ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ಹೈಕೋರ್ಟ್ ಒಪ್ಪಿಗೆ : ಸುಗುಣೇಂದ್ರ ತೀರ್ಥರಿಂದ ಅದ್ಧೂರಿ ಪುರಪ್ರವೇಶ!
ಉಡುಪಿ ಶ್ರೀ ಕೃಷ್ಣ ಮಠದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಪುರ ಪ್ರವೇಶ ಹಾಗೂ ಪಾರ್ಯಾಯ ಮಹೋತ್ಸವಕ್ಕೆ ಅಡ್ಡಿಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
![Udupi Puthige Paryaya High Court approves Pura entry of Sugunendra Theertha swamiji sat Udupi Puthige Paryaya High Court approves Pura entry of Sugunendra Theertha swamiji sat](https://static-ai.asianetnews.com/images/01hkmrk5b3c7jqccpzkfby20ds/puthige-paryaya_363x203xt.jpg)
ಉಡುಪಿ (ಜ.08): ಉಡುಪಿ ಶ್ರೀ ಕೃಷ್ಣ ಮಠದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಪುರ ಪ್ರವೇಶ ಹಾಗೂ ಪಾರ್ಯಾಯ ಮಹೋತ್ಸವಕ್ಕೆ ಅಡ್ಡಿಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಪುತ್ತಿಗೆ ಪರ್ಯಾಯ ಶುಭ ಆರಂಭಗೊಂಡಿದೆ. ಶ್ರೀ ಸುಗುಣೇಂದ್ರ ತೀರ್ಥರ ಪುರ ಪ್ರವೇಶ ಅದ್ದೂರಿಯಾಗಿ ಸಂಪನ್ನಗೊಂಡಿದೆ. ಪುರ ಪ್ರವೇಶದ ದಿನವೇ ಪರ್ಯಾಯ ಮಹೋತ್ಸವಕ್ಕೆ ಅಡ್ಡಿಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾ ಗೊಳಿಸಿರುವುದು, ಮಠದ ಶಿಷ್ಯರನ್ನು ನಿರಾಳ ಗೊಳಿಸಿದೆ.
ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಪೂಜಾಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ಪರ್ಯಾಯ ಮಹೋತ್ಸವವಾಗಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇದೇ ತಿಂಗಳ 17 ಮತ್ತು 18ರಂದು ಪುತ್ತಿಗೆ ಶ್ರೀಗಳು ಸರ್ವಜ್ಞ ಪೀಠ ಆರೋಹಣ ಮಾಡಲಿದ್ದಾರೆ. ವಿದೇಶ ಯಾನ ಕೈಗೊಂಡಿದ್ದಾರೆ ಎಂಬ ಕಾರಣಕ್ಕೆ ಶ್ರೀಗಳು ಸರ್ವಜ್ಞ ಪೀಠಾರೋಹಣ ಮಾಡಬಾರದು, ಕೃಷ್ಣ ಪೂಜೆ ನಡೆಸಬಾರದು ಎಂದು ಅಷ್ಟಮಠಾಧೀಶರು ಹಿಂದಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಈ ಆಕ್ಷೇಪದ ಹೊರತಾಗಿಯೂ 2008ರಲ್ಲಿ ಪುತ್ತಿಗೆ ಶ್ರೀಗಳು ಯಶಸ್ವಿಯಾಗಿ ಪರ್ಯಾಯ ಪೂರೈಸಿದ್ದರು. ಈ ಬಾರಿ ವ್ಯಕ್ತಿಯೊಬ್ಬರು ಹೈಕೋರ್ಟ್ ಮೊರೆ ಹೋಗಿ ಪರ್ಯಾಯ ನಡೆಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಈ ಅರ್ಜಿಯನ್ನು ವಜಾ ಗೊಳಿಸಿದೆ.
ರಾಮಮಂದಿರ ಪ್ರಾಣ ಪ್ರತಿಷ್ಠೆಗೆ ಶೃಂಗೇರಿ ಮಠದ ವಿರೋಧವಿಲ್ಲ, ಇದು ಧರ್ಮ ದ್ವೇಷಿಗಳ ಪಿತೂರಿ!
ಧಾರ್ಮಿಕ ಆಚರಣೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ. ವಿದೇಶದಲ್ಲಿ ಜ್ಞಾನ ಪ್ರಸಾರ ಮಾಡಿದರೆ ತಪ್ಪೇನು? ಮನೆ ಕಟ್ಟಿ ಕೋರುವುದಕ್ಕಿಂತ ಹೊರಗಡೆ ಓಡಾಡುವುದು ಲೇಸು ಎಂದ ಹೈಕೋರ್ಟ್. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವೀಕರಿಸಿದ ದ್ವಿಸದಸ್ಯ ಪೀಠ, ಧಾರ್ಮಿಕ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಕುವೆಂಪು ಅವರ ಓ ನನ್ನ ಚೇತನ ಆಗು ನೀ ಅನಿಕೇತನ ಕವನ ಉಲ್ಲೇಖಿಸಿ ನೀಡಿರುವ ಆದೇಶದಲ್ಲಿ, ಪುತ್ತಿಗೆ ಶ್ರೀಗಳ ಪರ ತೀರ್ಪು ನೀಡಿದೆ. ಪುರ ಪ್ರವೇಶದ ದಿನವೇ ಬಂದ ಈ ಆದೇಶ ಶ್ರೀಗಳ ಸಂತೋಷಕ್ಕೆ ಕಾರಣವಾಗಿದೆ.
ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ 18 ವರ್ಷದ ಯುವತಿ ಬಲಿ: 2024ರಲ್ಲಿ ಮೊದಲ ಸಾವು
ಈ ನಡುವೆ ಅದ್ದೂರಿಯಾಗಿ ಪುರಪ್ರವೇಶ ಮೆರವಣಿಗೆ ನಡೆಯಿತು. ತಮ್ಮ ಶಿಷ್ಯರಾದ ಶ್ರೀ ಸುಶ್ರೀಂದ್ರ ತೀರ್ಥರೊಂದಿಗೆ, ಅದ್ದೂರಿ ಮೆರವಣಿಗೆಯಲ್ಲಿ ಸುಗುಣೇಂದ್ರ ತೀರ್ಥರು ಪುರ ಪ್ರವೇಶ ಮಾಡಿದರು. ಹತ್ತಾರು ಭಜನಾ ತಂಡಗಳು, ಟ್ಯಾಬ್ಲೋಗಳು ಹಾಗೂ ವೇಷಧಾರಿಗಳ ನಡುವೆ ವೈಭವದ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ಸಂಪ್ರದಾಯದಂತೆ ನಡೆದ ಈ ಪುರ ಪ್ರವೇಶ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗಿಯಾದರು. ಈ ಬಾರಿಯ ಪರ್ಯಾಯದಲ್ಲೂ ಅಷ್ಟಮಠಾಧೀಶರು ಭಾಗವಹಿಸುವ ಸಾಧ್ಯತೆ ಕಡಿಮೆ. 16 ವರ್ಷದ ಹಿಂದಿನಂತೆ ಮತ್ತೊಮ್ಮೆ ಶ್ರೀಗಳು ಏಕಾಂಗಿಯಾಗಿ ಮೆರವಣಿಗೆಯಲ್ಲಿ ಬಂದು ಸರ್ವಜ್ಞ ಪೀಠ ರೋಹಣ ಮಾಡುವ ಲಕ್ಷಣಗಳು ಕಂಡುಬರುತ್ತಿವೆ.