Asianet Suvarna News Asianet Suvarna News

Tumakur : ಬೆಂಕಿ ಬೀಳುವ ಭೀತಿಯಲ್ಲಿ ಜಿಲ್ಲೆಯ ಕಾಡು!

ಜಿಲ್ಲೆಯ ದೇವರಾಯನದುರ್ಗ, ಸಿದ್ದರಬೆಟ್ಟ, ತಿಮ್ಲಾಪುರ ಅಭಯಾರಣ್ಯ, ಬುಕ್ಕಪಟ್ಟಣ, ತೀರ್ಥಪುರ, ಉಜ್ಜಿನಿ ಅರಣ್ಯ, ಮಂಚಲದೊರೆ, ನಿಡಗಲ್‌ ಹಾಗೂ ಜಯಮಂಗಲಿ ಅರಣ್ಯಗಳು ಕಾಡಿನ ಬೆಂಕಿಯ ಭೀತಿ ಎದುರಿಸುತ್ತದೆ. ಫೆಬ್ರವರಿ ತಿಂಗಳ ಬಳಿಕ ಮಾಚ್‌ರ್‍ ಹಾಗೂ ಏಪ್ರಿಲ್‌ನಲ್ಲಿ ವ್ಯಾಪಕ ಬೇಗೆ ಇದ್ದು ಅರಣ್ಯಕ್ಕೆ ಬೆಂಕಿ ತಗುಲುವ ಅಪಾಯವಿದೆ. ಹೀಗಾಗಿ ಜಿಲ್ಲೆ ಸುಮಾರು 10 ಸಾವಿರ ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರುವ ಅರಣ್ಯಕ್ಕೀಗ ಬೆಂಕಿ ಬೀಳುವ ಭೀತಿ ಎದುರಾಗಿದೆ.

Tumkur Forest of the district in danger of fire  snr
Author
First Published Jan 31, 2023, 6:19 AM IST

 ಉಗಮ ಶ್ರೀನಿವಾಸ್‌

 ತುಮಕೂರು :  ಜಿಲ್ಲೆಯ ದೇವರಾಯನದುರ್ಗ, ಸಿದ್ದರಬೆಟ್ಟ, ತಿಮ್ಲಾಪುರ ಅಭಯಾರಣ್ಯ, ಬುಕ್ಕಪಟ್ಟಣ, ತೀರ್ಥಪುರ, ಉಜ್ಜಿನಿ ಅರಣ್ಯ, ಮಂಚಲದೊರೆ, ನಿಡಗಲ್‌ ಹಾಗೂ ಜಯಮಂಗಲಿ ಅರಣ್ಯಗಳು ಕಾಡಿನ ಬೆಂಕಿಯ ಭೀತಿ ಎದುರಿಸುತ್ತದೆ. ಫೆಬ್ರವರಿ ತಿಂಗಳ ಬಳಿಕ ಮಾಚ್‌ರ್‍ ಹಾಗೂ ಏಪ್ರಿಲ್‌ನಲ್ಲಿ ವ್ಯಾಪಕ ಬೇಗೆ ಇದ್ದು ಅರಣ್ಯಕ್ಕೆ ಬೆಂಕಿ ತಗುಲುವ ಅಪಾಯವಿದೆ. ಹೀಗಾಗಿ ಜಿಲ್ಲೆ ಸುಮಾರು 10 ಸಾವಿರ ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರುವ ಅರಣ್ಯಕ್ಕೀಗ ಬೆಂಕಿ ಬೀಳುವ ಭೀತಿ ಎದುರಾಗಿದೆ.

ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳೊಳಗೆ ಅರಣ್ಯ ಇಲಾಖೆಯವರು ಬೆಂಕಿ ಬೀಳದಂತೆ ಅಥವಾ ಬಿದ್ದ ಬೆಂಕಿ ಹಬ್ಬದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಈವರೆಗೆ ಯಾವ ಕ್ರಮವನ್ನು ಕೈ ಗೊಂಡಿಲ್ಲ. ರಸ್ತೆ ಬದಿಯ ಹುಲ್ಲನ್ನು ತೆರವುಗೊಳಿಸಬೇಕು, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾಡಿಗೆ ಬೆಂಕಿ ಬಿದ್ದಾಗ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಬೆಂಕಿ ಹರಡದಂತೆ ಬೆಂಕಿ ನಿಯಂತ್ರಣ ದಾರಿ ಮಾಡಬೇಕು. ಕಾಡಿನ ಆಸು ಪಾಸು ಜನರಿಗೆ ಜಾಗೃತಿ ಮೂಡಿಸುವಂತಹ ಸಭೆಗಳು, ಪೋಸ್ಟರ್‌ಗಳು ಮತ್ತು ಫಲಕಗಳನ್ನು ಹಾಕಬೇಕಿತ್ತು. ಆದರೆ ಇದ್ಯಾವುದನ್ನು ಮಾಡುವ ಗೋಜಿಗೆ ಇಲಾಖೆ ಹೋಗಿಲ್ಲ. ಅಲ್ಲದೇ ಎಲ್ಲಾ ಹಂತದ ಸಿಬ್ಬಂದಿ ಹಾಗೂ ಆಸುಪಾಲಿನಲ್ಲಿರುವ ಜನರಿಗೆ ತರಬೇತಿ ನೀಡಿ ಬೆಂಕಿ ನಿಯಂತ್ರಿಸುವ ಬಗ್ಗೆ ಮಾರ್ಗದರ್ಶನ ಮಾಡಬೇಕಾಗಿತ್ತು. ಗ್ರಾಮ ಅರಣ್ಯ ಸಮಿತಿಯವರಿಗೆ ಮತ್ತು ಇಲಾಖೆಯ ಸಿಬ್ಬಂದಿ ವರ್ಗಕ್ಕೆ ವಿಶೇಷವಾದ ತರಬೇತಿ ನೀಡಬೇಕು. ಸುಸಜ್ಜಿತ ಪಡೆಯನ್ನು ಕಟ್ಟಿಕೊಳ್ಳಬೇಕು. ಎಲ್ಲೇ ಬೆಂಕಿ ಬಿದ್ದರೂ ನಿಯಂತ್ರಿಸುವ ಸಿದ್ಧತೆ ಇರಬೇಕು. ಆದರೆ ಅದ್ಯಾವುದು ನಡೆದಿಲ್ಲ.

ಈಗಾಗಲೇ ಬೆಂಕಿ ಬಿದ್ದಿದೆ:

ಈಗಾಗಲೇ ಚಿನ್ನಿಗ ಬೆಟ್ಟ, ರಾಮದೇವರ ಬೆಟ್ಟ, ಓಲಗದವರ ಬೆಟ್ಟಗಳಿಗೆ ಬೆಂಕಿ ಬಿದ್ದು ಅಪಾರವಾದ ಕಾಡು ಭಸ್ಮವಾಗಿದೆ. ಮುಂಬರುವ ದಿನಗಳಲ್ಲಿ ಬೆಂಕಿ ಬೀಳುವುದನ್ನು ನಿಯಂತ್ರಿಸಲು ಇಲಾಖೆ ಜಾಗೃತರಾಗುವುದು ಒಳಿತು. ಈ ವರ್ಷ ಹೆಚ್ಚು ಮಳೆ ಬಿದ್ದುದ್ದರಿಂದ ಹುಲ್ಲು ತುಂಬಾ ಬೆಳೆದಿದೆ. ಆದ್ದರಿಂದ ಸ್ವಲ್ಪವೇ ಬೆಂಕಿ ಬಿದ್ದರೂ ಅಪಾರ ಪ್ರಮಾಣದ ಕಾಡು ಸುಟ್ಟು ಭಸ್ಮವಾಗುತ್ತದೆ. ಇದರಿಂದ ಅಪರೂಪದ ಮೂಲಿಕೆಗಳು, ಪೊದೆಗಳು, ಗಿಡಮರಗಳು, ಪ್ರಾಣಿ ಪಕ್ಷಿ ಸಂಕುಲಗಳು ಕಣ್ಮರೆಯಾಗುತ್ತದೆ. ಇದಲ್ಲದೆ ಭೂ ಚರ ಹಾವು, ಹಲ್ಲಿ, ಓತಿ, ಕೀಟಗಳು, ಚಿಟ್ಟೆಗಳು ಇವುಗಳ ಮೊಟ್ಟೆಗಳು ಭಸ್ಮವಾಗುತ್ತದೆ.

ಈಗಲೂ ಕಾಲ ಮಿಂಚಿಲ್ಲ. ಈ ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು. ಆದರೆ ಅರಣ್ಯ ಇಲಾಖೆಯವರು ಎಂದಿನಂತೆ ಸಿಬ್ಬಂದಿ ಕೊರತೆ ಎಂಬ ಸಬೂಬು ಹೇಳುತ್ತಿದೆ. ತುಮಕೂರಿನ ಸಂರಕ್ಷಿತ ಅರಣ್ಯ ಪ್ರದೇಶವನ್ನು ಕಾಪಾಡಿಕೊಳ್ಳಬೇಕಾಗಿದೆ. ಜಿಲ್ಲೆಯ ಅರಣ್ಯದಲ್ಲಿ ಚಿರತೆ, ಉಡ, ಕಾಡು ಹಂದಿ, ಚಿಪ್ಪುಹಂದಿ, ಜಿಂಕೆ, ಕಡವೆ, ಚಿಂಕಾರ, ಕೃಷ್ಣಮೃಗ ಮುಂತಾದ ಪ್ರಾಣಿ ಸಂಪತ್ತು ಇದೆ. ಇದೆಲ್ಲವನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ ಇದೆ.

ಈ ಹಿಂದಿನ ವರ್ಷಗಳಿಂದಲೂ ಕಾಡಿಗೆ ಬೆಂಕಿ ಬೀಳುವುದು ನಡೆದುಕೊಂಡೇ ಹೋಗಿದೆ. ಪ್ರತಿ ಬಾರಿ ಬೆಂಕಿ ಬಿದ್ದಾಗಲೂ ಹಲವಾರು ಪ್ರಾಣಿ, ಪಕ್ಷಿ, ಮೂಲಿಕೆಗಳು ನಾಶವಾಗುತ್ತಾ ಬಂದಿದೆ. ಈಗಲಾದರೂ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ಅರಣ್ಯದಲ್ಲಿ ಬೆಂಕಿ ಬೀಳದಂತೆ, ಆಕಸ್ಮಾತ್‌ ಬಿದ್ದರೆ ಅದು ಹಬ್ಬದಂತೆ ಕ್ರಮ ಕೈಗೊಳ್ಳಬೇಕಾಗಿದೆ. ತುಮಕೂರಿನಲ್ಲಿ ವಿಶಿಷ್ಟವಾದ ಸಂರಕ್ಷಿತ ಅರಣ್ಯ ಸಂಪತ್ತಿದೆ. ಈಗಾಗಲೇ ಕಾಡಂಚಿನಲ್ಲಿ ಕಲ್ಲು ಗಣಿಗಾರಿಕೆಯಿಂದ ಕಾಡುಗಳು ನಾಶವಾಗಿದೆ. ಹೀಗಾಗಿ ಬೆಂಕಿ ಬೀಳದಂತೆ ತಪ್ಪಿಸಲು ಅರಣ್ಯವನ್ನು ಸಂರಕ್ಷಿಸಬೇಕು.

ಬೀಟುಗಳನ್ನು ಹೆಚ್ಚಿಸಬೇಕು:

ಸುಮಾರು 10 ಸಾವಿರ ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರುವ ಅರಣ್ಯ ಭಾಗದ ಆಯಾ ಜಾಗದಲ್ಲಿ ಗಸ್ತುಗಳನ್ನು ಹಾಕಬೇಕಾಗಿದೆ. ಒಂದು ವೇಳೆ ಅರಣ್ಯಕ್ಕೆ ಬೆಂಕಿ ಬಿದ್ದರೆ ಕೂಡಲೇ ಅದು ಹಬ್ಬದಂತೆ ಅಲ್ಲೇ ನಂದಿಸಲು ಬೇಕಾದ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಸಿದ್ಧವಾಗಬೇಕಾಗಿದೆ.

1. ಕಾಡಿನಲ್ಲಿ ಬೆಂಕಿ ನಿಯಂತ್ರಣ ದಾರಿಯನ್ನು ಮಾಡಬೇಕು

2. ಗ್ರಾಮ ಅರಣ್ಯ ಸಮಿತಿ ಜೊತೆ ಚರ್ಚೆ ನಡೆಸಬೇಕಾಗಿದೆ

3. ಅರಣ್ಯದಲ್ಲಿ ಗಸ್ತುಗಳನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ

4. ಈಗಾಗಲೇ ಕೆಲವು ಕಡೆ ಅರಣ್ಯಕ್ಕೆ ಬೆಂಕಿ ಕೂಡ ಬಿದ್ದಿದೆ

ಫೋಟೋ ಫೈಲ್‌ 30ಟಿಯುಎಂ7

ತುಮಕೂರಿನ ದೇವರಾಯನದುರ್ಗ ಅರಣ್ಯ

Follow Us:
Download App:
  • android
  • ios