ಹಾಡಹಗಲೇ ಸಾಕು ಪ್ರಾಣಿಗಳ ಬೇಟೆಯಾಡಲು ಮುಂದಾದ ವ್ಯಾಘ್ರ!
ಹುಲಿಯೊಂದು ಹಾಡಹಗಲೇ ಸಾಕು ಪ್ರಾಣಿಗಳ ಬೇಟೆಯಾಡಲು ಮುಂದಾದ ದೃಶ್ಯವನ್ನು ದನಗಾಹಿಯೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ವೀಡಿಯೊ ವೈರಲ್ ಆಗಿದ್ದು, ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆ ನಡೆಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
![The tiger started to hunt domestic animals in the Day Time snr The tiger started to hunt domestic animals in the Day Time snr](https://static-ai.asianetnews.com/images/01hh2n9a31jpg3xae8hp41db9b/gettyimages-535210099-170667a-1701970225249_363x203xt.jpg)
ಸರಗೂರು : ಹುಲಿಯೊಂದು ಹಾಡಹಗಲೇ ಸಾಕು ಪ್ರಾಣಿಗಳ ಬೇಟೆಯಾಡಲು ಮುಂದಾದ ದೃಶ್ಯವನ್ನು ದನಗಾಹಿಯೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ವೀಡಿಯೊ ವೈರಲ್ ಆಗಿದ್ದು, ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆ ನಡೆಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ತಾಲೂಕಿನ ಜಯಲಕ್ಷ್ಮಿಪುರ ಗ್ರಾಮದ ಸಮೀಪದ ಕಾಡಂಚಿಗೆ ಹೊಂದಿಕೊಂಡಂತಿರುವ ಜಮೀನಿನಲ್ಲಿ ರೈತರು ದನ, ಕುರಿ, ಮೇಕೆಗಳನ್ನು ಮೇಯಿಸುವಾಗ ಆಹಾರ ಅರಸಿ ಕಾಡಿನಿಂದ ಹೊರ ಬಂದ ಹುಲಿರಾಯ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆ, ಕುರಿಗಳನ್ನು ಬೇಟೆಯಾಡಲು ಪೋದೆಗಳ ಮರೆಯಲಿ ಹೊಂಚು ಹಾಕಿ ಕುಳಿತಿತ್ತು. ಸಾಕು ಪ್ರಾಣಿಗಳು ಮೇಯ್ದು ಮುಂದೆ ಹೋಗಲಾಗಿ ಹುಲಿ ಪೋದೆಯಿಂದ ಹೊರಬಂದು ಕುರಿ, ಮೇಕೆ ಬೇಟೆಯಾಡಲು ಹುಲಿ ಅವುಗಳ ಹತ್ತಿರ ಹೋಗುತ್ತಿದ್ದ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು, ಇದರಿಂದಾಗಿ ರೈತರು ಭಯಭೀತರಾಗಿದ್ದಾರೆ.
ಜಯಲಕ್ಷ್ಮಿಪುರ ಗ್ರಾಮವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯದಂಚಿನಲ್ಲಿ ಬರುವುದರಿಂದ ಗ್ರಾಮದ ಸುತ್ತಲಿನ ಎತ್ತಿಗೆ, ಯಶವಂತಪುರ, ಹಾದನೂರು, ಚಿಕ್ಕಬರಗಿ, ದೊಡ್ಡಬರಗಿ ಸೇರಿದಂತೆ ಎಂ.ಸಿ.ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದು, ಅರಣ್ಯ ಇಲಾಖೆ ಕೂಡಲೇ ಹುಲಿ ಸೆರೆಗೆ ಮುಂದಾಗಬೇಕು. ಈಗಾಗಲೇ ಸಮೀಪದ ಕಾಡಬೇಗೂರು, ನಂಜನಗೂಡು ತಾಲೂಕಿನ ಬಳ್ಳೂರುಹುಂಡಿ ಗ್ರಾಮಗಳಲ್ಲಿ ಇಬ್ಬರು ರೈತರು ಹುಲಿ ದಾಳಿಗೆ ಬಲಿಯಾಗಿದ್ದಾರೆ. ಇಂಥ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ತಪ್ಪಿದ್ದಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.