*  ಕಡಲಲ್ಲಿ ಮುಳುಗಿ ಇಬ್ಬರು ಯುವಕರ ದುರ್ಮರಣ *  ಫಿಶ್‌ ಮಿಲ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಯುವಕರು*  ಮೃತದೇಹ ಸಾಗಿಸಲು ಇಂಡಿಯನ್‌ ಸೋಶೀಯಲ್‌ ಫೋರಂ ಯತ್ನ 

ಮಂಗಳೂರು(ಆ.28): ಎರಡು ವರ್ಷದ ಹಿಂದೆ ಉಳ್ಳಾಲದಿಂದ ಒಮಾನ್‌ಗೆ ಉದ್ಯೋಗಕ್ಕೆಂದು ತೆರಳಿದ್ದ ಇಬ್ಬರು ಯುವಕರು, ಕಡಲಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ. ಉಳ್ಳಾಲದ ರಿಜ್ವಾನ್‌ ಅಲೆಕಳ (25), ಉಳ್ಳಾಲ ಕೋಡಿ ಜಹೀರ್‌ (25) ಮೃತರು.

ಒಮಾನ್‌ನಲ್ಲಿ ಫಿಶ್‌ ಮಿಲ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಯುವಕರು, ಒಮಾನ್‌ನ ದುಕ್ಕುಂ ಎಂಬ ಕಡಲತೀರಕ್ಕೆ ಶುಕ್ರವಾರ ಸಂಜೆ ವೇಳೆ ವಿಹಾರಕ್ಕೆ ತೆರಳಿದ್ದರು. ರಿಜ್ವಾನ್‌ ನೀರಿನಲ್ಲಿ ಮುಳುಗುತ್ತಿರುವಾಗ ಆತನನ್ನು ಉಳಿಸಲು ಜಹೀರ್‌ ಈಜುತ್ತಾ ತೆರಳಿದ್ದಾನೆ. ಈ ವೇಳೆ ಸಾವಿನ ಭಯದಲ್ಲಿ ರಿಜ್ವಾನ್‌, ಜಹೀರ್‌ನ ಕುತ್ತಿಗೆಗೆ ಕೈ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಜಹೀರ್‌ ಕೂಡ ನೀರು ಪಾಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಆಷ್ಘನಲ್ಲಿ ಸಿಲುಕಿದ ಇಬ್ಬರು ಮಂಗಳೂರಿಗರ ಏರ್‌ಲಿಫ್ಟ್‌: ಇನ್ನೊಬ್ಬರ ರಕ್ಷಣೆಗೆ ಪ್ರಯತ್ನ

ಉಳ್ಳಾಲ ಕೋಡಿ ಜಹೀರ್‌ ಎಂಬವರ ಮೃತದೇಹ ಪತ್ತೆಯಾಗಿದ್ದು, ರಿಜ್ವಾನ್‌ಗಾಗಿ ಹುಡುಕಾಟ ಮುಂದುವರಿದಿದೆ. ಮೃತ ಜಹೀರ್‌ಗೆ ಈಗಾಗಲೇ ಮದುವೆ ನಿಶ್ಚಯವಾಗಿತ್ತು. ಕೆಲವೇ ದಿನಗಳಲ್ಲಿ ಆತ ತಾಯ್ನಾಡಿಗೆ ಆಗಮಿಸುವ ತಯಾರಿಯಲ್ಲಿದ್ದ. ಆ.29ರಂದು ಒಮಾನ್‌ನಿಂದ ಭಾರತಕ್ಕೆ ವಿಮಾನವೊಂದು ಆಗಮಿಸಲಿದೆ. ಈ ವೇಳೆ ಮೃತದೇಹ ಸಾಗಿಸಲು ಇಂಡಿಯನ್‌ ಸೋಶಿಯಲ್‌ ಫೋರಂ ಪ್ರಯತ್ನದಲ್ಲಿದೆ ಎಂದು ಮೂಲಗಳು ತಿಳಿಸಿವೆ.