ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಫಾರಿ ವೀಕ್ಷಿಸುತ್ತಿದ್ದ ಪ್ರವಾಸಿಗರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಾಗರಬಾವಿ ನಿವಾಸಿ ನಂಜಪ್ಪ ಅವರು ತಮ್ಮ ಕುಟುಂಬದೊಂದಿಗೆ ಪ್ರಾಣಿ ವೀಕ್ಷಣೆಯಲ್ಲಿದ್ದಾಗ ಬಸ್ಸಿನಲ್ಲಿಯೇ ಕುಸಿದು ಬಿದ್ದು ಕೊನೆಯುಸಿರೆಳೆದರು.

ಬೆಂಗಳೂರು: ಹೊರವಲಯದ ಪ್ರಸಿದ್ಧ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದ ಸಫಾರಿ ವೀಕ್ಷಣೆಯ ವೇಳೆ ದುರಂತ ಘಟನೆ ಸಂಭವಿಸಿದೆ. ಪ್ರವಾಸಿಗನೊಬ್ಬ ಸಫಾರಿ ಬಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ಬೆಂಗಳೂರಿನ ನಾಗರಬಾವಿ ನಿವಾಸಿ ನಂಜಪ್ಪ (45) ಅವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿದ್ದರು. ಸಫಾರಿ ಬಸ್ಸಿನಲ್ಲಿ ಪ್ರಾಣಿ ವೀಕ್ಷಣೆಯಲ್ಲಿದ್ದಾಗಲೇ ನಂಜಪ್ಪ ಹಠಾತ್ ಪ್ರಜ್ಞೆ ತಪ್ಪಿ ಬಿದ್ದರು. ತಕ್ಷಣವೇ ಜೈವಿಕ ಉದ್ಯಾನವನದ ಸಿಬ್ಬಂದಿ ಝೂ ಆಂಬ್ಯುಲೇನ್ಸ್ ಮೂಲಕ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದರು. ಆದರೆ ವೈದ್ಯರ ಎಲ್ಲಾ ಪ್ರಯತ್ನಗಳ ಬಳಿಕವೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕುಟುಂಬದ ಸಂತೋಷ ದುಃಖಕ್ಕೆ ತಿರುಗಿತು

ಸಂಜೆ ಸಫಾರಿ ವೀಕ್ಷಣೆಗೆ ಬಂದ ಕುಟುಂಬಕ್ಕೆ ಈ ದುರ್ಘಟನೆ ದೊಡ್ಡ ಆಘಾತ ತಂದಿದೆ. ಮಕ್ಕಳ ಕಣ್ಮುಂದೆ ತಂದೆಯ ಅಕಾಲಿಕ ಸಾವು ಸಂಭವಿಸಿದ್ದು, ಕುಟುಂಬದವರು ಶೋಕಾಚ್ಛನ್ನರಾಗಿದ್ದಾರೆ.

ಪೊಲೀಸ್ ಪ್ರಕರಣ ದಾಖಲಾತಿ

ಈ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಗತ್ಯ ತನಿಖೆ ನಡೆಸುತ್ತಿದ್ದಾರೆ. ಪ್ರಕೃತಿ ವೀಕ್ಷಣೆಯ ಖುಷಿಗಾಗಿ ಬಂದಿದ್ದ ಪ್ರವಾಸ ಒಂದು ಕ್ಷಣದಲ್ಲಿ ದುಃಖಕ್ಕೆ ತಿರುಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿಯಲ್ಲಿ ನಡೆದ ಈ ದುರ್ಘಟನೆ ಸ್ಥಳೀಯರಲ್ಲಿ ಹಾಗೂ ಪ್ರವಾಸಿಗರಲ್ಲಿ ತೀವ್ರ ಆಘಾತ ಮೂಡಿಸಿದೆ.