* ಕೋವಿಡ್‌ ವಿಚಾರದಲ್ಲಿ ರಾಜಕಾರಣ ಸಲ್ಲದು* ಕೋವಿಡ್‌ 2ನೇ ಅಲೆಯ ತೀವ್ರತೆ ಅನಿರೀಕ್ಷಿತ* ಆಗಸ್ಟ್‌ನಿಂದ ಡಿಸೆಂಬರ್‌ ಒಳಗೆ 200 ಕೋಟಿ ಲಸಿಕೆ ವಿತರಣೆ 

ಹುಬ್ಬಳ್ಳಿ(ಮೇ.15): ಕೇಂದ್ರ ಸರ್ಕಾರ ಯುದ್ಧೋಪಾದಿಯಲ್ಲಿ ಕೋವಿಡ್‌ ನಿರ್ವಹಣೆ ಮಾಡುತ್ತಿದ್ದು, ಜುಲೈ ತಿಂಗಳ ವೇಳೆಗೆ ಎಲ್ಲರಿಗೂ ಕೋವಿಡ್‌ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

Click and drag to move

ನಗರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ದೇಶದಲ್ಲಿ ಲಸಿಕೆ ಉತ್ಪಾದನೆಯಾದ ಆರಂಭದಲ್ಲಿ ಪ್ರತಿಪಕ್ಷದ ಮುಖಂಡರು ಬೇಕು ಬೇಕಾದಂತೆ ಮಾತನಾಡಿದರು. ಮೋದಿ ಅವರನ್ನು ವಿರೋಧಿಸಿ ಹೇಳಿಕೆ ನೀಡುವ ಭರದಲ್ಲಿ ನಮ್ಮ ದೇಶದ ಲಸಿಕಾ ತಯಾರಿಕೆ ಕಂಪನಿಗಳ ಮೇಲೂ ಅನುಮಾನ ಪಟ್ಟು ನೆಗೆಟಿವ್‌ ಆಗಿ ಮಾತನಾಡಿದರು. ಅದರ ಪರಿಣಾಮವಾಗಿ ಕಂಪನಿಗಳು ಲಸಿಕೆ ಉತ್ಪಾದನೆ ಕಡಿಮೆ ಮಾಡಿದವು. ತಪ್ಪು ತಿಳುವಳಿಕೆಯೂ ಪರಿಣಾಮ ಪ್ರೊಡಕ್ಷನ್‌ ಮೇಲೆ ಬೀರಿತು. ನಾವು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು, ಜೂನ್‌ ಹಾಗೂ ಜುಲೈ ತಿಂಗಳಿನಲ್ಲಿ ಕೂಡ ಸಾಕಷ್ಟುಪ್ರಮಾಣದ ಲಸಿಕೆ ಲಭಿಸಲಿದೆ. ಕೋವಿಡ್‌ ವಿಚಾರದಲ್ಲಿ ರಾಜಕಾರಣ ಸಲ್ಲದು. ಇದೀಗ ರಾಜ್ಯದಲ್ಲಿ 1.9 ಕೋಟಿ ಜನರಿಗೆ ವ್ಯಾಕ್ಸಿನ್‌ ನೀಡಲಾಗಿದೆ ಎಂದರು.

"

ರಾಜ್ಯಕ್ಕೆ ಆಕ್ಸಿಜನ್‌ ನಿಗದಿ ಪ್ರಮಾಣ 1400 ಮೆಟ್ರಿಕ್‌ ಟನ್‌ಗೆ ಹೆಚ್ಚಿಸಿ: ಶೆಟ್ಟರ್‌

ನ್ಯಾಯಾಲಯ ಹೇಳುವುದಕ್ಕಿಂತ ಮೊದಲೆ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ ಎಂಬುದನ್ನು ಗಮನಿಸಬೇಕು. 105 ರೈಲುಗಳ ಮೂಲಕ ವಿವಿಧ ರಾಜ್ಯಗಳಿಗೆ ಆಕ್ಸಿಜನ್‌ ಸರಬರಾಜು ಮಾಡಲಾಗುತ್ತಿದೆ. ಕಾರ್ಗೋ ವಿಮಾನಗಳ ಮೂಲಕ 230 ಆಕ್ಸಿಜನ್‌ ಟ್ಯಾಂಕರ್‌ಗಳನ್ನು ಹಾಗೂ ಭಾರತದ ವಾಯು ಸೇನೆಯ 62 ಟ್ಯಾಂಕರ್‌ ಮೂಲಕ 1142 ಮೆಟ್ರಿಕ್‌ ಟನ್‌ ಆಕ್ಸಿಜನ್‌ ದೇಶಾದ್ಯಂತ ಸರಬರಾಜು ಮಾಡಲಾಗಿದೆ.

ಕೋವಿಡ್‌ 2ನೇ ಅಲೆಯ ಬಗ್ಗೆ ತಾಂತ್ರಿಕ ಸಮಿತಿ ಮುನ್ಸೂಚನೆ ನೀಡಿತ್ತು. ಆದರೆ ಈ ಪ್ರಮಾಣದಲ್ಲಿ ಆಕ್ಸಿಜನ್‌, ಅಗತ್ಯ ವೈದ್ಯಕೀಯ ಔಷಧಿಗಳ ಬೇಡಿಕೆ ಬರಲಿದೆ ಎಂಬುದನ್ನು ಹೇಳಿರಲಿಲ್ಲ. ಕೋವಿಡ್‌ 2ನೇ ಅಲೆಯ ತೀವ್ರತೆ ಅನಿರೀಕ್ಷತವಾದದ್ದು. ಮೊದಲಿಗೆ ಕೋವಿಡ್‌ ಲಸಿಕೆ ಬಗ್ಗೆ ಹಲವರು ಟೀಕೆ ಟಿಪ್ಪಣಿ ಮಾಡಿದ್ದರು. ಇಂದು ಲಸಿಕೆ ಬೇಡಿಕೆ ಹೆಚ್ಚಿದೆ. ಉತ್ಪಾದನೆಯನ್ನು ಸಹ ಹೆಚ್ಚಿಸಲಾಗಿದೆ. ಆಗಸ್ಟ್‌ನಿಂದ ಡಿಸೆಂಬರ್‌ ಒಳಗೆ 200 ಕೋಟಿ ಲಸಿಕೆ ವಿತರಣೆ ಮಾಡಲಾಗುವದು. ವಿರೋಧ ಪಕ್ಷಗಳು ಟೀಕಿಸುವ ಬದಲು ಸಹಕಾರ ನೀಡಲಿ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಸಚಿವ ಜೋಶಿ ಉತ್ತರಿಸಿದರು.

Click and drag to move

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona