Asianet Suvarna News Asianet Suvarna News

ತುಮಕೂರು : ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿ

ತುಮಕೂರು ನಗರವೂ ಸೇರಿದಂತೆ ಜಿಲ್ಲೆಯ ಅಂಗಡಿ, ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಮೊದಲ ಅದ್ಯತೆ ನೀಡಬೇಕೆಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

Tumkur Prefer Kannada language in nameplates snr
Author
First Published Dec 28, 2023, 9:44 AM IST

  ತುಮಕೂರು :  ತುಮಕೂರು ನಗರವೂ ಸೇರಿದಂತೆ ಜಿಲ್ಲೆಯ ಅಂಗಡಿ, ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಮೊದಲ ಅದ್ಯತೆ ನೀಡಬೇಕೆಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

ನಗರಪಾಲಿಕೆ ಮುಂಭಾಗದಲ್ಲಿ ಸಮಾವೇಶಗೊಂಡ ಕರುನಾಡ ವಿಜಯಸೇನೆಯ ಕಾರ್ಯಕರ್ತರು, ಸರ್ಕಾರವೇ ಕನ್ನಡ ಭಾಷೆಯನ್ನು ಅಡಳಿತ ಭಾಷೆಯಾಗಿ ಬಳಕೆ ಮಾಡುತ್ತಿದ್ದರೂ ಪಾಲಿಕೆ ಅಧಿಕಾರಿಗಳು ನಿಯಮ ಉಲ್ಲಂಘಿಸಿರುವ ಅಂಗಡಿ, ಮುಂಗಟ್ಟುಗಳಿಗೆ ದಂಡ ವಿಧಿಸಿ, ನಿಯಮದಂತೆ ಕನ್ನಡ ನಾಮಫಲಕವನ್ನು ದೊಡ್ಡದಾಗಿ ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಕರುನಾಡ ವಿಜಯಸೇನೆಯ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ, ಕರ್ನಾಟಕ ಶಾಫ್ಸ್ ಅಂಡ್ ಎಷ್ಟಾಬ್ಲಷ್‌ಮೆಂಟ್ ರೂಲ್ಸ್ 1963ರ ಕಲಂ 2 ಎ ಪ್ರಕಾರ ಕರ್ನಾಟಕದಲ್ಲಿ ವ್ಯವಹಾರ ನಡೆಸುವ ಎಲ್ಲಾ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಮೊದಲ ಅದ್ಯತೆ ನೀಡಬೇಕು. ಕನ್ನಡ ಭಾಷೆಯಲ್ಲಿ ಅಂಗಡಿ ಹಸರು ಶೇ.70 ರಷ್ಟಿದ್ದು, ಶೇ.30 ರಷ್ಟು ಇಂಗ್ಲಿಷ್‌ ಅಥವಾ ಇತರೆ ಭಾಷೆಯಲ್ಲಿ ಇರಬೇಕು ಎಂಬ ನಿಯಮವಿದೆ ಎಂದರು. ಆದರೆ ತುಮಕೂರು ನಗರದಲ್ಲಿ ಈ ನಿಯಮವನ್ನು ಪಾಲಿಸಿಲ್ಲ ಎಂದರು.

ಹತ್ತಾರು ಬಾರಿ ಕರುನಾಡ ವಿಜಯಸೇನೆ ಪ್ರತಿಭಟನೆಯ ನಂತರ ಕರ್ನಾಟಕ ಶಾಫ್ಸ್ ಅಂಡ್ ಎಷ್ಟಾಬ್ಲಿಷ್‌ಮೆಂಟ್ ರೂಲ್ಸ್ 1963ರ ಕಲಂ 2 ಎ ಯನ್ನು ರಾಜ್ಯ ಸರಕಾರ ನೋಟಿಫಿಕೇಶನ್ ಹೊರಡಿಸಿದೆ. ಅದರೂ ಪಾಲಿಕೆ ಅಧಿಕಾರಿಗಳು ನಿರ್ಲಕ್ಷದಿಂದ ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಎಂಬುದು ತುಮಕೂರು ನಗರದಲ್ಲಿ ಮರೀಚಿಕೆಯಾಗಿದೆ. ಇಂದು ಮತ್ತೊಮ್ಮೆ ಪಾಲಿಕೆಗೆ ಮನವಿ ಸಲ್ಲಿಸುವುದರ ಜೊತೆಗೆ, ಎಲ್ಲಾ ಅಂಗಡಿಗಳಿಗೂ ಸರಕಾರದ ಆದೇಶವನ್ನು ಒಳಗೊಂಡ ಕರಪತ್ರ ವಿತರಿಸಿ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಇದಕ್ಕೆ ಅಂಗಡಿ ಮಾಲೀಕರು ಸ್ಪಂದಿಸದಿದ್ದರೆ, ಕನ್ನಡಕ್ಕೆ ಅದ್ಯತೆ ನೀಡದ ನಾಮಫಲಕಗಳಿಗೆ ಮಸಿ ಬಳಿಯುವುದು ಅನಿವಾರ್ಯ ಎಂದು ಅರುಣ್ ಕೃಷ್ಣಯ್ಯ ತಿಳಿಸಿದರು.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ನಗರಪಾಲಿಕೆಯ ಉಪ ಆಯುಕ್ತ ಗಿರೀಶ್, ಈಗಾಗಲೇ ನಮ್ಮ ಹೆಲ್ತ್ ಇನ್ಸ್ ಪೆಕ್ಟರ್‌ಗಳು ದೊಡ್ಡದಾಗಿ ಕನ್ನಡ ನಾಮಫಲಕಗಳನ್ನು ಹಾಕದ ಅಂಗಡಿಗಳನ್ನು ಗುರುತಿಸಿ ನೋಟಿಸ್‌ ನೀಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಶೀಘ್ರದಲ್ಲಿಯೇ ಅಂತಹ ಅಂಗಡಿಗಳ ಮಾಲೀಕರು ಕನ್ನಡದಲ್ಲಿ ನಾಮಫಲಕ ಪ್ರದರ್ಶಿಸುವಂತೆ ಸೂಚನೆ ನೀಡಲಾಗುವುದು. ಕನ್ನಡ ಭಾಷೆಗೆ ಮೊದಲ ಅದ್ಯತೆ ನೀಡುವ ಸಂಬಂಧ ಪಾಲಿಕೆ ಮುಂಚೂಣಿಯಲ್ಲಿದೆ ಎಂದು ಪ್ರತಿಭಟನಾ ನಿರತ ಕರುನಾಡ ವಿಜಯಸೇನೆಯ ಪದಾಧಿಕಾರಿಗಳಿಗೆ ಭರವಸೆ ನೀಡಿದರು.

ಈ ವೇಳೆ ಕರುನಾಡ ವಿಜಯಸೇನೆಯ ನಗರ ಅಧ್ಯಕ್ಷ ಯಧುನಂದನ್, ಪ್ರಧಾನ ಕಾರ್ಯದರ್ಶಿ ಹರೀಶ್.ಎ.ಜಿ.,ಉಪಾಧ್ಯಕ್ಷ ಮನ್ಸೂರ್ ಅಲಿಪಾಷ, ವಿದ್ಯಾರ್ಥಿ ಘಟಕದ ಅಧ್ಯಕ್ಸ ಪವನ್, ಸಂಘಟನಾ ಕಾರ್ಯದರ್ಶಿ ಆದೇಶ್, ನಯನಕುಮಾರ್, ದರ್ಶನ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಾಸಿರ್ ಅಹಮದ್, ಗಂಗೇಶ್, ಪ್ರತಾಪ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತುಮಕೂರಿನಲ್ಲಿ ಕನ್ನಡಕ್ಕಿಂತ ಅಂಗ್ಲಭಾಷೆಯ ನಾಮಫಲಕಗಳೇ ಎದ್ದು ಕಾಣುತ್ತಿವೆ. ಕನ್ನಡ ನಾಡಿನ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಇಂಗ್ಲಿಷ್ ಭಾಷೆಗೆ ಅದ್ಯತೆ ನೀಡುತ್ತಿರುವ ಅಂಗಡಿಗಳಿಗೆ ಕೂಡಲೇ ನೋಟಿಸ್‌ ನೀಡಿ, ದಂಢ ವಿಧಿಸಬೇಕು. ಮುಂದಿನ ೧೫ ದಿನಗಳಲ್ಲಿ ಆಗಿರುವ ನೂನ್ಯತೆಯನ್ನು ಸರಿಪಡಿಸದಿದ್ದರೆ ಸ್ವತಹಃ ಕರುನಾಡ ವಿಜಯಸೇನೆ ವತಿಯಿಂದ ಅಂಗ್ಲ ನಾಮಫಲಕಗಳನ್ನು ತೆಗದು ಹಾಕುವುದು, ಇಲ್ಲವೇ ಮಸಿ ಬಳಿಯುವ ಕೆಲಸ ಮಾಡಲಾಗುವುದು.

ಅರುಣ್ ಕೃಷ್ಣಯ್ಯ ಜಿಲ್ಲಾಧ್ಯಕ್ಷ, ಕರುನಾಡ ವಿಜಯಸೇನೆ.

Follow Us:
Download App:
  • android
  • ios