Asianet Suvarna News Asianet Suvarna News

ಸಾಹಿತ್ಯ, ಸಂಗೀತದಿಂದ ನೆಮ್ಮದಿ, ವ್ಯಕ್ತಿತ್ವ ಪರಿಪೂರ್ಣ

ಸಾಹಿತ್ಯ ಮತ್ತು ಸಂಗೀತದಿಂದ ಮಾನಸಿಕ ನೆಮ್ಮಿದಿ ಜೊತೆಗೆ ವ್ಯಕ್ತಿತ್ವ ಪರಿಪೂರ್ಣವಾಗುತ್ತದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಹೇಳಿದರು.

 The music Gives Peacefulness To Mind snr
Author
First Published Jan 2, 2023, 6:03 AM IST

 ಮೈಸೂರು :  ಸಾಹಿತ್ಯ ಮತ್ತು ಸಂಗೀತದಿಂದ ಮಾನಸಿಕ ನೆಮ್ಮಿದಿ ಜೊತೆಗೆ ವ್ಯಕ್ತಿತ್ವ ಪರಿಪೂರ್ಣವಾಗುತ್ತದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಶ್ರೀ ವಾಸವಿ ಶಾಂತಿಧಾಮ ಪಬ್ಲಿಕ್‌ ಚಾರಿಟಬಲ್‌ ಟ್ರಸ್ಟ್‌ ಆಶ್ರಯದಲ್ಲಿ ಆಲನಹಳ್ಳಿಯ ಶ್ರೀ ವಾಸವಿ ಶಾಂತಿಧಾಮದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ವಚನ ಸಂಗೀತೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತ್ಯ ಮತ್ತು ಸಂಗೀತದ ಜೊತೆಗೆ ಸಂಸ್ಕಾರವೂ ಬರಬೇಕು. ವಚನ ಸಾಹಿತ್ಯದಲ್ಲಿ ಶರಣರು ಬಹುಕಿಗೆ ಮಾರ್ಗದರ್ಶನವಾಗುವ ಹಲವಾರು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದರು.

ಹಣ- ಆಸ್ತಿ ಯಾವುದೂ ಜೊತೆಯಲ್ಲಿ ಬರುವುದಿಲ್ಲ. ಪ್ರತಿಯೊಬ್ಬರಲ್ಲೂ ಪ್ರೀತಿ- ಪ್ರೇಮ ಇರಬೇಕು. ಕೌಟುಂಬಿಕ ಸಂಬಂಧ, ವೈಯಕ್ತಿಕ ಸಂಬಂಧ ಉತ್ತಮವಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಜಂಟಿ ಕುಟುಂಬಗಳೇ ಇಲ್ಲ. ಎಲ್ಲಾ ಗಂಡ- ಹೆಂಡತಿ ಇರುವ ಒಂಟಿ ಕುಟುಂಬಗಳೇ ಆಗುತ್ತಿವೆ ಎಂದು ಅವರು ವಿಷಾದಿಸಿದರು.

ಶರಣ ಸಾಹಿತ್ಯದಲ್ಲಿ ಮರಣವೇ ಮಹಾನವಮಿ ಎಂದು ಸಂಭ್ರಮಿಸಲಾಗಿದೆ. ಶರಣರಲ್ಲಿ ಯಾರಾದರೂ ಸತ್ತಾಗ ಬಂದವರಿಗೆ ಸಿಹಿ ಊಟ ಹಾಕಿ ನಂತರ ಶವಸಂಸ್ಕಾರ ಮಾಡಲಾಗುತ್ತದೆ. ಆ ಪರಿಕಲ್ಪನೆಯಲ್ಲಿ ಬದುಕಿದರೆ ಕೊನೆಗಾಲದಲ್ಲಿ ನೆಮ್ಮದಿಯಾಗಿರಬೇಕು ಎಂದು ಅವರು ಹೇಳಿದರು.

ಮಗ- ಸೊಸೆ, ಮಗಳು- ಅಳಿಯ, ಮೊಮ್ಮಕ್ಕಳು ಎಂಬ ಚಿಂತೆ ಬಿಡಿ. ಸಂಧ್ಯಾಕಾಲದಲ್ಲಿ ನೆಮ್ಮದಿಯಿಂದ ಇರಬೇಕಾದರೆ ವಿಷಾದ ಯೋಗ ಬಿಡಿ. ಆಗ ಇಲ್ಲೇ ಸ್ವರ್ಗ, ಇಲ್ಲೇ ನರಕ ಎಂಬಂತೆ ಬದುಕಬಹುದು ಎಂದು ಅವರು ಸಲಹೆ ಮಾಡಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಂ. ಚಂದ್ರಶೇಖರ್‌ ಮಾತನಾಡಿ, ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳು ಪರಿಷತ್ತನ್ನು ಆರಂಭಿಸಿದರು. ಶರಣರ ವಿಚಾರಧಾರೆಯ ಪ್ರಸಾರ ಹಾಗೂ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಾಗಿದೆ. ವಚನ ಸಾಹಿತ್ಯವನ್ನು ಪದ್ಯ ಹಾಗೂ ಗದ್ಯ ಯಾವ ರೂಪದಲ್ಲಾದರೂ ಬಳಸಬಹುದು ಎಂದರು.

ಹಿರಿಯ ಜೀವಗಳು ವಚನ ವಚನ ಸಾಹಿತ್ಯ ಕೇಳಿ ಸಂತಸದಿಂದ ಇರಲಿ ಎಂಬ ಕಾರಣಕ್ಕೆ ಹೊಸ ವರ್ಷದ ದಿನ ಇಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿ, ಕಳೆದ ಮೂವತ್ತು ವರ್ಷಗಳಿಂದ ಶ್ರೀ ವಾಸವಿ ಶಾಂತಿಧಾಮವೂ ಹಿರಿಯರ ಸೇವೆಯಲ್ಲಿ ನಿರತವಾಗಿರುವುದು ಶ್ಲಾಘನೀಯ. ಇದಕ್ಕೆ ಸಮಾಜ ಹಾಗೂ ಸರ್ಕಾರ ಕೂಡ ಕೈಜೋಡಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ಧಾತ್ರಿ ಸಮಮಾರಾಧನಾ ಸಮಿತಿ ಅಧ್ಯಕ್ಷ ಎಂ.ಎಸ್‌. ನಾಗರಾಜ ಗುಪ್ತ, ಶ್ರೀ ಕನ್ಯಕಾ ಪರಮೇಶ್ವರಿ ಕೋ-ಆಪ್‌ ಬ್ಯಾಂಕಿನ ಅಧ್ಯಕ್ಷ ಎಚ್‌.ಎಂ. ಸಂದೀಪ್‌, ಶ್ರೀ ವಾಸವಿ ಶಾಂತಿಧಾಮ ಪಬ್ಲಿಕ್‌ ಚಾರಿಟಬಲ್‌ ಟ್ರಸ್ಟ್‌ ಸಂಸ್ಥಾಪಕ ಗೌರವ ಕಾರ್ಯದರ್ಶಿ ಬಿ.ವಿ. ನಾಗರಾಜ ಗುಪ್ತ, ಅಕ್ಕಮಹಾದೇವಿ ಮಾತನಾಡಿದರು. ಕಾರ್ಯಕ್ರಮ ಸಂಘಟಕ ಸಿ. ಮೋಹನ್‌ರಾಜು ನಿರೂಪಿಸಿದರು.

ವಿದುಷಿಯರಾದ ಸವಿತಾ ಹಾಗೂ ಸುಮಂಗಲಾ ಸಹೋದರಿಯರು ವಚನ ಗಾಯನ ನಡೆಸಿಕೊಟ್ಟರು. ಪಕ್ಕವಾದ್ಯದಲ್ಲಿ ಭೀಮಶಂಕರ ಬಿದನೂರು, ಷಣ್ಮುಖ ಸಜ್ಜು ಸಾಥ್‌ ನೀಡಿದರು.

ಆನಂದಮೂರ್ತಿ, ಶಿವಶಂಕರ್‌, ಮಹದೇವಸ್ವಾಮಿ, ಮುಡಿಗುಂಡ ಪುಟ್ಟಪ್ಪ, ಚಂದ್ರಶೇಖರ ಹಡಜನ, ವಸಂತಕುಮಾರ್‌, ಚಾಮರಾಜನಗರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನಾಗಮಲ್ಲಪ್ಪ, ಸ್ವಾಮಿ, ಎಂ.ಆರ್‌. ಚೌಧರಿ, ಪ್ರಸಾದ್‌, ನಾಗೇಂದ್ರ ಗುಪ್ತ, ಹೊನ್ನಮ್ಮ ಸಿದ್ದಪ್ಪ ಮೊದಲಾದವರು ಇದ್ದರು.

Follow Us:
Download App:
  • android
  • ios