ನಾನು ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ: ಕೇಂದ್ರ ಸಚಿವ ಜೋಶಿ
ಯಡಿಯೂರಪ್ಪ ಸಿಎಂ ಅಧಿಕಾರವಧಿ ಪೂರ್ಣಗೊಳ್ಳಲಿದೆ| ಇದರಲ್ಲಿ ಯಾವ ಸಂಶಯವೂ ಬೇಡ| ಇನ್ನೂ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂಬುದೆಲ್ಲ ಊಹಾಪೋಹ| ನಾನು ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ ಎಂದ ಜೋಶಿ|
ಹುಬ್ಬಳ್ಳಿ(ಆ.08): ನಾನು ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ. ಮುಂದಿನ ಮುಖ್ಯಮಂತ್ರಿಯಾಗಲಿದ್ದೇನೆ ಎಂಬುದೆಲ್ಲ ಸುಳ್ಳು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಪೂರ್ಣಗೊಳಿಸುತ್ತಾರೆ. ಇದರಲ್ಲಿ ಯಾವ ಸಂಶಯವೂ ಬೇಡ. ಇನ್ನೂ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂಬುದೆಲ್ಲ ಊಹಾಪೋಹ. ನಾನು ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ ಎಂದು ನುಡಿದರು. ಈ ಮೂಲಕ ಯಡಿಯೂರಪ್ಪ ಅವರನ್ನು ಇಳಿಸುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದರು.
ಗೊಂದಲದಲ್ಲಿ ಕಾಂಗ್ರೆಸ್:
ಹಿಂದೂಗಳ ವೋಟ್ಬ್ಯಾಂಕ್ ಉಳಿಸಿಕೊಳ್ಳಬೇಕೋ ಅಥವಾ ಮುಸಲ್ಮಾನರ ವೋಟ್ಬ್ಯಾಂಕ್ ಉಳಿಸಿಕೊಳ್ಳಬೇಕೋ ಎಂಬ ಗೊಂದಲದಲ್ಲಿ ಕಾಂಗ್ರೆಸ್ ಸಿಲುಕಿದ್ದು, ರಾಮಮಂದಿರ ವಿವಾದವನ್ನು ಬಿಜೆಪಿ ಬಗೆಹರಿಸಿದ ರೀತಿಯಿಂದ ಕಾಂಗ್ರೆಸ್ ಹತಾಶೆಗೊಂಡಿದೆ ಎಂದು ಹೇಳಿದರು.
ತೆರಿಗೆ ಸಂಗ್ರಹದಲ್ಲಿ ವ್ಯತ್ಯಾಸ, ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಲು ಸಾಧ್ಯವಾಗಿಲ್ಲ: ಸಚಿವ ಜೋಶಿ
ರಾಮಮಂದಿರವನ್ನು ಕಾನೂನಾತ್ಮಕ ಸಮಸ್ಯೆ ಇಲ್ಲದೆ ನಿರ್ವಹಿಸಿದ್ದೇವೆ. ಹಿಂದೆ ಅವರು ರಾಮ ಕಾಲ್ಪನಿಕ ವ್ಯಕ್ತಿ ಎಂದಿದ್ದರು. ಈಗ ಸಮಸ್ಯೆ ನಿವಾರಣೆಯಾದ ನಂತರ ಬೇರೆ ಮಾತನಾಡುತ್ತಿದ್ದಾರೆ. ಆರ್ಟಿಕಲ್ 370 ರದ್ದು ಸೇರಿ ಎಲ್ಲವನ್ನೂ ನಾವು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದೇವೆ. ಇದರಿಂದಾಗಿ ಕೆಲವರು ಹತಾಶೆಯಲ್ಲಿದ್ದಾರೆ. ಕಾಂಗ್ರೆಸ್, ಅಸಾದುದ್ದೀನ್ ಒವೈಸಿ ಸೇರಿ ಇತರರು ಈ ಗುಂಪಿನಲ್ಲಿದ್ದಾರೆ. ವೋಟ್ ಬ್ಯಾಂಕ್ ಪಾಲಿಟಿಕ್ಸ್ ಕಾಂಗ್ರೆಸ್ಸಿಗರ ಡಿಎನ್ಎಯಲ್ಲೇ ಇದೆ. ಈಗ ಮುಸ್ಲಿಮರ, ಹಿಂದೂಗಳ ವೋಟ್ ಬ್ಯಾಂಕ್ ಹೇಗೆ ಉಳಿಸಿಕೊಳ್ಳಬೇಕು ಎಂಬ ಗೊಂದಲ ಅವರಿಗಿದೆ. ತಾವು ಜನಿಸಿರುವುದೆ ಅಧಿಕಾರ ಪಡೆಯಲು ಎಂಬ ಭಾವನೆ ಅವರಿಗಿದೆ ಎಂದರು. ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ರಾಮಮಂದಿರ ನಿರ್ಮಾಣ ನಮ್ಮ ಗುರಿ. ಅದಲ್ಲದೆ ಕಾಶಿ ಮತ್ತು ಮಥುರಾ ಬಗ್ಗೆ ನಾವು ಯೋಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ
ನಾನು ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ. ಮುಂದಿನ ಮುಖ್ಯಮಂತ್ರಿಯಾಗಲಿದ್ದೇನೆ ಎಂಬುದೆಲ್ಲ ಸುಳ್ಳು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದ್ದಾರೆ. ‘ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಪೂರ್ಣಗೊಳಿಸುತ್ತಾರೆ. ಇದರಲ್ಲಿ ಯಾವ ಸಂಶಯವೂ ಬೇಡ’ ಎಂದಿದ್ದಾರೆ. ಇದೇ ವೇಳೆ, ‘ಹಿಂದೂಗಳು ಅಥವಾ ಮುಸಲ್ಮಾನರ ವೋಟ್ ಬ್ಯಾಂಕ್ ಉಳಿಸಿಕೊಳ್ಳಬೇಕೋ ಎಂಬ ಗೊಂದಲದಲ್ಲಿ ಕಾಂಗ್ರೆಸ್ ಸಿಲುಕಿದ್ದು, ರಾಮಮಂದಿರ ವಿವಾದವನ್ನು ಬಿಜೆಪಿ ಬಗೆಹರಿಸಿದ ರೀತಿಯಿಂದ ಕಾಂಗ್ರೆಸ್ ಹತಾಶೆಗೊಂಡಿದೆ. ಸದ್ಯಕ್ಕೆ ರಾಮಮಂದಿರ ನಿರ್ಮಾಣ ನಮ್ಮ ಗುರಿ. ಕಾಶಿ ಮತ್ತು ಮಥುರಾ ಬಗ್ಗೆ ನಾವು ಯೋಚನೆ ಮಾಡಿಲ್ಲ’ ಎಂದಿದ್ದಾರೆ.