ತಾಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು, ಶುಶ್ರೂಕರು, ಸಿಬ್ಬಂದಿ ಸೇರಿದಂತೆ ಎಲ್ಲಾ ವಿಧದ ಹುದ್ದೆಗಳನ್ನು ಕೂಡಲೇ ತುಂಬಬೇಕೆಂದು ಎಸ್ ಎಫ್ ಐ ಸತೀಶ್ ಆಗ್ರಹಿಸಿದ್ದಾರೆ.

 ತುರುವೇಕೆರೆ :ತಾಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು, ಶುಶ್ರೂಕರು, ಸಿಬ್ಬಂದಿ ಸೇರಿದಂತೆ ಎಲ್ಲಾ ವಿಧದ ಹುದ್ದೆಗಳನ್ನು ಕೂಡಲೇ ತುಂಬಬೇಕೆಂದು ಎಸ್ ಎಫ್ ಐ ಸತೀಶ್ ಆಗ್ರಹಿಸಿದ್ದಾರೆ.

Add Asianetnews Kannada as a Preferred SourcegooglePreferred

ಪತ್ರಕರ್ತರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಲಕ್ಷಾಂತರ ಮಂದಿ ಇದ್ದಾರೆ. ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಇಲ್ಲಿ ಕೇವಲ ಇಬ್ಬರು ವೈದ್ಯರು ಮಾತ್ರ ಇದ್ದು, ಸಾರ್ವಜನಿಕರ ಸೇವೆ ನೀಡಲು ಅಸಾಧ್ಯವಾಗಿದೆ. ಹಗಲು ಮತ್ತು ರಾತ್ರಿ ಪಾಳೆಯಲ್ಲಿ ಕರ್ತವ್ಯ ನಿರ್ವಹಿಸಲು ಸಮಸ್ಯೆಯಾಗಿದೆ. ಸರ್ಕಾರ ಜೀವಗಳ ಜೊತೆ ಚಲ್ಲಾಟವಾಡುವ ಬದಲು ಶೀಘ್ರವೇ ಖಾಲಿ ಇರುವ ಎಲ್ಲಾ ಹುದ್ದೆ ಭರ್ತಿ ಮಾಡಬೇಕೆಂದು ಸತೀಶ್ ಆಗ್ರಹಿಸಿದ್ದಾರೆ.

ಈ ತಿಂಗಳ ಅಂತ್ಯದೊಳಗೆ ಖಾಲಿ ಹುದ್ದೆ ಭರ್ತಿ ಮಾಡದಿದ್ದಲ್ಲಿ ತಾಲೂಕಿನ ಎಲ್ಲಾ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಲಿದೆ ಎಂದು ಸತೀಶ್ ಹೇಳಿದ್ದಾರೆ.

ಈ ಸರ್ಕಾರಿ ಆಸ್ಪತ್ರೆಯು ಹೆಸರಿಗೆ ಮಾತ್ರ 100 ಹಾಸಿಗೆಯ ಆಸ್ಪತ್ರೆಯಾಗಿದೆ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಇಲ್ಲಿಗೆ ಬರುವ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಸಾರ್ವಜನಿಕರಿಗೆ ಸೂಕ್ತ ಚಿಕಿತ್ಸೆ ದೊರೆಯದಾಗಿದೆ. ಸೂಕ್ತ ಚಿಕಿತ್ಸೆ ದೊರೆಯದೇ ಮೃತಪಟ್ಟಿರುವ ಘಟನೆಯೂ ನಡೆದಿದೆ. ಈ ಸಂಬಂಧ ಪ್ರತಿಭಟನೆಗಳು ಆಗಿವೆ. ಆದರೂ ಈ ಆಸ್ಪತ್ರೆಯನ್ನು ಸರಿಪಡಿಸುವ ಮನಸ್ಸು ಯಾರಿಗೂ ಇಲ್ಲದಿರುವುದು ದುರಂತವೇ ಸರಿ ಎಂದು ಸತೀಶ್ ಕಿಡಿಕಾರಿದ್ದಾರೆ.

ಈ ಆಸ್ಪತ್ರೆಯಲ್ಲಿ ಚರ್ಮ ರೋಗ, ನೇತ್ರ ತಜ್ಞರು, ಅರವಳಿಕೆ ತಜ್ಞರು, ಮಕ್ಕಳ ತಜ್ಞರು ಹಲವಾರು ತಜ್ಞರ ಕೊರತೆ ಎದ್ದು ಕಾಣುತ್ತಿದೆ. ಕೂಡಲೇ ಸಮಸ್ಯೆ ಬಗೆಹರಿಸಿ ಸಾರ್ವಜನಿಕರ ಆರೋಗ್ಯ ಕಾಪಾಡಬೇಕೆಂದು ಸತೀಶ್ ಆಗ್ರಹಿಸಿದ್ದಾರೆ.

ಈ ಸಂಧರ್ಭದಲ್ಲಿ ವಿಜಯ ಸೇನೆಯ ಮುಖಂಡ ಕೃಷ್ಣಮೂರ್ತಿ, ಕುಮಾರ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ ಉಪಸ್ಥಿತರಿದ್ದರು.