ಜಿಲ್ಲೆಯ ಹನೂರು ತಾಲೋಕಿನ ಕುರಟ್ಟಿ ಹೊಸೂರು ಹಾಗು ಭದ್ರಯ್ಯನಹಳ್ಳಿಯಲ್ಲಿ ನಾಲ್ಕು ಮಕ್ಕಳು ವಿಚಿತ್ರ ಚರ್ಮರೋಗದಿಂಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ.

ವರದಿ: ಪುಟ್ಟರಾಜು.ಆರ್. ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

Add Asianetnews Kannada as a Preferred SourcegooglePreferred

ಚಾಮರಾಜನಗರ (ಆ.01): ಜಿಲ್ಲೆಯ ಹನೂರು ತಾಲೋಕಿನ ಕುರಟ್ಟಿ ಹೊಸೂರು ಹಾಗು ಭದ್ರಯ್ಯನಹಳ್ಳಿಯಲ್ಲಿ ನಾಲ್ಕು ಮಕ್ಕಳು ವಿಚಿತ್ರ ಚರ್ಮರೋಗದಿಂಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಆರು ತಿಂಗಳ ಮಗುವಾಗಿದ್ದಾಗಲೇ ಈ ವಿಚಿತ್ರ ಚರ್ಮರೋಗ ಕಾಣಿಸಿಕೊಂಡಿದ್ದು ಬಳಿಕ ಮೈ ಚರ್ಮವೆಲ್ಲಾ ಚುಕ್ಕಿಗಳಾಗಿ ಪರಿವರ್ತನೆಯಾಗಿದೆ. ಈ ಮಕ್ಕಳಿಗೆ ದೃಷ್ಟಿ ದೋಷ, ಶ್ರವಣದೋಷ ಉಂಟಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 20-25 ವರ್ಷಗಳ ಹಿಂದೆಯು ಇದೇ ರೀತಿಯ ಚರ್ಮವ್ಯಾಧಿ ಕೆಲವು ಮಕ್ಕಳಿಗೆ ಕಾಣಿಸಿಕೊಂಡು ಅವರು ‌18 ವರ್ಷದ ತುಂಬುವುದರೊಳಗೆ ಸ್ವಾಧೀನ ಕಳೆದುಕೊಂಡು ಸಾವನ್ನಪ್ಪಿದ್ದರು. 

ಇದೀಗ ಇದೇ ಗ್ರಾಮಗಳಲ್ಲಿ ಈ ವಿಚಿತ್ರ ರೋಗ ಮರುಕಳಿಸಿದೆ. ಸದ್ಯ ನಾಲ್ಕು ಮಕ್ಕಳಲ್ಲಿ ಈ ಚರ್ಮರೋಗ ಕಾಣಿಸಿಕೊಂಡಿದ್ದು, ಇಬ್ಬರು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಮತ್ತಿಬ್ಬರು ಗ್ರಾಮದಲ್ಲೇ ವಾಸ ಮಾಡುತ್ತಿದ್ದಾರೆ. ಕುರಟ್ಟಿ ಹೊಸೂರು ಗ್ರಾಮಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗು ವೈದ್ಯಾಧಿಕಾರಿಗಳ ತಂಡ ಪ್ರತ್ಯೇಕವಾಗಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚರ್ಮರೋಗದಿಂದ ಬಳಲುತ್ತಿರುವಮಕ್ಕಳಿಗೆ ಹಾಗು ಕುಟುಂಬವರ್ಗದವರಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿಗಳು ಅಗತ್ಯ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದಾರೆ. ಇನ್ನೊಂದೆಡೆ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್ ನೇತೃತ್ವ ವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಮಕ್ಕಳಿಗೆ ತಗುಲಿರುವ ಚರ್ಮರೋಗದ ಪರಿಶೀಲನೆ ನಡೆಸಿತು. 

ಆಗಸ್ಟ್‌ ಮೊದಲ ವಾರವೇ ಭದ್ರಾ ನಾಲೆಗೆ ನೀರು: ಸಚಿವ ಮಲ್ಲಿಕಾರ್ಜುನ್‌

ಮೇಲ್ನೋಟಕ್ಕೆ ಅನುವಂಶೀಯತೆ, ರಕ್ತ ಸಂಬಂಧದಲ್ಲಿ ವಿವಾಹವಾದವರ ಮಕ್ಕಳಲ್ಲಿ ಹಾಗು ಒಂದೇ ಸಮುದಾಯದಲ್ಲಿ ಈ ಚರ್ಮರೋಗ ಕಂಡುಬಂದಿದ್ದು ಹೆಚ್ಚಿನ ಅಧ್ಯಯನಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ಇದೊಂದು ಮಾರಣಾಂತಿಕ ಚರ್ಮರೋಗವಾಗಿದ್ದು, ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ, ಸೂರ್ಯನ ಕಿರಣ ಮೈಮೇಲೆ ಬೀಳದಂತೆ ಎಚ್ಚರಿಕೆ ವಹಿಸುವುದು, ರಕ್ತ ಸಂಬಂಧದಲ್ಲಿ ಮದುವೆಯಾಗದೆ ಇರುವುದು ಮೊದಲಾದ ಕ್ರಮ ಅನುಸರಿಸಬೇಕು ಎಂಬುದು ವೈದ್ಯರ ಮಾತಾಗಿದೆ.