*   ತಾವರೆಕೆರೆ ಮೇಲ್ಸೇತುವೆ ಮೇಲೆ ನಡೆದ ಘಟನೆ*   ಕೋಲಾರಕ್ಕೆ ತೆರಳುತ್ತಿದ್ದ ಮೃತ ಯುವಕರು*   ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು

ಹೊಸಕೋಟೆ(ನ.13):  ಮೇಲ್ಸೇತುವೆ(Flyover) ಮೇಲೆ ಕಾರಿನ ಮುಂದೆ ಸೆಲ್ಫಿ(Selfie) ತೆಗೆದುಕೊಳ್ಳುವ ವೇಳೆ ಹಾಲಿನ ಕ್ಯಾಂಟರ್‌ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಮೃತಪಟ್ಟು(Death), ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ನಂದಗುಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ತಾವರೆಕೆರೆ ಮೇಲ್ಸೇತುವೆ ಮೇಲೆ ನಡೆದಿದೆ.

ದಿನೇಶ್‌(25), ವಿನಯ್‌(25) ಮೃತರು. ಉಳಿದಂತೆ ಜನಾರ್ದನ್‌ ಹಾಗೂ ಜಾಸ್ಮಿನ್‌ ಗಂಭೀರ ಗಾಯಗೊಂಡಿದ್ದು ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲತಃ ಬೆಂಗಳೂರಿನ (Bengaluru) ವೈಟ್‌ಪೀಲ್ಡ್‌ ನವರಾದ ಯುವಕರು ಕಾರ್ಯನಿಮಿತ್ತ ನಿನ್ನೆ ತಡರಾತ್ರಿ 1 ಗಂಟೆ ಸಮಯದಲ್ಲಿ ಕೋಲಾರಕ್ಕೆ(Kolar) ತೆರಳುತ್ತಿದ್ದರು. ಈ ವೇಳೆ ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿ 75ರ ತಾವರೆಕೆರೆ ಗ್ರಾಮದ ಮೇಲ್ಸೇತುವೆ ಕಾರನ್ನು ನಿಲ್ಲಿಸಿ ಸೆಲ್ಪಿ ತೆಗೆದುಕೊಳ್ಳಲು ಮುಂದಾದಾಗ ಹಿಂಬದಿಯಿಂದ ಬಂದಂತಹ ಹಾಲಿನ ಕ್ಯಾಂಟರ್‌ ವಾಹನ ಡಿಕ್ಕಿ(Accident) ಹೊಡೆದಿದೆ.

ಈ ವೇಳೆ ಇಬ್ಬರು ಸ್ಥಳದಲ್ಲೆ ಮೃತಪಟ್ಟರೆ, ಇನ್ನೊಬ್ಬ ಮೇಲ್ಸೆತುವೆಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ವಿಷಯ ತಿಳಿದ ನಂದಗುಡಿ ಪೊಲೀಸ್‌ ಠಾಣೆ(Police Station) ಆರಕ್ಷಕ ಉಪ ನಿರೀಕ್ಷಕ ಶಂಕರಪ್ಪ ತಕ್ಷಣ ಸ್ಥಳಕ್ಕೆ ಭೇಟಿ ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ(Hospital) ರವಾನಿಸಿದ್ದಾರೆ.

ಸೆಲ್ಫಿಗಾಗಿ ಪ್ರಾಣ ಕಳೆದು ಕೊಂಡ ಹಾಂಗ್ ಕಾಂಗ್ ಮಾಡೆಲ್!

ಸೆಲ್ಫಿ ಅವಾಂತರ; ಕಾಳಿ ನದಿಗೆ ಬಿದ್ದ ಬೀದರ್ ಪ್ರೇಮಿಗಳು ನಾಪತ್ತೆ

ಉತ್ತರ ಕನ್ನಡ(Uttara Kannada) ಜಿಲ್ಲೆಯ ಜೋಯಿಡಾ(Joida) ತಾಲೂಕಿನ ಗಣೇಶಗುಡಿಯ ಸೇತುವೆಯ ಬಳಿ ಬೀದರ್‌ ಮೂಲದ ಪ್ರೇಮಿಗಳು ಸೆಲ್ಪಿ ತೆಗೆಯಲು ಸೇತುವೆ ನಿಂತಾಗ ಕಾಲು ಜಾರಿ ಕಾಳಿ ನದಿಗೆ ಬಿದ್ದಿದ್ದ ಘಟನೆ ಏ.12 ರಂದು ನಡೆದಿತ್ತು.

ದಾಂಡೇಲಿಯಿಂದ(Dandeli) ಆಟೋದಲ್ಲಿ ಗಣೇಶಗುಡಿಗೆ ಬಂದ ಪ್ರೇಮಿಗಳು ಸೆಲ್ಪಿ ತೆಗೆಯುವ ಹುಮ್ಮಸಿನಲ್ಲಿ ಗಣೇಶಗುಡಿಯ ಸೇತುವೆ ಮೇಲೆ ಏರಿದ್ದಾರೆ. ಕಾಲು ಜಾರಿದ ಕಾರಣ ಇಬ್ಬರು ನದಿಯಲ್ಲಿ ಬಿದ್ದಿದ್ದರು. ಅವರನ್ನು ಅಲ್ಲಿಗೆ ಬಿಟ್ಟ ಆಟೋ ಚಾಲಕ ಇದನ್ನು ಗಮನಿಸಿದ್ದನು. ಕೂಡಲೇ ಇವರು ನದಿಗೆ ಬಿದ್ದ ಮಾಹಿತಿಯನ್ನು ಪೋಲಿಸರಿಗೆ ತಿಳಿಸಿದ್ದನು.

ಆನೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಕಣ್ಣು ಕಳೆದುಕೊಂಡ

ಕಾಡಾನೆಗಳೊಂದಿಗೆ(Elephant) ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕನೋರ್ವ ಕಣ್ಣು ಕಳೆದುಕೊಂಡ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಾಟೇರಿ ಗ್ರಾಮದ ಬಳಿ ಏ.02 ರಂದು ನಡೆದಿತ್ತು. ರಾಜಪ್ಪ (24) ಕಣ್ಣು ಕಳೆದುಕೊಂಡ ಯುವಕ. ಮಾಲೂರು ತಾಲೂಕಿನ ಅರಳೇರಿ ಗ್ರಾಮದ ಹೊರವಲಯದದಲ್ಲಿದ್ದ ಬಾಳೆ, ಹಲಸು, ಟೊಮೆಟೊ, ಸೌತೆಕಾಯಿ ತೋಟಗಳ ಮೇಲೆ ದಾಳಿ ನಡೆಸಿದ ಆನೆಗಳ ಹಿಂಡು ಕಾಟೇರಿ ಗ್ರಾಮದ ಕೆರೆಯ ಬಳಿ ಬೀಡು ಬಿಟ್ಟಿದ್ದವು. ಈ ವೇಳೆ ಹತ್ತಿರದಿಂದ ಸೆಲ್ಫಿ ತೆಗೆದುಕೊಳ್ಳಲು ರಾಜಪ್ಪ ಆನೆಗಳ ಸಮೀಪ ಹೋಗಿದ್ದು, ಆನೆಗಳು ಆತನನ್ನು ಅಟ್ಟಿಸಿಕೊಂಡು ಬಂದಿವೆ. ಈ ವೇಳೆ ಆನೆಗಳಿಂದ ತಪ್ಪಿಸಿಕೊಂಡು ಓಡುವಾಗ ರಾಜಪ್ಪ ಎಡವಿ ಬಿದ್ದಿದ್ದು, ಆಗ ನೀಲಗಿರಿ ಕಡ್ಡಿಯೊಂದು ನೇರವಾಗಿ ಆತನ ಎಡಗಣ್ಣಿಗೆ ಚುಚ್ಚಿದ್ದು, ಕಣ್ಣು ಕಳೆದುಕೊಂಡಿದ್ದನು. 

20 ಜನ ಸಿಡಿಲಿಗೆ ಬಲಿ, ಇವರಲ್ಲಿ 11 ಜನರೂ ಸೆಲ್ಫೀ ತೆಗೀತಿದ್ರು..!

'ಗನ್ ಜತೆ ಒಂದು ಸೆಲ್ಫಿ' ಪ್ರಾಣ ಕಳೆದುಕೊಂಡ ನವವಿವಾಹಿತೆ

ಈ ನವವಿವಾಹಿತೆ ಸೆಲ್ಫಿ ಹುಚ್ಚಿಗೆ ಬಲಿಯಾದ ಘಟನೆ ಉತ್ತರ ಪ್ರದೇಶದ ಲಕ್ನೋ ನಗರದಲ್ಲಿ ಜು.25 ರಂದು ನಡೆದಿತ್ತು. ಗನ್ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಳು. ಈ ವೇಳೆ ಗನ್ ಲೋಡ್ ಆಗಿದ್ದು ಗೊತ್ತಿರಲಿಲ್ಲ. 
26 ವರ್ಷದ ನವವಿವಾಹಿತೆ ರಾಧಿಕಾ ಗುಪ್ತಾ ಸೆಲ್ಫಿ ಹುಚ್ಚಿಗೆ ಬಲಿಯಾದವರು. ಸೆಲ್ಫಿ ಕ್ಲಿಕ್ ಮಾಡಿಕೊಳ್ಳಲು ಹೋಗಿ ಮೊಬೈಲ್ ಬದಲು ಗನ್ ಟ್ರಿಗರ್ ಒತ್ತಿದ್ದಾರೆ. 

ಗುಂಡು ಗಂಟಲು ಹೊಕ್ಕಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗುತ್ತಿತ್ತು, ಆದರೆ ಮಾರ್ಗ ಮಧ್ಯಯೇ ಅವರು ಮೃತಪಟ್ಟಿದ್ದಾರೆ. ಲೈಸನ್ಸ್ ಇರುವ ಗನ್ ಇದಾಗಿದ್ದು ಮೃತಪಟ್ಟವಳ ಮಾವ ಉಪಯೋಗಿಸುತ್ತಿದ್ದ. ಕೆಲ ದಿನಗಳ ಹಿಂದಷ್ಟೆ ಮನೆಗೆ ತಂದಿದ್ದರು ಎಂದು ಮಾವ ರಾಜೇಶ್ ಗುಪ್ತಾ ತಿಳಸಿದ್ದಾರೆ. ಸೊಸೆ ಹೀಗೆ ಯಾಕೆ ಮಾಡಿಕೊಂಡಳು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.