Asianet Suvarna News Asianet Suvarna News

ಅಕ್ರಮ ನಿರ್ಮಾಣದ ನೆಪದಲ್ಲಿ ಬಡ ಮೀನುಗಾರರ ತಾತ್ಕಾಲಿಕ ಶೆಡ್ ಕೆಡವಿದ ಉಡುಪಿ ನಗರಸಭೆ

ಬಡ ಮೀನುಗಾರ ಮಹಿಳೆಯರಿಗೆ, ಮಳೆಯಿಂದ ರಕ್ಷಣೆ ನೀಡುತ್ತಿದ್ದ ತಾತ್ಕಾಲಿಕ ಶೆಡ್ ನ್ನು ನಿರ್ಮಾಣ ಹಂತದಲ್ಲಿರುವಾಗಲೇ ಉಡುಪಿ ನಗರಸಭೆ ಕೆಡವಿ ಹಾಕಿದೆ. ನಗರಾಡಳಿತದ ಈ ಅಮಾನವೀಯ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Udupi municipality  demolished temporary shed of poor fishermen gow
Author
Bengaluru, First Published Aug 26, 2022, 8:41 PM IST

ಉಡುಪಿ (ಆ.26): ಬಡ ಮೀನುಗಾರ ಮಹಿಳೆಯರಿಗೆ, ಮಳೆಯಿಂದ ರಕ್ಷಣೆ ನೀಡುತ್ತಿದ್ದ ತಾತ್ಕಾಲಿಕ ಶೆಡ್ ನ್ನು ನಿರ್ಮಾಣ ಹಂತದಲ್ಲಿರುವಾಗಲೇ ಉಡುಪಿ ನಗರಸಭೆ ಕೆಡವಿ ಹಾಕಿದೆ. ನಗರಾಡಳಿತದ ಈ ಅಮಾನವೀಯ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲೆಗೆ ಜನರನ್ನು ಸ್ವಾಗತಿಸುವ ಕಿನ್ನಿಮೂಲ್ಕಿ ಬಳಿಯ ಸುಂದರ ಸ್ವಾಗತ ಗೋಪುರ ಪಕ್ಕದಲ್ಲೇ, ಕಳೆದ ನಾಲ್ಕು ದಶಕಗಳಿಂದ ಬಡ ಮೀನುಗಾರ ಮಹಿಳೆಯರು ಮೀನು ಮಾರಾಟ ನಡೆಸುತ್ತಿದ್ದಾರೆ. ಮೀನಿನ ದರ ಒಂದು ರೂಪಾಯಿ ಇದ್ದ ಕಾಲದಿಂದಲೂ, ಇಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಮಳೆಯಿಂದ ರಕ್ಷಣೆ ನೀಡಲು ಒಂದು ಶೆಡ್ ನಿರ್ಮಿಸಿ ಕೊಡಿ ಎಂದು ಕಳೆದ ಹಲವಾರು ದಶಕಗಳಿಂದ ಬೇಡಿಕೆ ಇಟ್ಟು ಸೋತಿದ್ದಾರೆ. ಇದೀಗ ಸ್ಥಳೀಯ ನಗರಸಭಾ ಸದಸ್ಯೆ ತನಗೆ ಬರುವ ಗೌರವ ಧನದ ಹಣದಲ್ಲಿ ಒಂದು ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಕಳೆದ ಎರಡು ಮೂರು ದಿನಗಳಿಂದ ಈ ಪುಟ್ಟ ಶೆಡ್ ನಿರ್ಮಿಸಲಾಗುತ್ತಿತ್ತು. ಇಂದು ಯಾವುದೇ ನೊಟೀಸು ನೀಡದೆ ಉಡುಪಿ ನಗರಸಭೆ ಅಧಿಕಾರಿಗಳು ಶೆಡ್ ಕಡವಿ ಹಾಕಿದ್ದಾರೆ. 

ಇದೊಂದು ಅಕ್ರಮ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರೋಡ್ ಪಕ್ಕದಲ್ಲೇ ಶೆಡ್ ಹಾಕಲಾಗಿದೆ, ಹಾಗಾಗಿ ನಾವು ತೆರವು ಮಾಡುತ್ತಿದ್ದೇವೆ ಎಂದು ನಗರಸಭೆ ಅಧಿಕಾರಿಗಳು, ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲಿನ ಕಟ್ಟಡ ಸಾಮಗ್ರಿಗಳನ್ನು ಮರುಬಳಕೆ ಮಾಡಲು ಅವಕಾಶವಿಲ್ಲದಂತೆ ಪುಡಿ ಗಟ್ಟಿದ್ದಾರೆ. ತಕ್ಷಣವೇ ಅಲ್ಲಿಗೆ ಬಂದ ಸ್ಥಳೀಯರು ಮತ್ತು ನಗರಸಭಾ ಸದಸ್ಯೆ ತೀವ್ರ ಆಕ್ರೋಶ ಹೊರಹಾಕಿದರು. ನಗರಸಭಾ ಅಧಿಕಾರಿಯ ವಾಹನವನ್ನು ತೆರಳಲು ಅವಕಾಶವಿಲ್ಲದಂತೆ ತಡೆಗಟ್ಟಿದರು.

ಉಡುಪಿನಗರ ಸಭಾ ವ್ಯಾಪ್ತಿಯಲ್ಲಿ ಅನೇಕ ಪ್ರತಿಷ್ಠಿತ ಮಳಿಗೆಗಳು ಅಕ್ರಮ ನಿರ್ಮಾಣ ಮಾಡಿವೆ. ಶ್ರೀಮಂತರಿಗೊಂದು, ಬಡವರಿಗೊಂದು ಕಾನೂನು ಯಾಕೆ ಎಂದು ಸಿಡಿಮಿಡಿಕೊಂಡರು. ಇದರಿಂದ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಪರಿಸರದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. 

ಮಲ್ಪೆ ಪೊಲೀಸರು ನಗರಸಭಾ ಅಧಿಕಾರಿಯನ್ನು ಭದ್ರತೆ ನೀಡಿ ಸ್ಥಳದಿಂದ ಕರೆದೊಯ್ದರು.ಸಂತ್ರಸ್ತ ಮೀನುಗಾರ ಮಹಿಳೆಯರನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲು ನಗರಸಭಾ ಸದಸ್ಯೆ ಮುಂದಾಗಿದ್ದಾರೆ. ಈ ಘಟನೆಯಿಂದ ನಗರಸಭಾ ಸದಸ್ಯೆ ಅಮೃತಾಕೃಷ್ಣಮೂರ್ತಿ ಅವರ ಪತಿ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ನೊಂದು ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.

ಮೀನುಗಾರರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ನೀಡಲು ಸಿಎಂ ಸೂಚನೆ
ರಾಜ್ಯದಲ್ಲಿ ಮೀನುಗಾರರಿಗೆ ಆದ್ಯತೆಯ ಮೇರೆಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸೌಲಭ್ಯವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಬುಧವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಭೆ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮೀನುಗಾರಿಕೆ ಮತ್ತು ಪಶುಸಂಗೋಪನೆಯನ್ನು ಕೃಷಿಗೆ ಪೂರಕ ಚಟುವಟಿಕೆಗಳೆಂದು ಗುರುತಿಸಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸೌಲಭ್ಯವನ್ನು ಅವರಿಗೂ ವಿಸ್ತರಿಸಿದ್ದಾರೆ. ಹೀಗಾಗಿ ರಾಜ್ಯದ ಮೀನುಗಾರರಿಗೆ ಅದ್ಯತೆಯ ಮೇರೆಗೆ ಸೌಲಭ್ಯ ಒದಗಿಸಬೇಕು. ಮೊದಲ ಹಂತದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ತ್ವರಿತವಾಗಿ ಒದಗಿಸಬೇಕು. ಮೀನುಗಾರಿಕಾ ಇಲಾಖೆಯು ತಮ್ಮ ಬಳಿ ಇರುವ ಮೀನುಗಾರರ ಮಾಹಿತಿಯನ್ನು ಬ್ಯಾಂಕರ್‌ಗಳಿಗೆ ಒದಗಿಸಿ ಅಭಿಯಾನದ ಮಾದರಿಯಲ್ಲಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಿಸಬೇಕು ಎಂದು ನಿರ್ದೇಶನ ನೀಡಿದರು.

ಮೀನುಗಾರರ ಸಹಕಾರ ಬ್ಯಾಂಕ್‌ಗಳ ಮೂಲಕವೂ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ನೀಡಬೇಕು ಎಂದ ಅವರು, ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯೊಂದಿಗೆ ಸಂಯೋಜಿಸಿ, ಜಾರಿಗೊಳಿಸಲಾಗುತ್ತಿರುವ ಈ ಯೋಜನೆಗೆ ಕೇಂದ್ರದ ಅನುಮೋದನೆಯನ್ನು ತ್ವರಿತವಾಗಿ ಪಡೆಯುವಂತೆ ತಿಳಿಸಿದರು.

ಉಡುಪಿ ಜಿಲ್ಲೆಯಾಗಿ 25 ವರ್ಷ: ಮೊದಲ ಉಸ್ತುವಾರಿ ಸಚಿವ ಜಯಪ್ರಕಾಶ್ ಹೆಗ್ಡೆ

ಸಭೆಯಲ್ಲಿ ಮೀನುಗಾರಿಗೆ ಮತ್ತು ಬಂದರು ಸಚಿವ ಎಸ್‌.ಅಂಗಾರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Follow Us:
Download App:
  • android
  • ios