ಇಂಡಿಯಾಮಾರ್ಟ್ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಯತ್ನದಲ್ಲಿ ಕಾಪು ತಾಲ್ಲೂಕಿನ ಬೆಳಪು ಗ್ರಾಮದ ನಿವಾಸಿ ₹24,000 ಕಳೆದುಕೊಂಡಿದ್ದಾರೆ. ಮುಂಗಡ ಪಾವತಿ ಮಾಡಿದ ನಂತರ, ಆರೋಪಿಯು ಸರಕುಗಳನ್ನು ಕಳುಹಿಸದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ.

ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಬೆಳಪು ಗ್ರಾಮದ ನಿವಾಸಿಯಾಗಿರುವ 53 ವರ್ಷದ ನಾರಾಯಣ ಎಂಬವರು, ಇಂಡಿಯಾಮಾರ್ಟ್ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಯತ್ನದಲ್ಲಿ ಆನ್‌ಲೈನ್ ವಂಚನೆಗೆ ಬಲಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾರಾಯಣ ಅವರು ತಮ್ಮ ಮನೆ ಬಳಿಯೇ ಜೀರಿಗೆ, ಕಡಲೆ ಮತ್ತು ಉದ್ದಿನ ಬೇಳೆಯಂತಹ ಸಾಮಗ್ರಿಗಳನ್ನು ಖರೀದಿಸಿ ತಯಾರಿಕೆ ಕಾರ್ಯದಲ್ಲಿ ತೊಡಗುವ ಯೋಜನೆ ಹಾಕಿಕೊಂಡಿದ್ದರು. ಜೂನ್ 11 ರಂದು, ಅವರ ಮಗ ಶಿವದಾಸ್ ರಾವ್ ಗೂಗಲ್‌ನಲ್ಲಿ ಹುಡುಕಿದಾಗ ಇಂಡಿಯಾಮಾರ್ಟ್ ಅಪ್ಲಿಕೇಶನ್‌ನಲ್ಲಿ "ಸೋಜಿತ್ರಾ ಎಂಟರ್‌ಪ್ರೈಸಸ್" ಎಂಬ ಸಂಸ್ಥೆಯೊಂದರ ಸಂಪರ್ಕ ಸಂಖ್ಯೆ ಕಂಡುಬಂತು.

ಅವರಿಗೆ ಕರೆ ಮಾಡಿದಾಗ, ಶಿವಂ ಸೆಂಗಾರ್ ಎಂಬ ವ್ಯಕ್ತಿ ಮಾತನಾಡಿ ತಾನೇ ಆ ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡನು. ವ್ಯವಹಾರವು ಸಂಪೂರ್ಣ ಕಾನೂನುಬದ್ಧವಾಗಿದ್ದು ನಂಬಿಕೊಳ್ಳಬಹುದೆಂದು ದೃಢಪಡಿಸಿದ್ದರಿಂದ, ನಾರಾಯಣ ಅವರು 120 ಕೆಜಿ ಜೀರಿಗೆ, 30 ಕೆಜಿ ಕಡಲೆ ಮತ್ತು 30 ಕೆಜಿ ಉದ್ದಿನ ಬೇಳೆ, ಒಟ್ಟು ₹24,000 ಮೌಲ್ಯದ ಸಾಮಗ್ರಿಗೆ ಆರ್ಡರ್ ನೀಡಿದರು.

ಅದೇ ದಿನ ನಾರಾಯಣ ಗೂಗಲ್ ಪೇ ಮೂಲಕ ₹11,000 ಮುಂಗಡ ಪಾವತಿ ಮಾಡಿದರು. ಜೂನ್ 12 ರಂದು, ಆರೋಪಿಯು ವಾಟ್ಸಾಪ್ ಮೂಲಕ ಇನ್‌ವಾಯ್ಸ್ ಕಳುಹಿಸಿ, ಉಳಿದ ಮೊತ್ತದ ಪಾವತಿಗೆ ಒತ್ತಾಯಿಸಿದ ನಂತರ ₹10,000 ಮತ್ತು ₹3,000 ಎರಡು ಹಂತಗಳಲ್ಲಿ ಪಾವತಿಸಲಾಯಿತು.

ಆದರೆ, ಪಾವತಿಸಿದ ಬಳಿಕ ಆರೋಪಿಯು ಯಾವುದೇ ಸರಕುಗಳನ್ನು ಕಳುಹಿಸದಿರುವುದಲ್ಲದೇ ತನ್ನ ಮೊಬೈಲ್‌ನ್ನು ಸ್ವಿಚ್ ಆಫ್ ಮಾಡಿದ್ದಾನೆ. ಇದರಿಂದ ಮೋಸದ ಬಗ್ಗೆ ಖಚಿತತೆ ಪಡೆದ ದೂರುದಾರರು ಶಿರ್ವಾ ಪೊಲೀಸ್ ಠಾಣೆಗೆ ಧಾವಿಸಿ ಪ್ರಕರಣ ದಾಖಲಿಸಿದ್ದಾರೆ.

ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು 316(2), 318(2) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(ಡೀ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.