ಸಿ ಮತ್ತು ಡಿ ಭೂಮಿ ಹಕ್ಕುಪತ್ರಕ್ಕಾಗಿ ಮಡಿಕೇರಿಯಲ್ಲಿ ಬೀದಿಗಿಳಿದ ಸಾವಿರಾರು ರೈತರು

Synopsis
ಕೊಡಗು ಜಿಲ್ಲೆಯ ಸಾವಿರಾರು ಎಕರೆ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಸರ್ಕಾರ ಅರಣ್ಯ ಇಲಾಖೆಗೆ ವಹಿಸಿದ್ದು ಸಾವಿರಾರು ರೈತರು ಬೀದಿಗೆ ಬರುವಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಾವಿರಾರು ರೈತರು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.20): ಕೊಡಗು ಜಿಲ್ಲೆಯ ಸಾವಿರಾರು ಎಕರೆ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಸರ್ಕಾರ ಅರಣ್ಯ ಇಲಾಖೆಗೆ ವಹಿಸಿದ್ದು ಸಾವಿರಾರು ರೈತರು ಬೀದಿಗೆ ಬರುವಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಾವಿರಾರು ರೈತರು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದಾರೆ. ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಡಿಕೇರಿಯ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಅಲ್ಲಿಂದ ಜನರಲ್ ತಿಮ್ಮಯ್ಯ ಸರ್ಕಲ್, ಮುತ್ತಣ್ಣ ಸರ್ಕಲ್, ಖಾಸಗಿ ಹಳೇ ಬಸ್ಸು ನಿಲ್ದಾಣದವರೆಗೆ ಮೆರವಣಿಗೆ ಮಾಡಿದರು. ನಂತರ ವಾಪಸ್ ಅದೇ ರಸ್ತೆಗಳಲ್ಲಿ ಮೆರವಣಿಗೆ ಬಂದ ಪ್ರತಿಭಟನಾಕಾರರು ಗಾಂಧಿ ಮೈದಾನಕ್ಕೆ ತೆರಳಿ ಸಮಾವೇಶ ನಡೆಸಿದರು.
ಇದಕ್ಕೂ ಮೊದಲು ಜನರಲ್ ತಿಮ್ಮಯ್ಯ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಅರ್ಧ ಗಂಟೆಗೂ ಹೆಚ್ಚು ಸಮಯ ಧರಣಿ ಕುಳಿತರು. ಇದರಿಂದ ಮಡಿಕೇರಿ, ಮೈಸೂರು ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮತ್ತು ಮಡಿಕೇರಿ, ವಿರಾಜಪೇಟೆ ರಾಜ್ಯ ಹೆದ್ದಾರಿ ಬಂದ್ ಆಗಿದ್ದರಿಂದ ವಾಹನಗಳ ಸಂಚಾರ ಸಂಪೂರ್ಣ ಸ್ಥಬ್ಧವಾಗಿತ್ತು. ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು ಸವಾರರು ಪರದಾಡುವಂತೆ ಆಯಿತು. ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಹರಸಾಹಸ ಪಡಬೇಕಾಯಿತು. ಸ್ವತಃ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಕೂಡ ರಸ್ತೆಗಿಳಿದು ಟ್ರಾಫಿಕ್ ನಿಭಾಯಿಸಿದರು.
Kodagu: ವಿರಾಜಪೇಟೆ ಪಟ್ಟಣದ ಮಗ್ಗುಲಲ್ಲಿಯೇ ಹುಲಿ ಓಡಾಟ ಆತಂಕದಲ್ಲಿ ಜನರು
ಮೂರು ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ರೈತರು ಹತ್ತಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ 34 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಅರಣ್ಯಕ್ಕೆ ವಹಿಸುತ್ತಿರುವುದನ್ನು ಕೈಬಿಡುವಂತೆ ಆಗ್ರಹಿಸಿದರು. ರೈತರ ಹೋರಾಟಕ್ಕೆ ಪಕ್ಷಭೇದವಿಲ್ಲದೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳು ಸಾಥ್ ನೀಡಿದವು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿರಾಜಪೇಟೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಸಿ ಮತ್ತು ಡಿ ದರ್ಜೆಯ 34 ಸಾವಿರ ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಲು ಹೊರಟಿದೆ. ಈ ಭೂ ಬ್ಯಾಂಕ್ ನಿರ್ಮಿಸಲು ನಿರ್ಧರಿಸಿ ಅರಣ್ಯ ಇಲಾಖೆಗೆ ನೀಡಲಾಗಿತ್ತು.
ಆದರೆ ಯಾವಾಗ ಬೇಕಾದರೂ ಇದನ್ನು ವಾಪಸ್ ತೆಗೆದುಕೊಳ್ಳುವ, ಬಳಸಿಕೊಳ್ಳುವ ನಿಯಮದಿಂದ ಇದನ್ನು ಮಾಡಲಾಗಿತ್ತು. ಈಗ ಸರ್ಕಾರ ಈ ಎಲ್ಲಾ ಭೂಮಿಯನ್ನು ಅರಣ್ಯೀಕರಣ ಮಾಡುವುದಕ್ಕೆ ಬಿಟ್ಟು ಕೊಡುತ್ತಿದೆ. ಇದರಿಂದ ಹಲವು ವರ್ಷಗಳಿಂದ ಉಳುಮೆ ಮಾಡುತ್ತಾ ಬದುಕು ನಡೆಸುತ್ತಿರುವ ರೈತರು ಸಂಕಷ್ಟ ಎದುರಿಸುವಂತ ಸ್ಥಿತಿ ಬಂದಿದೆ. 1974 ಕ್ಕಿಂತಲೂ ಮೊದಲಿನಿಂದಲೂ ಉಳುಮೆ ಮಾಡುತ್ತಿದ್ದರೆ ಅದು ರಕ್ಷಿತಾರಣ್ಯವಾದರೂ ಮೂರು ಎಕರೆವರೆಗೆ ದಾಖಲೆ ಮಾಡಿಕೊಡಬೇಕೆಂದು ಕೋರ್ಟೇ ಹೇಳಿದೆ. ಸಿ. ಮತ್ತು ಡಿ ಭೂಮಿಗೆ ಎಷ್ಟೋ ಜನರಿಗೆ ಈಗಾಗಲೇ ಹಕ್ಕುಪತ್ರಗಳನ್ನೂ ಕೊಡಲಾಗಿದೆ. ಇಷ್ಟಾಗಿಯೂ ಅದೆಲ್ಲವನ್ನೂ ಅರಣ್ಯ ಇಲಾಖೆ ಕೊಡಲು ಹೊರಟಿರುವುದು ರೈತರಿಗೆ ಮಾಡುತ್ತಿರುವ ದ್ರೋಹ ಎಂದು ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ನಾರಾಯಣಸ್ವಾಮಿ
ಇನ್ನು ರೈತ ಮುಖಂಡ ಕೆ.ಎಂ ಲೋಕೇಶ್ ಮಾತನಾಡಿ ಈ ಹಿಂದೆಯೇ ಹೋಬಳಿ ಮತ್ತು ತಾಲ್ಲೂಕು ಮಟ್ಟದಲ್ಲಿಯೇ ತೀವ್ರ ಪ್ರತಿನಿಭಟನೆ ಮಾಡಿ ನಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೊಡಗಿನ ಸಾವಿರಾರು ರೈತರು ಬಹಳ ಹಿಂದಿನಿಂದಲೂ ಈ ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ. ಈ ಕುರಿತು ಶಾಸಕರ ಮೂಲಕ ಸಭಾಪತಿಗಳು, ಸಚಿವರ ಗಮನಕ್ಕೂ ತರಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಇಂದು ಜಿಲ್ಲೆಯ ರೈತರು, ಜನ ಸಾಮಾನ್ಯರು ಸೇರಿ ಪಕ್ಷಾತೀತವಾಗಿ ಪ್ರತಿಭಟನೆ ಮಾಡಿದ್ದೇವೆ ಎಂದಿದ್ದಾರೆ.