ತುಮಕೂರು ಕಾಲೇಜಿನಲ್ಲಿ ಡಿಗ್ರಿ ಓದುತ್ತಿರುವ 20 ವರ್ಷದ ವಿದ್ಯಾರ್ಥಿನಿ 40 ವರ್ಷದ ವಿವಾಹಿತ ಪುರುಷನನ್ನು ಪ್ರೀತಿಸಿ ಪರಾರಿಯಾಗಿದ್ದು, ನಾಲ್ಕು ದಿನದ ಬಳಿಕ ಶವವಾಗಿ ಪತ್ತೆಯಾಗಿದ್ದಾಳೆ.

ತುಮಕೂರು (ಜೂ.22): ತುಮಕೂರು ಕಾಲೇಜಿನಲ್ಲಿ ಡಿಗ್ರಿ ಓದುತ್ತಿರುವ 20 ವರ್ಷದ ವಿದ್ಯಾರ್ಥಿನಿ 40 ವರ್ಷದ ವಿವಾಹಿತ ಪುರುಷನನ್ನು ಪ್ರೀತಿಸಿ ಪರಾರಿ ಆಗಿದ್ದಳು. ಆದರೆ, ಇವರಿಬ್ಬರ ನಡುವಿನ ವಯಸ್ಸಿನ ಅಂತರ ಹೆಚ್ಚಾಗಿದ್ದರಿಂದ ತಮ್ಮ ಪ್ರೀತಿಗೆ ಮನೆಯವರು ಒಪ್ಪುವುದಿಲ್ಲವೆಂದು ಭಯಗೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಇಬ್ಬರೂ ಪ್ರೇಮಿಗಳ ಶವಗಳು ಪತ್ತೆಯಾಗಿವೆ. ಅನನ್ಯ (19) ಹಾಗೂ ರಂಗಶಾಮಣ್ಣ (40) ಮೃತರೆಂದು ತಿಳಿದುಬಂದಿದೆ. ಮೃತ ವಿದ್ಯಾರ್ಥಿನಿ ಅನನ್ಯಾ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯ ಗ್ರಾಮದವಳಾಗಿದ್ದು, ತುಮಕೂರಿನಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದಳು. ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ ವಿವಾಹಿತ ಪುರುಷನಾಗಿದ್ದು, ಈತನಿಗೆ ಮಡದಿ ಮತ್ತು ಮಕ್ಕಳೂ ಇದ್ದಾರೆ. ಆದರೆ, ಮಗಳ ವಯಸ್ಸಿನ ಯುವತಿಯನ್ನು ಪ್ರೀತಿ ಮಾಡಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

20ರ ವಿದ್ಯಾರ್ಥಿನಿ 50ರ ವಿವಾಹಿತ ಅಂಕಲ್ ಜೊತೆಗೆ ನಾಪತ್ತೆ; ಕೆರೆ ಬಳಿ ಜೋಡಿಗಳ ಚಪ್ಪಲಿ ಪತ್ತೆ!

ಮಗಳು ಓದಿ ಉತ್ತಮ ಶಿಕ್ಷಣ ಪಡೆದು ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಿ ಎಂದು ತಂದೆ ತಾಯಿ ಕಾಲೇಜಿಗೆ ಕಳಿಸಿದರೆ, ಇತ್ತ ವಿವಾಹಿತ ಪುರುಷನೊಬ್ಬ ವಿದ್ಯಾರ್ಥಿನಿಯ ಮನಸ್ಸು ಕೆಡಿಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಾನೆ. ಅಕ್ಕಪಕ್ಕದ ಗ್ರಾಮಸ್ಥರಾದ ಇಬ್ಬರೂ ನಾಪತ್ತೆಯಾಗಿ ಮೂರು ದಿನಗಳಾದರೂ ಪತ್ತೆ ಆಗಿರಲಿಲ್ಲ. ಆಗ ಅವರ ಮೊಬೈಲ್ ಟ್ರೇಸ್ ಮಾಡಿದಾಗ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯ ಬಳಿ ಮೊಬೈಲ್ ಟ್ರೇಸ್ ಆಗಿದೆ. ನಿನ್ನೆ ಮಾವತ್ತೂರು ಕೆರೆ ಬಳಿ ನಿಲ್ಲಿಸಿದ್ದ ರಂಗಶಾಮಣ್ಣನ ಕಾರಿನಲ್ಲಿ ಇಬ್ಬರ ಮೊಬೈಲ್‌ಗಳು, ಕೆರೆಯ ದಂಡೆಯಲ್ಲಿ ಇಬ್ಬರ ಚಪ್ಪಲಿಗಳು ಪತ್ತೆಯಾಗಿವೆ. ಆಗ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯನ್ನು ವ್ಯಕ್ತಪಡಿಸಿದ ಪೊಲೀಸರು ನಿನ್ನೆ ಮಧ್ಯಾಹ್ನದಿಂದಲೇ ಅಗ್ನಿಶಾಮಕ ದಳದ ಸಹಾಯದಿಂದ ಶವ ಪತ್ತೆಗೆ ಮುಂದಾಗಿದ್ದರು.

ಶನಿವಾರ ತಡರಾತ್ರಿಯಾದ ಹಿನ್ನೆಲೆಯಲ್ಲಿ ಶವ ಪತ್ತೆ ಕಾರ್ಯವನ್ನು ಸ್ಥಗಿತಗೊಳಿಸಿ ಪುನಃ ಭಾನುವಾರ ಬೆಳಗ್ಗೆಯಿಂದ ಪುನಃ ಶವ ಹುಡುಕಾಟ ಕಾರ್ಯಾಚರಣೆ ಮುಂದುವರೆಸಿದ್ದರು. ಈ ವೇಳೆ ರಂಗಶಾಮಣ್ಣ ಹಾಗೂ ವಿದ್ಯಾರ್ಥಿನಿ ಅನನ್ಯಾ ಅವರ ಮೃತದೇಹಗಳು ಕೆರೆಯಲ್ಲಿ ಪತ್ತೆಯಾಗಿವೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಪೊಲೀಸರು ಇಬ್ಬರು ಪ್ರೇಮಿಗಳನ್ನು ಅವರ ಮನೆಯವರೇ ಕೊಲೆ ಮಾಡಿರಬಹುದು ಎಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದು, ಮರಣೋತ್ತರ ಪರೀಕ್ಷೆಯಿಂದ ಮಾಹಿತಿ ಲಭ್ಯವಾಗಲಿದೆ.

ಹಲ್ಲೆಯಾಗುವ ಭೀತಿ: ತುಮಕೂರಿಗೆ ದರ್ಶನ್ ಸಹಚರರ ಶಿಫ್ಟ್‌ಗೆ ಪೊಲೀಸರ ಮನವಿ

ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಅನಿಲ್, ಕೊಳಾಲ ಪಿಎಸ್‌ಐ ರೇಣುಕಾ ಯಾದವ್, ಯೋಗೇಶ್ ಮಾವತ್ತೂರು ಕೆರೆ ಬಳಿಯೇ ಠಿಕಾಣಿ ಹೂಡಿ ಮೃತದೇಹ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಈ ಘಟನೆ ಕೊಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತದೇಹ ಸಿಕ್ಕಿರುವ ಬೆನ್ನಲ್ಲಿಯೇ ಮುಂದಿನ ಪ್ರಕ್ರಿಯೆಯನ್ನು ಕೈಗೊಳ್ಳಿದ್ದಾರೆ.