Asianet Suvarna News Asianet Suvarna News

ಕೋಟ್ಯಾಂತರ ಕಿವಿಗಳಿಗೆ ತಟ್ಟಿದ ಕೊರೋನಾ ಜಾಗೃತಿಯ ಧ್ವನಿ ಸುಳ್ಯದ್ದು!

ಈಗ ಯಾರಿಗೇ ಆದರೂ ಫೋನ್ ಮಾಡಿದರೆ ತಕ್ಷಣ ಕೇಳುವುದು ಕೊರೊನಾ ಕುರಿತ ಜಾಗೃತಿಯ ಮಾತುಗಳು. ಯಾರಿಗಾದರೂ ಫೋನ್ ಕನೆಕ್ಟ್ ಆದ ತಕ್ಷಣ ಕೇಳುತ್ತಿರುವುದು ಕೆಮ್ಮಿನ ಸದ್ದು. ಆ ಬಳಿಕ ಕೊರೊನಾ ಕುರಿತು ಜಾಗೃತಿ ಮೂಡಿಸುವಂತಹ ಸಂದೇಶ. ಕೋಟ್ಯಾಂತರ ಕಿವಿಗಳನ್ನು ತಟ್ಟುತ್ತಿರುವ ಇಂತಹ ಸಂದೇಶದ ಹಿಂದಿನ ಧ್ವನಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹೆಣ್ಣು ಮಗಳದ್ದು.

Tinto mol voice over artist who give voice to covid19 caller tune
Author
Bangalore, First Published May 12, 2020, 4:23 PM IST

-ದುರ್ಗಾಕುಮಾರ್ ನಾಯರ್‌ಕೆರೆ

ಈಗ ಯಾರಿಗೇ ಆದರೂ ಫೋನ್ ಮಾಡಿದರೆ ತಕ್ಷಣ ಕೇಳುವುದು ಕೊರೊನಾ ಕುರಿತ ಜಾಗೃತಿಯ ಮಾತುಗಳು. ಯಾರಿಗಾದರೂ ಫೋನ್ ಕನೆಕ್ಟ್ ಆದ ತಕ್ಷಣ ಕೇಳುತ್ತಿರುವುದು ಕೆಮ್ಮಿನ ಸದ್ದು. ಆ ಬಳಿಕ ಕೊರೊನಾ ಕುರಿತು ಜಾಗೃತಿ ಮೂಡಿಸುವಂತಹ ಸಂದೇಶ.

ಮೊದಮೊದಲು ಇಲ್ಲಿನ ಜನರಿಗೆ ಇದು ಕಿರಿಕ್ ಅನ್ನಿಸಿದ್ದೂ ಇದೆ. ಜನ ತಮಾಷೆಯ ಮಾತುಗಳನ್ನಾಡಿದ್ದೂ ಇದೆ. ಆದರೆ ದೇಶದಲ್ಲಿ, ರಾಜ್ಯದಲ್ಲಿ, ನಮ್ಮ ಜಿಲ್ಲೆಗಳಲ್ಲೂ ಕೊರೋನಾ ವ್ಯಾಪಿಸುತ್ತಿದ್ದಂತೆ ಜನರಿಗೆ ಈ ಧ್ವನಿಯು ಜಾಗೃತಿಯ ಸಂದೇಶಗಳಾಯಿತು. ಈಗಂತೂ ಮಕ್ಕಳಿಗೆ ತಾಯಿ ನೀಡುವ ಉಪದೇಶದಂತೆ ಅನಿಸತೊಡಗಿದೆ. ಕೋಟ್ಯಾಂತರ ಕಿವಿಗಳನ್ನು ತಟ್ಟುತ್ತಿರುವ ಇಂತಹ ಸಂದೇಶದ ಹಿಂದಿನ ಧ್ವನಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹೆಣ್ಣು ಮಗಳದ್ದು.

ಕೊರೋನಾ ಜೊತೆಗೇ ಬಾಳಬೇಕು ಅಂದ್ರಲ್ಲ ಮೋದಿ, ಹಾಗಂದ್ರೇನು?

ಪ್ರತಿ ರಾಜ್ಯಗಳಲ್ಲೂ ಆಯಾ ರಾಜ್ಯ ಭಾಷೆಗಳಲ್ಲೇ ಈ ಧ್ವನಿ ಸಂದೇಶ ಬಿತ್ತರಿಸಲ್ಪಡುತ್ತದೆ. ಭಾರತದಲ್ಲಿ ಮೊಟ್ಟ ಮೊದಲ ಕೊರೋನಾ ಪ್ರಕರಣ ದಾಖಲಾದದ್ದು ಕೇರಳದಲ್ಲಿ. ಇಂತಹ ಕೇರಳದಲ್ಲಿ ಆ ರಾಜ್ಯ ಭಾಷೆಯಾಗಿರುವ ಮಲಯಾಳಂನಲ್ಲಿ ಧ್ವನಿ ಸಂದೇಶ ಬಿತ್ತರಿಸಲ್ಪಡುತ್ತಿದೆ. ಹೀಗೆ ಬಿತ್ತರವಾಗುತ್ತಿರುವ ಧ್ವನಿಯ ಒಡತಿ ಮಾತ್ರ ಸುಳ್ಯದ ಹೆಣ್ಣು ಮಗಳು.

ಸುಳ್ಯದ ನಂಟು‌:

ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ನೆಲೆಸಿರುವ ಟಿ.ವಿ. ಜೋಸೆಫ್ ಮತ್ತು ಆಲಿಸ್ ಜೋಸೆಫ್ ದಂಪತಿಯ ಪುತ್ರಿ ಟಿಂಟು ಮೋಳ್ ಅವರ ಧ್ವನಿ ಇದು. ಕೇರಳ ಮೂಲದ ಈ ಕುಟುಂಬ 24 ವರ್ಷಗಳಿಂದ ಸುಳ್ಯ ಪರಿಸರದಲ್ಲಿ ನೆಲೆಸಿದೆ.

ಕೊಟ್ಟಾಯಂ ಜಿಲ್ಲೆಯ ಪಾಲ ಎಂಬಲ್ಲಿಯವರಾದ ಟಿ.ವಿ ಜೋಸೆಫ್ 24 ವರ್ಷಗಳ ಹಿಂದೆ ರಬ್ಬರ್ ಟ್ಯಾಪಿಂಗ್ ಕಾರ್ಮಿಕರಾಗಿ ಗುತ್ತಿಗಾರಿಗೆ ಬಂದಿದ್ದರು. ಆ ಬಳಿಕ ಕೆಲವೇ ವರ್ಷಗಳಲ್ಲಿ ಅವರ ಸಂಸಾರವೂ ಇಲ್ಲಿಗೆ ಬಂದು ನೆಲೆಯಾಯಿತು. ಕೆಲವು ವರ್ಷ ಗುತ್ತಿಗಾರಿನಲ್ಲಿದ್ದ ಬಳಿಕ ಒಂದಷ್ಟು ವರ್ಷ ಬಿ.ಸಿ.ರೋಡ್‌ನಲ್ಲಿದ್ದರು. ಬಳಿಕ ಮರ್ಕಂಜಕ್ಕೆ ಬಂದಿದ್ದು, ಕಳೆದ 12  ವರ್ಷಗಳಿಂದ ಸುಲು ಜಾರ್ಜ್ ಎಂಬವರು ಇಲ್ಲಿ ಖರೀದಿಸಿದ ರಬ್ಬರ್ ಎಸ್ಟೇಟ್‌ನ ಉಸ್ತುವಾರಿ ನೋಡಿಕೊಳ್ಳುತ್ತಾ ಪತ್ನಿಯೊಂದಿಗೆ ವಾಸ್ತವ್ಯ ಹೂಡಿದ್ದಾರೆ.

ಈ ಚಿಕ್ಕಿಯಿಂದ ಹೋಗೋಲ್ಲ ಕೊರೋನಾ 

ಈ ದಂಪತಿಗೆ ಇಬ್ಬರು ಮಕ್ಕಳು. ಹಿರಿಯಾಕೆ ಟಿಂಟು ಮೋಳ್, ಈಕೆಯ ತಮ್ಮ ಟಿಬಿನ್ ಸದ್ಯ ಮಸ್ಕತ್‌ನಲ್ಲಿದ್ದಾರೆ. ಟಿಂಟು ಮೋಳ್‌ಗೆ 9 ವರ್ಷವಿದ್ದಾಗ ಅವರು ತಂದೆಯೊಂದಿಗೆ ಸುಳ್ಯಕ್ಕೆ ಬಂದರು. ಬಳಿಕ ಕಡಬದ ಕ್ನಾನಾಯ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದರು. ಮೊಡಂಕಾಪು ಇನ್ಫೆಂಟ್ ಜೀಸಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಪಡೆದರು. ಬಳಿಕ ಮಂಗಳೂರಿನ ಸೈಂಟ್ ಅಗ್ನೇಸ್ ವಿದ್ಯಾಸಂಸ್ಥೆಯಲ್ಲಿ ಪಿ.ಯು.ಸಿ. ಹಾಗೂ ಪದವಿ ಶಿಕ್ಷಣ ಪೂರೈಸಿ, ಐ.ಎ.ಎಸ್ ಪರೀಕ್ಷೆ ಬರೆಯುವ ಗುರಿಯೊಂದಿಗೆ ದೆಹಲಿಯತ್ತ ತೆರಳಿದರು. ದೆಹಲಿಯ ಜವಾಹರ ಲಾಲ್‌ನೆಹರು ವಿಶ್ವವಿದ್ಯಾನಿಲಯದಲ್ಲಿ ಅಂತರಾಷ್ಟ್ರೀಯ ಸಂಬಂಧ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಪ್ರಸ್ತುತ ಪೂರ್ಣ ಪ್ರಮಾಣದಲ್ಲಿ ವಾಯ್ಸ್ ಆರ್ಟಿಸ್ಟ್ ಆಗಿ ಬ್ಯುಸಿ ಆಗಿದ್ದಾರೆ.

ಪ್ರತಿಭಾನ್ವಿತ ಹುಡುಗಿ: 

ದೆಹಲಿಯ ಜೆ.ಎನ್.ಯು. ಸೇರಿದ ಬಳಿಕ ಟಿಂಟು ಮೋಳ್ ಅವರಲ್ಲಿದ್ದ ಮಾತು, ಧ್ವನಿಯ ಪ್ರತಿಭೆ ಬೆಳಕಿಗೆ ಬಂತು. ಇದರೊಂದಿಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದರು. ಜೆಎನ್‌ಯುನಲ್ಲಿದ್ದ ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳ ಜಾನಪದ, ಸಾಂಸ್ಕೃತಿಕ ವೈವಿಧ್ಯತೆಗಳನ್ನು ಉತ್ತೇಜಿಸುವ ಸಾಂಸ್ಕೃತಿಕ ಘಟಕದ ಸದಸ್ಯೆಯಾಗಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದರು.

 ಡಾ.ಬಿಳಿಮಲೆ ಮಾರ್ಗದರ್ಶನ:

ಕಾಲೇಜಿನಲ್ಲಿ ನಡೆದ ಅನೇಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮ ನಿರೂಪಣೆಯ ಮೂಲಕ ಮಿಂಚಿದ್ದರು. ಸಾಂಸ್ಕೃತಿಕ ವಿಭಾಗದ ಉಪನ್ಯಾಸಕ ಕೋ ಆರ್ಡಿನೇಟರ್ ಆಗಿದ್ದ ಈ ವಿಶ್ವವಿದ್ಯಾನಿಲಯದ ಕನ್ನಡ ಪೀಠದ ಮುಖ್ಯಸ್ಥರಾಗಿದ್ದ ಸುಳ್ಯದವರೇ ಆದ ಡಾ. ಪುರುಷೋತ್ತಮ ಬಿಳಿಮಲೆಯ ಪರಿಚಯವಾಗಿತ್ತು. ಟಿಂಟು ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿದ್ದ ಬಿಳಿಮಲೆಯವರು ಮಾರ್ಗದರ್ಶನ ಹಾಗೂ ನೆರವು ನೀಡಿದ್ದರು.

ದೆಹಲಿಯ ಖರ್ಚು ನಿಭಾಯಿಸಲು ಪಾರ್ಟ್ ಟೈಮ್ ಕೆಲಸವೊಂದರ ಅಗತ್ಯತತೆಯೂ ಟಿಂಟು ಮೋಳ್ ಅವರಿಗಿತ್ತು. ಈ ವೇಳೆ ಅವರ ಕನ್ನಡ ಧ್ವನಿಯ ಶಕ್ತಿಯನ್ನು ಅರಿತಿದ್ದ ಡಾ. ಬಿಳಿಮಲೆಯವರು ಕನ್ನಡ ವಾಯ್ಸ್ ಓವರ್ ನೀಡುವಂತೆ ಸಲಹೆ ನೀಡಿ ಅವರನ್ನು ದೆಹಲಿಯಲ್ಲಿ ಖ್ಯಾತ ಕನ್ನಡ ವಾಯ್ಸ್ ಆರ್ಟಿಸ್ಟ್ ಆಗಿರುವ ಸರವು ಕೃಷ್ಣ ಭಟ್‌ರವರಿಗೆ ಪರಿಚಯಿಸಿದರು.

ಸೋಂಕಿತರಿಗೆ ಆಯಾ ತಾಲೂಕಿನಲ್ಲಿಯೇ ಚಿಕಿತ್ಸೆ..? 

ಹಾಗೆ ಟಿಂಟು ಅವರು ಕನ್ನಡ ಧ್ವನಿ ಪರೀಕ್ಷೆಗೆ ವಾಯ್ಸ್ ಇಂಡಸ್ಟ್ರಿಗೆ ತೆರಳಿದರು. ಅಲ್ಲಿ ತೇರ್ಗಡೆಗೊಂಡು ಒಂದೆರಡು ಬಾರಿ ಕನ್ನಡದ ಪ್ರಕಟನೆಗಳಿಗೆ ಧ್ವನಿ ನೀಡಿದರು. ಆದರೆ ಮಲಯಾಳಂ ಕೂಡ ಕರಗತವಾಗಿರುವ ಟಿಂಟು ಮೋಳ್‌ರವರಿಗೆ ಆ ಭಾಷೆಯ ಅವಕಾಶವೂ ಲಭಿಸಿತು. ಹಾಗೆ ಎರಡು ವರ್ಷಗಳಿಂದ ವಾಯ್ಸ್ ಇಂಡಸ್ಟ್ರಿಯಲ್ಲಿ ಕ್ರಿಯಾಶೀಲವಾಗಿರುವ ಟಿಂಟು ಮೋಳ್ ಅವರಿಗೆ ಅಭಿಮಾನಿಗಳ ಸಂಖ್ಯೆಯೂ ಜಾಸ್ತಿಯಾಯಿತು. ತಕ್ಕ ಮಟ್ಟಿಗೆ ಆದಾಯವೂ ಬಂತು.

ಡಿಡಿ ಮಲಯಾಳಂನಲ್ಲಿ ಪ್ರಸಾರವಾದ ಹಲವು ಕಾರ್ಯಕ್ರಮಗಳಿಗೆ ಟಿಂಟು ಮೋಳ್ ಧ್ವನಿ ನೀಡಿದ್ದಾರೆ. ಲೈವ್ ನಿರೂಪಕರಾಗಿಯೂ ಕಾಣಿಸಿಕೊಂಡಿದ್ದಾರೆ. ಕೇಂದ್ರ ಸರಕಾರದ ಅನೇಕ ಪ್ರಕಟನೆಗಳಿಗೆ ತನ್ನ ಶಬ್ದ ದಾಖಲಿಸಿದ್ದಾರೆ. ಸ್ವಚ್ಛ ಭಾರತ್ ಅಭಿಯಾನ್, ಭೀಮ್ ಯೋಜನೆ, ಭೇಟಿ ಬಚಾವೋ - ಭೇಟಿ ಪಡಾವೋ, ಪ್ರಧಾನಮಂತ್ರಿ ಗ್ರಾಮೀಣ ಆವಾಝ್ ಯೋಜನೆ, ಜನಧನ್ ಯೋಜನೆ, ಅಂಚೆ ಇನ್ಸೂರೆನ್ಸ್, ಪಲ್ಸ್ ಪೋಲಿಯೋ ಸೇರಿದಂತೆ ಶಿಕ್ಷಣ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಧ್ವನಿಯಾಗಿದ್ದಾರೆ. ಇದಲ್ಲದೆ ಡೆಟ್ಟಾಯಿಲ್, ಉಷಾ, ಪತಂಜಲಿ, ಮಂಚ್, ಮಿಲ್ಕಿ ಬಾರ್ ಮೊದಲಾದ ಕಂಪೆನಿಗಳ ಪ್ರಕಟಣೆಗಳಿಗೆ ಧ್ವನಿ ನೀಡಿದ್ದಾರೆ.

35 ದಿನಗಳ ಬಳಿಕ ವುಹಾನ್‌ನಲ್ಲಿ ಮತ್ತೆ ಸೋಂಕು!

ಹೀಗಿರುತ್ತಾ ಮಾ.1೦ ರಂದು ಇನ್ನೋರ್ವ ಖ್ಯಾತ ವಾಯ್ಸ್ ಆರ್ಟಿಸ್ಟ್ ಕಲಾಭವನ್ ಪ್ರಜಿತ್ ಅವರ ಸೂಚನೆಯಂತೆ ಕೊರೋನಾ ಕುರಿತ ಜಾಗೃತಿಯ ಪ್ರಕಟಣೆಗೆ ಧ್ವನಿ ನೀಡಲು ಸ್ಟುಡಿಯೋಕ್ಕೆ ತೆರಳುತ್ತಾರೆ. ಹಿಂದಿಯಲ್ಲಿದ್ದ ಪ್ರಕಟನೆಯನ್ನು ಟಿಂಟು ಮೋಳ್ ಮಲಯಾಳಂ ಭಾಷೆಗೆ ತಾನೇ ಅನುವಾದಿಸಿ ಧ್ವನಿ ನೀಡುತ್ತಾರೆ.

ಹೆಚ್ಚೆಂದರೆ ಟಿ.ವಿ. ಅಥವಾ ರೇಡಿಯೋಗಳಲ್ಲಿ ಈ ಪ್ರಕಟನೆ ಬರಬಹುದೆಂಬ ನಿರೀಕ್ಷೆ ಅವರಿಗಿತ್ತು. ಆದರೆ ಆದದ್ದೇ ಬೇರೆ, ಫೋನ್ ಸಂದೇಶಕ್ಕಾಗಿ ಈ ಧ್ವನಿ ಸಂದೇಶ ಬಳಕೆಯಾಯಿತು. ಕೇಂದ್ರ ಸಚಿವಾಯದಿಂದ ಅನುಮತಿ ಬಂದ ಬಳಿಕ ಟಿಂಟು ಅವರೇ ಈ ಧ್ವನಿ ಸಂದೇಶವನ್ನು ಬಂಧುಗಳು, ಮಿತ್ರರಿಗೆ ಕಳುಹಿಸಿಕೊಟ್ಟಿದ್ದರು.

ನಂತರ ದಿನಗಳಲ್ಲಿ ಕೇರಳದ ಅಷ್ಟೂ ಫೋನ್‌ಗಳಿಗೆ ಜಗತ್ತಿನ ಎಲ್ಲಿಂದಲೇ ಕರೆ ಮಾಡಿದರೂ ಕೇಳುವುದು ಟಿಂಟು ಮೋಳ್ ಅವರ ನಿರರ್ಗಳ ಮಾತುಗಾರಿಕೆಯ ಮಧುರ ಧ್ವನಿ ಮತ್ತು ಸಂದೇಶ. ಸ್ವತಃ ಅವರೇ ಕೇರಳಕ್ಕೆ ಪೋನ್ ಮಾಡಿದಾಗಲೂ ಅವರದೇ ಸಂದೇಶ ಅವರಿಗೆ ಕೇಳತೊಡಗುತ್ತದೆ! ಇದು ಒಂದು ವಿಶಿಷ್ಟ ಅನುಭವ.

ಆರಂಭದಲ್ಲಿದ್ದ ಧ್ವನಿ ಸಂದೇಶ ಬಳಿಕ ಎರಡು ಹಂತಗಳಲ್ಲಿ ಬದಲಾಗಿದೆ. ಮೊದಲು ಕೊರೊನಾ ಕುರಿತಾದ ಮುನ್ನೆಚ್ಚರಿಕೆ ಇತ್ತು. ನಂತರ ಇದನ್ನು ಪರಿಷ್ಕರಿಸಲಾಯಿತು. ಮೂರನೇ ಬಾರಿ ರೋಗಿಗಳ ಪರಿಚರಣೆ ಕುರಿತಂತೆ ಜಾಗೃತಿಯ ಮಾತುಗಳಿವೆ. ಅಲ್ಲದೆ ಈಗ ಕೊರೋನಾ ಕುರಿತ ಗೂಗಲ್ ಪ್ರಶ್ನೋತ್ತರ, ಆರೋಗ್ಯ ಜಾಗೃತಿ ಹಾಗೂ ಹೋಮ್ ಕ್ವಾರೆಂಟೈನ್ ಕುರಿತಾದ ಪ್ರಕಟನೆಗಳಿಗೂ ಟಿಂಟು ಮೋಳ್ ಧ್ವನಿ ನೀಡಿದ್ದಾರೆ.

ಈ ಮೊದಲು ಟಿಂಟು ಟಿವಿ ಹಾಗೂ ರೇಡಿಯೋಗಳಲ್ಲಿ ಸಾಕಷ್ಟು ಪ್ರಕಟಣೆಗಳಿಗೆ ಧ್ವನಿ ನೀಡಿದ್ದರೂ ಅವರು ಅಷ್ಟೇನು ಗುರುತಿಸಲ್ಪಟ್ಟಿರಲಿಲ್ಲ. ಆದರೆ ಕೊರೊನಾ ಕಾರಣದಿಂದ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಟಿಂಟು ಶೈನಿಂಗ್ ಸ್ಟಾರ್ ಆಗಿದ್ದಾರೆ.

ಕೆಲವರು ಮಾಡೋ ತಪ್ಪಿಗೆ ದೇಶಕ್ಕೆಲ್ಲಾ ಲಾಕ್‌ಡೌನ್ ಶಿಕ್ಷೆ..!

ಟಿಂಟು ಮೋಳ್ ಅವರ ಯು.ಪಿ.ಎಸ್.ಸಿ ಪರೀಕ್ಷೆ ಬರೆಯುವ ಕನಸು ನನಸಾಗಲಿಲ್ಲ. ಆದರೆ ಅವರು ತನ್ನ ಬಹು ಮುಖ ಪ್ರತಿಭೆಯಿಂದ ದೆಹಲಿಯಲ್ಲಿ ಮಿಂಚುತ್ತಿದ್ದಾರೆ. ಉತ್ತಮ ನೃತ್ಯ ಹಾಗೂ ನಾಟಕ ಹಾಗೂ ಬೀದಿ ನಾಟಕ ಕಲಾವಿದೆಯೂ ಆಗಿರುವ ಅವರು ಈ ಕುರಿತ ಒಂದು ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ಅನೇಕ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಕೂಚುಪುಡಿ, ಕಳರಿ ಕಲೆ ಕಲಿಯುತ್ತಿದ್ದಾರೆ.

"ಡಾ.ಪುರುಷೋತ್ತಮ ಬಿಳಿಮಲೆಯವರು ನನ್ನ ಪ್ರತಿಭೆ ಗುರುತಿಸಿ ಸರವು ಕೃಷ್ಣ ಭಟ್ ಅವರಿಗೆ ಪರಿಚಯಿಸುವ ಮೂಲಕ ನನಗೆ ಅವಕಾಶಗಳ ಬಾಗಿಲು ತೆರೆಯಿತು. ಈಗ ಹೆಚ್ಚಿನ ಅಫರ್‌ಗಳು ಬರುತ್ತಿದೆ. ಕೊರೋನಾ ಜಾಗೃತಿಯಂತಹ ಮಹಾನ್ ದೌತ್ಯದಲ್ಲಿ ನಾನೂ ಭಾಗವಾಗಿರುದಕ್ಕೆ ಹೆಮ್ಮೆ ಇದೆ. ಜನ ನನ್ನನ್ನು ಗುರುತಿಸಿದಕ್ಕೂ ಇದು ಸಾಧ್ಯವಾಯಿತು" ಎಂದು ಟಿಂಟು ಮೋಳ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. 

"ಆರಂಭದಲ್ಲಿ ಶಬ್ದ ಕೇಳಿ ಬಂಧುಗಳಷ್ಟೆ ಗುರುತಿಸಿದ್ದರು. ಆದರೆ ಇದೀಗ ಎಲ್ಲರೂ ಗುರುತಿಸುತ್ತಾರೆ" ಎನ್ನುವ ಟಿಂಟು ಅವರಿಗೆ ನಿಮ್ಮ ಧ್ವನಿಯನ್ನು ಕಾಪಾಡಿಕೊಳ್ಳಲು ಏನು ಮಾಡುತ್ತಿರಿ ಎಂದಾಗ ಜೀರಿಗೆ ನೀರು ಕುಡಿಯುತ್ತೇನೆ ಎಂದಷ್ಟೆ ಹೇಳಿ ನಕ್ಕು ಬಿಡುತ್ತಾರೆ.

ಮಗಳ ಬಗ್ಗೆ ತಂದೆಯ ಮಾತು

ತಂದೆ ಜೋಸೆಫ್ ಅವರಿಗೂ ಮಗಳ ಸಾಧನೆಯ ಬಗ್ಗೆ ಹೆಮ್ಮೆ ಇದೆ. ಪ್ರಸ್ತುತ ಮರ್ಕಂಜದ ಬಲ್ನಾಡು ಪೇಟೆಯಲ್ಲಿರುವ ಅವರನ್ನು 'ಕನ್ನಡಪ್ರಭ' ಸಂಪರ್ಕಿಸಿದಾಗ ಬಾಲ್ಯದಿಂದಲೇ ಆಕೆ ಕಲೆಯಲ್ಲೂ, ಕಲಿಕೆಯಲ್ಲೂ ಮುಂದಿದ್ದಳು ಎನ್ನುತ್ತಾರೆ.

ಟಿಂಟು ಸಾಧನೆಗೆ ಬಿಳಿಮಲೆ ಮೆಚ್ಚುಗೆ

ಟಿಂಟು ಮೋಳ್ ಅವರಿಗೆ ಅವಕಾಶಗಳ ಬಾಗಿಲು ತೆರೆಯುವಂತೆ ಮಾಡಿದ ಡಾ.ಪುರುಷೋತ್ತಮ ಬಿಳಿಮಲೆಯವರು ಕೂಡಾ ಟಿಂಟು ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. "ಆಕೆ ಪ್ರತಿಭಾನ್ವಿತ ಹುಡುಗಿ. ಜೆಎನ್‌ಯುನಲ್ಲಿ ಕಲಿಯುತ್ತಿರುವಾಗಲೇ ದೇಶದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಬಂದ ವಿದ್ಯಾರ್ಥಿಗಳಲ್ಲಿದ್ದ ಜಾನಪದ ಕುಣಿತದ ಮಾಹಿತಿಗಳನ್ನು ಸಂಗ್ರಹಿಸಿ ಅವುಗಳ ಪ್ರದರ್ಶನ ಏರ್ಪಡಿಸುತ್ತಿದ್ದಳು. ಅದನ್ನು ಒಬ್ಬರಿಂದ ಇನ್ನೊಬ್ಬರಿಗೆ ಕಲಿಯುವಂತೆ ಮಾಡುತ್ತಿದ್ದರು. ೨೦ ಜನರ ತಂಡ ಕಟ್ಟಿ ಅವರಿಗೆ ಕುಣಿತ ಕಲಿಸುತ್ತಿದ್ದರು. ಈಕೆಯ ಪ್ರತಿಭೆ ಗುರುತಿಸಿ ಅವಕಾಶಕ್ಕಾಗಿ ನಾನೂ ಒಂದಷ್ಟು ಸಹಾಯ ಮಾಡಿದೆ. ಈಗ ತುಂಬಾ ಬೆಳೆದಿದ್ದಾಳೆ" ಎನ್ನುತ್ತಾರೆ ಡಾ. ಬಿಳಿಮಲೆ.

Follow Us:
Download App:
  • android
  • ios