ತೇಪೆ ಹಚ್ಚಲು ಹೋಗಿ ಮತ್ತಷ್ಟು ಎಡವಟ್ಟು ಮಾಡಿಕೊಂಡ ವಿಮ್ಸ್, ಸಾವಿನ ಲೆಕ್ಕದಲ್ಲೂ ಎಡವಟ್ಟು ಮಾಡಿಕೊಂಡಿರೋ ವೈದ್ಯಕೀಯ ಮಂಡಳಿ 

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬಳ್ಳಾರಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಳ್ಳಾರಿ(ಸೆ.15):  ಸದಾ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಇದೀಗ ಮತ್ತೊಂದು ಎಡವಟ್ಟು ನಡೆದಿದೆ. ಮಂಗಳವಾರ ಇಡೀ ದಿನ ಸಮಪರ್ಕವಾಗಿ ವಿದ್ಯುತ್ ಸರಬರಾಜು ಮಾಡದ ಹಿನ್ನೆಲೆ ಐಸಿಯುನಲ್ಲಿದ್ದ ಇಬ್ಬರು ರೋಗಿಗಳಿಗೆ ವೆಂಟಿಲೇಟರ್ ವ್ಯವಸ್ಥೆ ಸಿಗದೇ ಸಾವನ್ನಪ್ಪಿದ್ದಾರೆ. ಸಾವಿನ ಲೆಕ್ಕ ಕೊಡೋದ್ರಲ್ಲೂ ಎಡವಟ್ಟು ಮಾಡಿಕೊಂಡಿರೋ ವಿಮ್ಸ್ ಆಡಳಿತ ಮಂಡಳಿ ಒಮ್ಮೆ ಮೂವರು ಮತ್ತೊಮ್ಮೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪ್ರಕಟಣೆ ಬಿಡುಗಡೆ ಮಾಡೋ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಸಮರ್ಪಕ ವಿದ್ಯುತ್ ಸರಬರಾಜು ಮಾಡುವಲ್ಲಿ ವಿಫಲ

ಹೌದು, ಏನೋ ಮಾಡಲು ಹೋಗಿ ಇನ್ನೇನು ಮಾಡಿದ್ದಾರೆ ಎನ್ನುವ ಹಾಗೇ ಆಗಿದೆ ಬಳ್ಳಾರಿ ವಿಮ್ಸ್ ಆಸ್ಪತ್ರೆ ಪರಿಸ್ಥಿತಿ. ಯಾಕಂದ್ರೇ, ವಿಮ್ಸ್ ಆಸ್ಪತ್ರೆಗೆಂದೇ ಎಕ್ಸ್ ಪ್ರೆಸ್ ಫೀಡರ್ ಲೈನ್ ಕರೆಂಟ್ ವ್ಯವಸ್ಥೆ ಇದ್ರೂ ಕೂಡ ಅದರ ನಿರ್ವಹಣೆ ಸರಿಯಾಗಿ ಮಾಡದ ಹಿನ್ನೆಲೆ ಮಂಗಳವಾರ ಇಡೀ ದಿನ ಕರೆಂಟ್ ಸಮಸ್ಯೆ ಎದುರಾಗಿದೆ. ಐಸಿಯೂನಲ್ಲಿರೋ ರೋಗಿಗಳಿಗೆ ವೆಂಟಿಲೇಟರ್ ವ್ಯವಸ್ಥೆ ಇಲ್ಲದ ಕಾರಣ ಸಾಕಷ್ಟು ತೊಂದರೆಯಾಗಿದೆ. ಹತ್ತಕ್ಕೂ ಹೆಚ್ಚು ರೋಗಿಗಳು ಇರೋ ವಾರ್ಡ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಐಸಿಯುನಲ್ಲಿ ಇಬ್ಬರು ರೋಗಿಗಳು ಸಾವಿಗೀಡಾದ ಬಳಿಕ ವಿಡಿಯೋ ಮಾಡಿದ ರೋಗಿಗಳ ಸಂಬಂಧಿಕರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡೋ ಮೂಲಕ ಆಸ್ಪತ್ರೆ ಅವ್ಯವಸ್ಥೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಆದ್ರೇ, ವಿದ್ಯತ್ ಏರಿಳಿತದಲ್ಲಿ ವಿಷಪೂರಿತ ಹಾವಿನ ಕಡಿತದಿಂದ ಚಿಟ್ಟೆಮ್ಮ ಮತ್ತು ಕಿಡ್ನಿ ವೈಫಲ್ಯದಿಂದ ಹುಸೇನ್ ಅಲಿ ಸಾವನ್ನಪ್ಪಿದ್ದಾರೆ. ಈ ಸಾವಿಗೆ ಯಾರು ಹೊಣೆ ಎಂದು ರೋಗಿಯ ಸಂಬಂಧಿ ನಾಗರಾಜ್ ಪ್ರಶ್ನಿಸುತ್ತಿದ್ದಾರೆ.

ಬದಲಾಗಿದೆ ವಿಮ್ಸ್‌, ಬಡವರಿಗೆ ತಕ್ಷಣ ಚಿಕಿತ್ಸೆ

ಈ ಸಾವಿಗೆ ಹೊಣೆ ಯಾರು? 

ಇನ್ನು ವಿಮ್ಸ್ ಆಸ್ಪತ್ರೆಯಲ್ಲಿ ಈ ರೀತಿಯ ತೊಂದರೆಗಳಿಂದ ಆಗಾಗ ರೋಗಿಗಳ ಮತ್ತು ವೈದ್ಯರ ಮಧ್ಯೆ ವಾಗ್ವಾದ ನಡೆಯೋದು ಸಾಮಾನ್ಯ ಆದ್ರೇ, ಈ ಬಾರಿ ಇಲ್ಲಿಯ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಎರಡು ಪ್ರಾಣಗಳೇ ಹೋಗಿರೋದು ಮಾತ್ರ ನಾಚಿಕೆಗೇಡಿನ ಸಂಗತಿಯಾಗಿದೆ. ಆದ್ರೇ ಈ ಬಗ್ಗೆ ಸ್ಪಷ್ಟನೆ ನೀಡಿದ ವಿಮ್ಸ್ ಆಡಳಿತ ಮಂಡಳಿ ವಿದ್ಯುತ್ ಸ್ಥಗಿತಗೊಂಡಿರೋದು ನಿಜ ಆದ್ರೇ, ಇಬ್ಬರು ಸಾವಿಗೆ ವಿದ್ಯುತ್ ಕಾರಣವಲ್ಲ ಅವರಿಬ್ಬರ ಕಂಡಿಷನ್ ತುಂಬಾ ಸಿರಿಯಸ್ ಇತ್ತು ಹೀಗಾಗಿ ಸಾವನ್ನಪ್ಪಿದ್ದಾರೆಂದು ತೆಪೆ ಹಚ್ಚೋ ಕೆಲಸ ಮಾಡಿದ್ದಾರೆ. ಅಲ್ಲದೇ ಒಮ್ಮೆ ಇಬ್ಬರು ಸಾವನ್ನಪ್ಪಿದ್ಧಾರೆ ಮತ್ತೊಮ್ಮೆ ಮೂವರು ಸಾವನ್ನಪ್ಪಿದ್ದಾರೆ ಎನ್ನುವ ಮೂಲಕ ಎಡವಟ್ಟಿನ ಪ್ರಕಟಣೆಯನ್ನು ನೀಡಿ ರೋಗಿಗಳ ಸಂಬಂಧಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ಐಸಿಯು ವಾರ್ಡ್‌ನಲ್ಲಿದ್ದ ಇಬ್ಬರು ರೋಗಿಗಳು ಸಾವನ್ನಪ್ಪಿದ ಬಳಿಕ ಎಚ್ಚೆತ್ತುಕೊಂಡ ವಿಮ್ಸ್ ಆಡಳಿತ ಮಂಡಳಿ ಐಸಿಯು ವಾರ್ಡ್‌ನಲ್ಲಿದ್ದ ಹತ್ತಕ್ಕೂ ಹೆಚ್ಚು ರೋಗಿಗಳನ್ನು ಮತ್ತೊಂದು ಓಟಿಗೆ ಶಿಫ್ಟ್ ಮಾಡೋ ಮೂಲಕ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಇದಕ್ಕೆಲ್ಲ ವಿಮ್ಸ್ ಆಸ್ಪತ್ರೆ ಸಿಬ್ಬಂದಿ ಹೊಣೆ ಎಂದು ರೋಗಿಯ ಸಂಬಂಧಿ ಮಹಮ್ಮದ ಉಮರ್ ಆರೋಪಿಸಿದ್ದಾರೆ.

ಸದ್ಯ ಕರೆಂಟ್ ಆನ್ ಇದ್ರೂ ಕೇವಲ ಬಲ್ಬ್‌ಗಳು ಮಾತ್ರ ಅನ್ ಆಗ್ತಿದ್ದು, ಫ್ಯಾನ್, ವೆಂಟಿಲೇಟರ್ ಸೇರಿದಂತೆ ಇನ್ಯಾವುದೇ ವಿದ್ಯುತ್ ಉಪಕರಣಗಳು ಆನ್ ಆಗ್ತಿಲ್ಲ. ಖಾಸಗಿಯಾಗಿ ಜನರೇಟರ್ ತಂದಿದ್ದು, ಅದರಿಂದಲೇ ಎಲ್ಲವನ್ನು ಸರಿದೂಗಿಸೋ ಕೆಲಸ ಮಾಡುತ್ತಿದ್ದಾರೆ. ಅದೇನೆ ಇರಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬಲಿಯಾದಂತೆ ವಿಮ್ಸ್ ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ಎರಡು ಜೀವಗಳು ಬಲಿಯಾಗಿರೋದು ಮಾತ್ರ ದುರ್ದೈವದ ಸಂಗತಿಯಾಗಿದೆ.