ಪಪಂ ಸಿಬ್ಬಂದಿಯಿಂದಲೇ ಸೇಲ್: ಡಬಲ್ ದರಕ್ಕೆ ಗುಟ್ಕಾ ಅಕ್ರಮ ಮಾರಾಟ..!
ವಶಪಡಿಸಿಕೊಂಡ ಗುಟ್ಕಾ ಅಕ್ರಮ ಮಾರಾಟ| ವಶಪಡಿಸಿಕೊಂಡ ತಂಬಾಕು ಪದಾರ್ಥ ಪಪಂ ಸಿಬ್ಬಂದಿಯಿಂದ ಮಾರಾಟ ಆರೋಪ| ಕೊಪ್ಪಳ ಜಿಲ್ಲೆಯಲ್ಲಿ ನಡೆದ ಘಟನೆ| 78.900 ಕೆಜಿ ತಂಬಾಕು ಉತ್ಪನ್ನ ವಶ|
ಕನಕಗಿರಿ(ಏ.29): ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಟ್ಟಣದಲ್ಲಿ ಇತ್ತೀಚೆಗೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದ್ದ ಗುಟ್ಕಾ ಹಾಗೂ ತಂಬಾಕು ವಸ್ತುಗಳನ್ನು ಕೆಲ ಪಪಂ ಸಿಬ್ಬಂದಿ ಜೇಬು ಸೇರಿರುವ ಹಾಗೂ ಡಬಲ್ ದರಕ್ಕೆ ಮಾರಾಟ ಮಾಡಿಕೊಂಡಿರುವ ಸುದ್ದಿ ಪಟ್ಟಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಇತ್ತೀಚೆಗೆ ಪಪಂ ಮುಖ್ಯಾಧಿಕಾರಿ ತಿರುಮಲ ಎಂ. ನೇತೃತ್ವದ ತಂಡ ಪಟ್ಟಣದಾದ್ಯಂತ ಕಿರಾಣಿ, ಪಾನಶಾಪ್ ಹಾಗೂ ಕೆಲ ಮನೆಗಳಲ್ಲಿ ರಾಜಾರೋಷವಾಗಿ ಗುಟ್ಕಾ ಮತ್ತು ತಂಬಾಕು ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಜಿಲ್ಲೆಯ ವಿವಿಧೆಡೆ ಗುಟ್ಕಾ ಹಾಗೂ ತಂಬಾಕು ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದರು.
ಮನೆಯಿಂದ ಆಚೆ ಬಂದವರಿಗೆ ಸ್ಪೆಷಲ್ ಪಿಪಿಇ ಕಿಟ್ ಹಾಕಿದ ಕೊಪ್ಪಳ ಪೊಲೀಸರು..!
ಜಿಲ್ಲಾಧಿಕಾರಿಗಳ ಆದೇಶದನ್ವಯ ಮುಖ್ಯಾಧಿಕಾರಿಗಳು ನಡೆಸಿದ ದಾಳಿಯಲ್ಲಿ ಬರೋಬ್ಬರಿ 40 ಕೆಜಿ ಗುಟ್ಕಾ ಮತ್ತು ತಂಬಾಕು ವಸ್ತುಗಳನ್ನು ಸಂಗ್ರಹವಾಗಿವೆ ಎಂಬ ಮಾಹಿತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ. ದಾಳಿಯಲ್ಲಿ ಸಂಗ್ರಹವಾದ ಗುಟ್ಕಾ ಚೀಟ್ಗಳನ್ನು ಪಪಂ ಕೆಲ ಸಿಬ್ಬಂದಿ ದಾಳಿ ನಡೆಸುವಾಗ ಕಳ್ಳತನ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಅಲ್ಲದೇ ದಾಳಿಯಲ್ಲಿ ಮುಖ್ಯಾಧಿಕಾರಿಗಳು ನಿರತರಾಗಿರುವುದನ್ನು ಗಮನಿಸಿ ಇನ್ನೂ ಕೆಲ ಸಿಬ್ಬಂದಿ ಗುಟ್ಕಾ ಚೀಟ್ಗಳನ್ನು ತಮ್ಮ ಜೇಬಿಗೆ ಸೇರಿಸಿಕೊಂಡಿರುವ ದೂರುಗಳು ಗಂಭೀರವಾಗಿ ಕೇಳಿ ಬಂದಿವೆ.
ದಾಳಿ ಸಮಯಯದಲ್ಲಿ ಸಂಗ್ರಹವಾಗಿದ್ದ ಸಿಗರೇಟ್, ಹೆಚ್ಚಿನ ದರವುಳ್ಳ ಗುಟ್ಕಾ ಚೀಟ್ಗಳನ್ನು ಪಪಂ ಕೆಲ ಸಿಬ್ಬಂದಿಯೇ ಪಾನಶಾಪ್ಗಳಿಗೆ ಖುದ್ದಾಗಿ ಹೋಗಿ ಮಾರಾಟ ಮಾಡಿದ್ದಾರೆನ್ನಲಾಗಿದೆ. ಈ ಗುಟ್ಕಾ ಹಾಗೂ ತಂಬಾಕು ದಾಳಿಯಾಗುವ ಸಂದರ್ಭದಲ್ಲಿ ಕೆಲ ಸಿಬ್ಬಂದಿಗಳಿಂದ ನಡೆದ ಕಳ್ಳತನ ಹಾಗೂ ಮಾರಾಟದ ಬಗ್ಗೆ ಅಧಿಕಾರಿಗಳು ಗಮನಿಸಿಲ್ಲವಾದ್ದರಿಂದ ದಾಳಿ ವೇಳೆ ಗುಟ್ಕಾ ಚೀಟ್ಗಳು ಹಾಗೂ ಸಿಗರೇಟ್ ಪ್ಯಾಕ್ಗಳು ಕಳ್ಳತನವಾಗಿವೆ ಎನ್ನುವ ಸುದ್ದಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.bಗುಟ್ಕಾ ಹಾಗೂ ಸಿಗರೇಟ್ ಕಳ್ಳತನದಲ್ಲಿ ಶಾಮೀಲಾದ ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳಿಯರ ಆಗ್ರಹವಾಗಿದೆ.
ಹೇಳಿಕೆ:
ಜಿಲ್ಲಾಧಿಕಾರಿ ಆದೇಶದ ಮೇರೆಗೆ ಗುಟ್ಕಾ ಹಾಗೂ ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 40 ಕೆಜಿಯಷ್ಟುಗುಟ್ಕಾ, ತಂಬಾಕು ಸಂಗ್ರಹವಾಗಿದೆ. ಗುಟ್ಕಾ, ತಂಬಾಕು ಸಿಬ್ಬಂದಿಗಳ ಜೇಬು ಸೇರಿರುವ ಬಗ್ಗೆ ದೂರು ಬಂದಿವೆ. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ರುಮಲ ಎಂ. ಅವರು ಹೇಳಿದ್ದಾರೆ.
ಅಧಿಕಾರಿಗಳ ದಾಳಿ: 78.900 ಕೆಜಿ ತಂಬಾಕು ಉತ್ಪನ್ನ ವಶ
ನಿಷೇಧದ ನಡುವೆ ಅಕ್ರಮ ಮಾರಾಟ ಮತ್ತು ಬಳಕೆ ನಡೆಯುತ್ತಿದ್ದ ಸ್ಥಳಗಳಲ್ಲಿ ದಾಳಿ ಮಾಡಿ ಒಟ್ಟು 78.900 ಕೆಜಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ 10,700 ದಂಡ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು, ಗುಟಕಾ ವಿರುದ್ಧ ದಾಳಿ ಕೈಗೊಳ್ಳಲಾಗಿತ್ತು. ದಾಳಿಯಲ್ಲಿ ಗುಟಕಾ, ತಂಬಾಕು ಮತ್ತು ನಸಪುಡಿ(ಜರ್ದಾ) ಉತ್ಪನ್ನಗಳನ್ನು ಏ. 23 ರಿಂದ ಏ. 27ರ ವರೆಗೂ ಜಿಲ್ಲೆಯ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ 10 ಕೆಜಿ ವಶಪಡಿಸಿಕೊಂಡು 5700 ದಂಡ ವಿಧಿಸಲಾಗಿದೆ. ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ 13 ಕೆಜಿ ವಶಪಡಿಸಿಕೊಂಡು . 5000 ದಂಡ ವಿಧಿಸಲಾಗಿದೆ. ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ 9 ಕೆಜಿ, ಕಾರಟಗಿ ಪುರಸಭೆ ವ್ಯಾಪ್ತಿಯಲ್ಲಿ 7 ಕೆಜಿ, ಯಲಬುರ್ಗಾ ಪಪಂ ವ್ಯಾಪ್ತಿಯಲ್ಲಿ 1 ಕೆಜಿ, ತಾವರಗೇರಾ ಪಪಂ ವ್ಯಾಪ್ತಿಯಲ್ಲಿ 900 ಗ್ರಾಂ, ಕನಕಗಿರಿ ಪಪಂ ವ್ಯಾಪ್ತಿಯಲ್ಲಿ 23 ಕೆಜಿ, ಕುಕನೂರು ಪಪಂ ವ್ಯಾಪ್ತಿಯಲ್ಲಿ 5 ಕೆಜಿ, ಭಾಗ್ಯನಗರ ಪಪಂ ವ್ಯಾಪ್ತಿಯಲ್ಲಿ 10 ಕೆಜಿ ವಶ ಪಡಿಸಿಕೊಳ್ಳಲಾಗಿದೆ.
ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಗಿಯುವ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗುಟಕಾ, ತಂಬಾಕು ಮತ್ತು ನಸಪುಡಿ (ಜರ್ದಾ) ಉಗುಳುವವರ ವಿರುದ್ಧ ಮತ್ತು ಮಾರಾಟ ಮಾಡುವವರ ವಿರುದ್ಧ ದಾಳಿಗಳು ನಿರಂತರವಾಗಿ ನಡೆಯುತ್ತಿದ್ದು, ಸಾರ್ವಜನಿಕರು ನಿಯಮ ಮೀರಿ ಬಳಕೆ ಮಾಡಿದರೆ ಅಂಥವರ ವಿರುದ್ಧ ಕೋಪ್ಟಾಆಕ್ಟ್ 2003ರ ಸೆಕ್ಷನ್(5), (6), (7)ರನ್ವಯ ಕ್ರಮ ಜರುಗಿಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.