ಪ್ರವಾಸಿಗರಿಂದಲೇ ಕಾಫಿನಾಡು ತುಂಬಿ ತುಳುಕಿದ್ದು ಗಿರಿಶ್ರೇಣಿಯಲ್ಲಿ ಸಂಚಾರ ದಟ್ಟಣೆಗೆ ಬೇಸ್ತು ಬಿದ್ದು ಪೊಲೀಸರು ಹರ ಸಾಹಸ ಪಟ್ಟರೆ ಇತ್ತ ಬಹಳ ದಿನಗಳ ನಂತರ ಹೋಮ್ ಸ್ಟೇ, ರೆಸಾರ್ಟ್ ಮಾಲೀಕರಲ್ಲಿ ಮೊಗದಲ್ಲಿ ಮಂದಾಹಾಸ ಮೂಡಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಆ.14): ಒಂದಡೆ ಕಡಿಮೆಯಾದ ಮಳೆ ಮತ್ತೊಂದಡೆ ಸಾಲು ಸಾಲು ರಜೆಗೆ ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಲಗ್ಗೆ ಇಟ್ಟಿದ್ದಾರೆ. ಪ್ರವಾಸಿಗರಿಂದಲೇ ಕಾಫಿನಾಡು ತುಂಬಿ ತುಳುಕಿದ್ದು ಗಿರಿಶ್ರೇಣಿಯಲ್ಲಿ ಸಂಚಾರ ದಟ್ಟಣೆಗೆ ಬೇಸ್ತು ಬಿದ್ದು ಪೊಲೀಸರು ಹರ ಸಾಹಸ ಪಟ್ಟರೆ ಇತ್ತ ಬಹಳ ದಿನಗಳ ನಂತರ ಹೋಮ್ ಸ್ಟೇ, ರೆಸಾರ್ಟ್ ಮಾಲೀಕರಲ್ಲಿ ಮೊಗದಲ್ಲಿ ಮಂದಾಹಾಸ ಮೂಡಿದೆ. ಪಶ್ಚಿಮಘಟ್ಟ ಸಾಲಿನ ಮುಳ್ಳಯ್ಯನಗಿರಿ ಪರ್ವತಶ್ರೇಣಿ, ದತ್ತಪೀಠ, ಹೊನ್ನಮ್ಮನಹಳ್ಳ, ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ, ಮೂಡಿಗೆರೆಯ ದೇವರಮನೆ, ಶೃಂಗೇರಿ, ಕಳಸ, ಹೊರನಾಡು, ಕುದುರೆಮುಖ, ಬೆಳವಾಡಿ, ಅಮೃತಾಪುರ ಸೇರಿದಂತೆ ಗಿರಿಶ್ರೇಣಿಯನ್ನು ಕಣ್ತುಂಬಿಕೊಳ್ಳಲು ಸಾಲು ಸಾಲು ವಾಹನಗಳಲ್ಲಿ ಸಾವಿರಾರು ಜನ ಆಗಮಿಸಿ ವೀಕೆಂಡ್ನಲ್ಲಿ ಮಸ್ತ್ ಮಜಾ ಮಾಡಿ ಸಂಭ್ರಮಿಸಿದರು. ಶುಕ್ರವಾರದಿಂದ ಗಿರಿಶ್ರೇಣಿಗೆ ಪ್ರವಾಸಿಗರು ಮುಗಿಬಿದ್ದಿದ್ದು ಶನಿವಾರ ಹಾಗೂ ಭಾನುವಾರ ಸಾವಿರಕ್ಕೂ ಹೆಚ್ಚು ವಾಹನಗಳು ಆಗಮಿಸಿ ಮುಳ್ಳಯ್ಯನಗಿರಿ ರಸ್ತೆಯ ನಾಲ್ಕಾರು ಕಡೆ ಟ್ರಾಫಿಕ್ ಜ್ಯಾಮ್ ಆಗಿ ಮಹಿಳೆಯರು, ಮಕ್ಕಳಾದಿಯಾಗಿ ಪ್ರವಾಸಿಗರು ವಾಹನಳನ್ನು ಇಳಿದು ಪಾದಾಯಾತ್ರೆಯಲ್ಲಿ ಸಾಗಿ ಮಳೆಯ ನಡುವೆಯೂ ಬೆವರಿಳಿಸಿಕೊಂಡು ಪ್ರಕೃತಿ ಸೊಬಗನ್ನು ಕಣ್ತುಂಬಿಕೊಂಡ ದೃಶ್ಯ ಸಾಮಾನ್ಯವಾಗಿತ್ತು. 

3 ಗಂಟೆ ಕಾದರೂ ಗಿರಿಶ್ರೇಣಿ ನೋಡುವ ಭಾಗವಿಲ್ಲ: ಇಂದು ಬೆಳಗ್ಗೆ 7 ಗಂಟೆಯಿಂದಲೆ ಗಿರಿಶ್ರೇಣಿಗೆ ನೂರಾರು ವಾಹನಗಳು ಸಾಗಿ ಸಂಚಾರ ದಟ್ಟಣೆಯಾದ ಹಿನ್ನೆಲೆ ಮಧ್ಯಾಹ್ನದ ವರೆಗೂ ಅಲ್ಲಲ್ಲಿ ಟ್ರಾಫಿಕ್ ಜ್ಯಾಮ್ ಬಿಸಿ ತಟ್ಟಿತು. ದೆಹಲಿ, ತೆಲಂಗಾಣ, ಹರಿಯಾಣ, ತಮಿಳುನಾಡಿನಿಂದ ಕಾರಿನಲ್ಲಿ ಆಗಮಿಸಿದ್ದ ಕೆಲವು ಕುಟುಂಬಗಳು 3 ಗಂಟೆ ಕಾದರೂ ಮುಳ್ಳಯ್ಯನ ಗಿರಿಗೆ ಶ್ರೇಣಿಗೆ ತೆರಳಲಾಗದೆ ಇತ್ತ ನಡೆಯಲು ಆಗದೆ ಹತ್ತಾರು ಕುಟುಂಬಗಳು ಕಾದು ಸುಸ್ತಾಗಿ ನಿರಾಸೆಯಿಂದ ಹಿಂತಿರುಗಿದರು. 

ಪೊಲೀಸರ ಹರಸಾಹಸ: ಕೆಲವು ತಿರುವುಗಳಲ್ಲಿ ಮಿನಿ ಬಸ್ಗಳು ಬಂದಿದ್ದರಿಂದ ಕಿರಿದಾದ ರಸ್ತೆಯಲ್ಲಿ ವಾಹನ ಸುಗಮವಾಗಿ ಸಾಗಲಾಗದೆ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಪಟ್ಟರು. ದಟ್ಟಣೆಯಿಂದ ಬೆಳಿಗ್ಗೆ11 ರಿಂದ ಗಂಟೆಗಟ್ಟಲೆ ಕೈಮರ ಚೆಕ್ಪೋಸ್ಟ್ನಲ್ಲಿ ವಾಹನ ಸಂಚಾರ ಸ್ಥಗಿತ ಗೊಳಿಸಲಾಗಿತ್ತು. ಇದರಿಂದ ಅಲ್ಲಂಪುರ ಕ್ರಾಸ್ವರೆಗೂ ವಾಹನಗಳು ಸಾಲುಗಟ್ಟಿ ನಿಂತು ಪ್ರವಾಸಿಗರು ಬೇಸ್ತು ಬಿದ್ದ ದೃಶ್ಯ ಕಂಡು ಬಂತು.

Kolar: ಪ್ರವಾಸಿಗರ ನ್ಯೂ ಹಾಟ್ ಪಿಕ್ನಿಕ್ ಸ್ಪಾಟ್ ಆಗಿ ಭೋರ್ಗರೆಯುತ್ತಿದೆ ಯರಗೋಳ್ ಡ್ಯಾಂ

ಹೋಮ್ ಸ್ಟೇ, ರೆಸಾರ್ಟ್ ಶುಕ್ರೆದಸೆ: ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚು ಹೋಮ್ ಸ್ಟೇ, ನೂರಕ್ಕೂ ಹೆಚ್ಚು ರೆಸಾರ್ಟ್ ಗಳಿದ್ದು ಸಣ್ಣ ಸಣ್ಣ ಕೊಠಡಿಗಳನ್ನು ಬಿಡದೆ ಸಂಪೂರ್ಣ ತುಂಬಿದ್ದವು. ವಿಕೆಂಡ್ ಹಿನ್ನಲೆಯಲ್ಲಿ ಬಂದ ರಜೆಯಿಂದ ಕೆಲವು ಕುಟುಂಬಗಳು ತಿಂಗಳ ಮುನ್ನವೆ ಹೋಮ್ ಸ್ಟೇ, ರೆಸಾರ್ಟ್ ಬುಕ್ಕಿಂಗ್ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Travel Tips : ಗಿಜಿಗಿಜಿ ಜೀವನಕ್ಕೆ ಶಾಂತಿ ಬೇಕೆಂದ್ರೆ ಇಲ್ಲಿಗೆ ಹೋಗಿ

ಕಳೆದ ಒಂದುವರೆ ತಿಂಗಳಿಂದನಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿತ್ತು. ಇದರಿಂದ ನಷ್ಟದ ಹಾದಿಯನ್ನು ಹೋ ಸ್ಟೇ ಮಾಲೀಕರು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ನಡುವೆ ಬಹಳ ದಿನಗಳ ನಂತರ ಹೋಮ್ ಸ್ಟೇ, ರೆಸಾರ್ಟ್ ಮಾಲೀಕರಲ್ಲಿ ಆರ್ಥಿಕ ಚಟುವಟಿಕೆ ಆಗುವ ಮೂಲಕ ಮೊಗದಲ್ಲಿ ಮಂದಾಹಾಸ ಮೂಡಿಸಿದೆ.