ಕಾಡು ಪ್ರಾಣಿಗಳ ಹಾವಳಿಗೆ ಬ್ರೇಕ್‌ ಹಾಕಿ ಇದರಿಂದ ನಷ್ಟಕ್ಕೆ ಒಳಗಾದವರಿಗೆ ಪರಿಹಾರ ನೀಡಬೇಕು. ಕಚೇರಿಗೆ ಬರುವ ರೈತರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡಿ ಎಂದು ಅರಣ್ಯ ಇಲಾಖೆಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸೂಚನೆ ನೀಡಿದರು. 

ಗುಂಡ್ಲುಪೇಟೆ (ಜು.13): ಕಾಡು ಪ್ರಾಣಿಗಳ ಹಾವಳಿಗೆ ಬ್ರೇಕ್‌ ಹಾಕಿ ಇದರಿಂದ ನಷ್ಟಕ್ಕೆ ಒಳಗಾದವರಿಗೆ ಪರಿಹಾರ ನೀಡಬೇಕು. ಕಚೇರಿಗೆ ಬರುವ ರೈತರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡಿ ಎಂದು ಅರಣ್ಯ ಇಲಾಖೆಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸೂಚನೆ ನೀಡಿದರು. ತಾಲೂಕು ಕಚೇರಿ ಸಭಾ ಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಓಂಕಾರ ಅರಣ್ಯ ವಲಯದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದೆ. ಜನರಲ್ಲಿ ಭಯದ ವಾತಾವರಣವಿದ್ದು ಅರಣ್ಯ ಇಲಾಖೆ ಈ ಭಯವನ್ನು ಹೋಗಲಾಡಿಸಬೇಕು ಎಂದರು. ರೈತರು ತೇಗದ ಮರ ಕಟಿಂಗ್‌ಗೆ ನಿಮ್ಮ ಕಚೇರಿಗೆ ಬರುತ್ತಾರೆ. ಅವರನ್ನು ಅಲೆಸಬೇಡಿ, ಬೇಗ ಕಟಿಂಗ್‌ ಮಾಡಿ ಕೊಡಿ ವಿಳಂಬವಾದರೆ ನನಗೆ ಹೇಳುತ್ತಾರೆ. ಮುಂದೆ ಹೀಗಾಗಬಾರದು ಎಂದು ಗುಂಡ್ಲುಪೇಟೆ ಬಫರ್‌ ಜೋನ್‌ ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್‌ಗೆ ಹೇಳಿದರು.

Add Asianetnews Kannada as a Preferred SourcegooglePreferred

೮೪ ಲಕ್ಷ ಪರಿಹಾರ: ಓಂಕಾರ ವಲಯದಂಚಿನ ಗ್ರಾಮಗಳ ರೈತರ ಬೆಳೆ ಹಾನಿ, ಜಾನುವಾರು ಮೇಲೆ ಪ್ರಾಣಿಗಳ ದಾಳಿಗೆ ಅರಣ್ಯ ಇಲಾಖೆ ೮೪ ಲಕ್ಷ ಪರಿಹಾರ ನೀಡಿದೆ. ಇನ್ನೂ ೨೯ ಲಕ್ಷ ಪರಿಹಾರ ನೀಡಬೇಕಿದೆ ಎಂದು ಓಂಕಾರ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್‌ ಕುಮಾರ್‌ ಹೇಳಿದರು. ಓಂಕಾರ ವಲಯದಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರೇಲ್ವೆ ಬ್ಯಾರಿಕೇಡ್‌ ಅನುದಾನ ಕೊಡಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದಾಗ ರೇಲ್ವೆ ಬ್ಯಾರಿಕೇಡ್‌ಗೆ ಪ್ರಸ್ತಾವನೆ ಸಲ್ಲಿಸಿ, ಸಚಿವರೊಂದಿಗೆ ಮಾತನಾಡಿ ಅನುದಾನ ಕೊಡಿಸಲು ಪ್ರಯತ್ನಿಸುವೆ ಎಂದರು.

ಸಿಡಬ್ಲ್ಯೂಆರ್‌ಸಿ ತೀರ್ಪಿನ ಬಿಕ್ಕಟ್ಟು ನಿವಾರಣೆಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲಿ: ಸಚಿವ ಚಲುವರಾಯಸ್ವಾಮಿ

ದೇವಸ್ಥಾನ ಶಿಫ್ಟ್‌ಗೆ ಜಾಗ ಕೊಡಿ: ಮದ್ದೂರು ವಲಯದ ಕಸಗಲಪುರ ಮಾರಮ್ಮ ದೇವಸ್ಥಾನವನ್ನು ಅರಣ್ಯದಿಂದ ಶಿಫ್ಟ್ ಮಾಡಿಸಲು ಕಂದಾಯ ಇಲಾಖೆಯ ಜಾಗ ಕೊಡಿಸಿ ಎಂದು ಮದ್ದೂರು ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್‌ ಶಾಸಕರಲ್ಲಿ ಮನವಿ ಮಾಡಿದಾಗ ಶಾಸಕರು ಪ್ರತಿಕ್ರಿಯಿಸಿ ಜನರಲ್ಲಿ ಇನ್ನೂ ದೇವರ ಬಗ್ಗೆ ಸೆಂಟಿಮೆಂಟ್‌ ಇದೆ ಸ್ವಲ್ಪ ತಡೆಯಿರಿ ಎಂದರು. ಪಟ್ಟಣದ ಹೊರ ವಲಯದ ಕರ್ನಾಟಕ ಹೌಸಿಂಗ್‌ ಬೋರ್ಡ್‌ (ಕೆಎಚ್‌ಬಿ) ನಿವೇಶನಗಳಲ್ಲಿ ಖಾಲಿ ಬಿದ್ದಿದ್ದು ೧೯೦ ಮೂಲ ನಿವೇಶನಗಳನ್ನು ಹರಾಜು ಮಾಡಲು ಕೆಎಚ್‌ಬಿ ನಿರ್ಧರಿಸಿದೆ ಎಂದಾಗ ಕುಡಿಯುವ ನೀರು ಸಿಗದ ಕಾರಣ ನಿವೇಶನ ಕೊಂಡು ಕೊಳ್ಳಲು ಜನರು ಮುಂದೆ ಬರುತ್ತಿಲ್ಲ ಎಂದು ತಾಪಂ ಇಒ ರಾಮಲಿಂಗಯ್ಯ ಹೇಳಿದರು.

ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ಕೆಎಚ್‌ಬಿಗೆ ಕುಡಿಯುವ ನೀರಿನ ಸಂಬಂಧ ಪ್ರಸ್ತಾವನೆ ಸಲ್ಲಿಸಿದರೆ ಕುಡಿಯುವ ನೀರು ಕೊಡಿಸಲು ಪ್ರಯತ್ನಿಸಿದರೆ ನಿವೇಶನ ಖರೀದಿಯಾಗಲಿವೆ. ಬೇಗ ಪ್ರಸ್ತಾವನೆ ಸಲ್ಲಿಸಿ ಎಂದು ಅಧಿಕಾರಿಗೆ ಸೂಚಿಸಿದರು. ಕೃಷಿ, ತೋಟಗಾರಿಕೆ, ಪಶು ಪಾಲನಾ ಮತ್ತು ಪಶು ವೈದ್ಯಕೀಯ, ಶಿಕ್ಷಣ ಇಲಾಖೆ, ಅಂಬೇಡ್ಕರ್‌, ವಾಲ್ಮೀಕಿ, ವಿಶ್ವಕರ್ಮ ನಿಗಮಗಳು ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ವರದಿ ಮಂಡಿಸಿದರು. ಟಿಎಪಿಎಸಿಎಂಎಸ್‌ ಅಧ್ಯಕ್ಷ ಆಲತ್ತೂರು ಜಯರಾಂ, ತಹಸೀಲ್ದಾರ್‌ ಟಿ.ರಮೇಶಬಾಬು, ತಾಪಂ ಆಡಳಿತಾಧಿಕಾರಿ ಬಸವರಾಜು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿದ್ದರು. ಕಾಡು ಪ್ರಾಣಿಗಳ ಹಾವಳಿ ತಡೆಗೆ ಹೊಸ ಯೋಜನೆ ಇದ್ರೆ ಹೇಳಿ ಬಂಡೀಪುರದಲ್ಲಿಯೇ ಮೊದಲು ಪ್ರಯೋಗ ಮಾಡಿಸೋಣ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಆರ್‌ಎಫ್‌ಒ ಗಳಿಗೆ ಸಲಹೆ ನೀಡಿದರು.

ಇ- ಹಾಸ್ಪಿಟಲ್ ರಾಜ್ಯಕ್ಕೆ ಮೊದಲು: ಇ-ಹಾಸ್ಪಿಟಲ್‌ ತಂತ್ರಾಂಶದ ಒಪಿಡಿ ಟೋಕನ್‌ ಜನರೇಷನ್‌ನಲ್ಲಿ ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ರಾಜ್ಯಕ್ಕೆ ಮೊದಲ ಸ್ಥಾನ, ದೇಶದಲ್ಲಿ ೨೩ ನೇ ಸ್ಥಾನ ಪಡೆದಿರುವುದು ಖುಷಿ ತಂದಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು. ತಾಲೂಕು ಕಚೇರಿ ಸಭಾ ಭವನದಲ್ಲಿ ಕೆಡಿಪಿ ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಅಲಿಂ ಪಾಶ ಬಿ.ಆರ್‌ ವರದಿ ಮಂಡನೆ ಬಳಿಕ ಶಾಸಕರು ಮಾತನಾಡಿ, ತಾಲೂಕು ಮಾದಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಎಎಎಂ ಪ್ರಾಥಮಿಕ ಆರೋಗ್ಯ ಕೇಂದ್ರದ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಬಂದಿದೆ ಎಂದರು. ದಡಾರ ರುಬೆಲ್ಲ ಲಸಿಕಾ ಕರಣದಲ್ಲಿ ಕಳೆದ ಬಾರಿ ಚಾಮರಾಜನಗರ ಜಿಲ್ಲೆ ೨೮ ನೇ ಸ್ಥಾನದಲ್ಲಿತ್ತು. ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ೨ನೇ ಸ್ಥಾನಕ್ಕೆ ಬಂದಿದೆ. ಇದು ಕೂಡ ಮೆಚ್ಚುಗೆಯ ಸಂಗತಿಯಾಗಿದ್ದು, ಜಿಲ್ಲೆಯ ಆರೋಗ್ಯ ಇಲಾಖೆ ಸಾಧನೆಗೆ ಪ್ರಶಂಶಿಸಿದರು.

ಕೆಆರ್‌ಎಸ್‌ ಬಳಿ ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನೀಡದಿರಿ: ಪ್ರಮೋದಾದೇವಿ ಒಡೆಯರ್

ಡೆಂಘೀ ಮೇಲೆ ನಿಗಾ ಇಡಿ: ರಾಜ್ಯದಲ್ಲಿ ಡೆಂಘೀ ಹೆಚ್ಚಿದೆ ತಾಲೂಕಿನಲ್ಲೂ ಡೆಂಘೀ ಹರಡದಂತೆ ಎಲ್ಲಾ ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕು. ಡೆಂಘೀ ತಡೆಗೆ ಮುಂದಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಲಿಂ ಪಾಶಾ ಬಿ.ಆರ್‌ ಗೆ ಸೂಚನೆ ನೀಡಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್‌ ಸಮಸ್ಯೆ ಇದ್ದರೆ ಸರಿಪಡಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಪಿಎಚ್‌ಸಿ ಇರುವಂತೆ ಪಟ್ಟಣಕ್ಕೆ ಈಗಾಗಲೇ ಒಂದು ನಮ್ಮ ಕ್ಲಿನಿಕ್‌ ಆರಂಭವಾಗಿದೆ. ಮತ್ತೊಂದು ಮಂಜೂರಾಗಿದ್ದು, ಸದ್ಯದಲ್ಲೇ ಆರಂಭಿಸಬೇಕು ಎಂದರು.