ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆಯನ್ನು ಅಂದು ಬೆಳಗ್ಗೆ 9.30ಕ್ಕೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಮೂಲಕ ನೆರವೇರಿಸಿ, ಆನ್‌ಲೈನ್‌ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವರು. ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರ ಜೊತೆಯೂ ಮಾತನಾಡಲಿದ್ದಾರೆ:  ಕೇಂದ್ರ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ 

ಬೀದರ್(ಆ.05): ಅಮೃತ ಭಾರತ ನಿಲ್ದಾಣ ಯೋಜನೆಯಡಿ ಬೀದರ್‌ ರೈಲ್ವೆ ನಿಲ್ದಾಣವು ಆಯ್ಕೆಯಾಗಿದ್ದು, ಇದರಡಿ 25ಕೋಟಿ ರು.ಗಳ ವೆಚ್ಚದಲ್ಲಿ ನಿಲ್ದಾಣದ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಇದೇ ಆ.6ರಂದು ಶಂಕುಸ್ಥಾಪನೆಗೊಳ್ಳಲಿರುವ ಬೀದರ್‌ ರೈಲ್ವೆ ನಿಲ್ದಾಣದಲ್ಲಿ ಅಭಿವೃದ್ಧಿ ಕಾರ್ಯಗಳು ಜಿಲ್ಲೆಯ ಐತಿಹಾಸಿಕ ಸಾಧನೆಗೆ ಸೇರ್ಪಡೆಗೊಳ್ಳಲಿವೆ ಎಂದು ತಿಳಿಸಿದ್ದಾರೆ. ಈ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆಯನ್ನು ಅಂದು ಬೆಳಗ್ಗೆ 9.30ಕ್ಕೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಮೂಲಕ ನೆರವೇರಿಸಿ, ಆನ್‌ಲೈನ್‌ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವರು. ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರ ಜೊತೆಯೂ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬೀದರ್‌: ಲಂಚ ಪಡೆಯುತ್ತಿದ್ದಾಗ ವಸತಿ ಶಾಲೆ ಪ್ರಾಚಾರ್ಯ ಲೋಕಾಯುಕ್ತ ಬಲೆಗೆ

ಇದರ ಜೊತೆಗೆ ಈಗಾಗಲೇ ನಾನು ಸಂಸದರಾದ ಮೇಲೆ 13 ಹೊಸ ರೈಲುಗಳು ಪ್ರಾರಂಭವಾಗಿದ್ದು, ಬೀದರ್‌ನಿಂದ ಕಲಬುರಗಿಗೆ 2 ಡೆಮೋ ರೈಲುಗಳು, ಯಶವಂತಪೂರ, ಬೆಂಗಳೂರು, ಮುಂಬೈಗೆ 2 ರೈಲುಗಳು, ತಿರುಪತಿಗೆ 2 ರೈಲುಗಳು, ಮಚಲಿಪಟ್ಟಣಂ, ಶಿರಡಿ, ಕೊಲ್ಹಾಪೂರಕ್ಕೆ ರೈಲು, ಪ್ರತಿ ಏಕಾದಶಿಗೆ ಪಂಢರಾಪೂರಕ್ಕೆ ವಿಶೇಷ ರೈಲು, ದಸರಾ, ದೀಪಾವಳಿಗೆ, ಕ್ರೈಸ್ತರ ಧಾರೂರ ಜಾತ್ರೆಗೆ, ಗುರುನಾನಕ ಜಯ ಂತಿಗೆ ನಾಂದೇಡ ಹಾಗೂ ಪಾಟ್ನಾ ಸಾಹೇಬ್‌ಗೆ, ಮುಸ್ಲಿಂಮರ ವಿಶೇಷ ಕಾರ್ಯಕ್ರಮಕ್ಕೆ ಬೀದರ್‌ನಿಂದ ಕರ್ನೂಲ್‌ಗೆ ವಿಶೇಷ ರೈಲುಗಳನ್ನು ಬೀದರ್‌ನಿಂದ ಓಡಿಸಲಾಗಿದೆ. ಜಿಲ್ಲೆಯ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಲೈಟಿಂಗ್‌, ಕುಡಿಯುವ ನೀರಿನ ವ್ಯವಸ್ಥೆ ಇತರೆ ಮೂಲಭೂತ ಸೌಕರ್ಯಗಳು ಸಹ ಆಗಿವೆ ಎಂದು ಸಚಿವರು ತಿಳಿಸಿದ್ದಾರೆ.

ವಿಕಾರಾಬಾದನಿಂದ ಪರಳಿಯವರಿಗೆ ರೈಲ್ವೆ ವಿದ್ಯುತ್ತಿಕರಣವು 262.12 ಕೋಟಿ ರು.ಅನುದಾನದಲ್ಲಿ 269ಕಿಮೀ ಮಂಜೂರಿ ಮಾಡಿಸಿಕೊಂಡು, ಕಾಮಗಾರಿ ಪೂರ್ಣಗೊಳಿಸಿದ್ದೇನೆ. ಸಧ್ಯ ಬೀದರ್‌-ಯಶ ವಂತಪೂರ, ಲಾತೂರ್‌ -ಯಶವಂತಪೂರ, ಬೀದರ್‌-ಮುಂಬೈ, ಹೈದ್ರಾಬಾದ್‌-ಹಡಪಸರ್‌ ವಾಯಾ ಬೀದರ್‌, ಬೀದರ್‌-ಮಚ್ಛಲಿಪಟ್ನಂ, ಬೀದರ್‌- ಹೈದ್ರಾಬಾದ್‌ ಇಂಟರಸಿಟಿ ರೈಲುಗಳು ವಿದ್ಯುತ್‌ ಲೈನ್‌ ಮೇಲೆ ರೈಲುಗಳು ಚಲಿಸುತ್ತಿವೆ. ವಿದ್ಯುತ್ತಿಕರಣ ಮೂಲಕ ಹೋಗುತ್ತಿರುವ ಈ ರೈಲುಗಳು ಬೀದರ್‌ ರೈಲ್ವೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ಬೀದರ್‌: ಖರ್ಗೆ, ಖಂಡ್ರೆ ವಿರುದ್ಧ ವರ್ಣಭೇದದ ಮಾತು, ಶಾಸಕ ಅರಳಿ ಖಂಡನೀಯ

ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ರೈಲುಗಳು ವಿದ್ಯುತ್ತಿಕರಣಗೊಂಡ ಲೈನ್‌ ಮೂಲಕ ಚಲಿಸಲಿವೆ. ಇದರಿಂದ ವಾಯು ಮಾಲಿನ್ಯ ಕಡಿಮೆಯಾಗಲಿದೆ ಜೊತೆಗೆ ರೈಲ್ವೆ ಇಲಾಖೆಗೆ ಆಗುತ್ತಿದ್ದ ಆರ್ಥಿಕ ನಷ್ಟಕೂಡ ಕಡಿಮೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಆ. 6ರಂದು ಬೀದರ್‌ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಆಯೋಜಿಸಲಾಗಿರುವ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬೀದರ್‌ ಲೋಕಸಭಾ ಕ್ಷೇತ್ರದ ಎಲ್ಲಾ ಜನಪ್ರತಿನಿಧಿಗಳು, ಹಿರಿಯರು, ವ್ಯಾಪರೋದ್ಯಮಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ಮನವಿ ಮಾಡಿದ್ದಾರೆ.

ಏನೇನು ಅಭಿವೃದ್ಧಿ?

ನಿಲ್ದಾಣದ ಕಟ್ಟಡ ಅಭಿವೃದ್ಧಿ, ನಿಲ್ದಾಣದ ಮುಂಭಾಗದ ಸುಧಾರಣೆಗಳು, ಪ್ರವೇಶದ್ವಾರದ ಪೋರ್ಟಿಕೋವನ್ನು ಒದಗಿಸುವುದು, 12ಮೀ. ಅಗಲದ ಮೇಲ್ಸೇತುವೆ, ಪ್ಲಾಟ್‌ಫಾರಂ ಸುಧಾರಣೆ, ಹೊಸ ಶೌಚಾಲಯಗಳ ನಿರ್ಮಾಣ ಹಾಗೂ ಅಸ್ತಿತ್ವದಲ್ಲಿರುವ ಶೌಚಾಲಯಗಳ ಅಭಿವೃದ್ಧಿ, ವೇಟಿಂಗ್‌ ಹಾಲ್‌ ಸುಧಾರಣೆ, ಸುಗಮ ಸಂಚಾರಕ್ಕಾಗಿ ಸಂಚಾರ ಪ್ರದೇಶದ ಸುಧಾರಣೆ, 2 ಹೊಸ ಲಿಫ್ಟಗಳು, 3 ಎಸ್ಕಲೇಟರ್‌ ಮುಂತಾದವುಗಳು ನಿರ್ಮಾಣಗೊಳ್ಳಲಿವೆ, ಅಗತ್ಯಕ್ಕೆ ತಕ್ಕಂತೆ ಇನ್ನೂ ಕೆಲವು ಅಭಿವೃದ್ಧಿ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ ಆಗಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.