ಪ್ರಧಾನಿ ಮೋದಿಗಾಗಿ ಎಳನೀರು, ಹೋಳಿಗೆ ಊಟದ ವ್ಯವಸ್ಥೆ
ಪ್ರಧಾನಿ ನರೇಂದ್ರ ಮೋದಿಗಾಗಿ ತುಮಕೂರು ಮಠದಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಪ್ರಧಾನಿಗಳಿಗೆ ನೀಡಲು ಎಳನೀರು, ಹೋಳಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಮಠದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಲು ಸಿದ್ದತೆ ನಡೆಸಲಾಗಿದೆ.
ತುಮಕೂರು(ಜ.02): ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರು ಮಠಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ಸ್ವಾಗತಕ್ಕೆ ಮಠ ಸಜ್ಜಾಗಿದೆ. ಮಠದಿಂದ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಲು ಸಿದ್ದತೆ ಮಾಡಿಕೊಳ್ಳಲಾಗಿದ್ದು, ಶಿವಕುಮಾರಸ್ವಾಮೀಜಿಗಳ ಬೆಳ್ಳಿಪುತ್ಥಳಿ ನೀಡಲು ತಯಾರಿ ನಡೆಸಲಾಗಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ ಹೇಳಿದ್ದಾರೆ.
ಪ್ರಧಾನಿ ಆಗಮನದ ಬಗ್ಗೆ ಮಾತನಾಡಿದ ಶ್ರೀಗಳು, ಶಾಲು, ಹಾರ ಹಾಕಿ ಪ್ರಧಾನಿಗೆ ಅಭಿನಂದನೆ ಸಲ್ಲಿಸಲು ಸಿದ್ದತೆ ಮಾಡಲಾಗಿದೆ. ಜೊತೆಗೆ ಮಠದ ಅಧಿಕಾರಿಗಳು ಮೋದಿಗೆ ಎಳನೀರು ಕೊಡಲು ರೆಡಿಯಾಗಿದ್ದಾರೆ. ಹೋಳಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದಿದ್ದಾರೆ.
ಗುರುವಾರ ರಾಜ್ಯಕ್ಕೆ ಮೋದಿ, ಬೆಂಗಳೂರಿನ ಕೆಲವು ಕಡೆ ಸಂಚಾರ ನಿಷೇಧ
ಸಿದ್ದಗಂಗಾ ಮಠದ ಕಾರ್ಯಕ್ರಮದ ವಿವರ ನೀಡಿದ ಅವರು, ಮೋದಿ ಊಟ ಮಾಡಲು ಬಯಸಿದರೆ ವ್ಯವಸ್ಥೆ ಮಾಡಲಾಗಿದೆ. ಸಿದ್ದಗಂಗಾ ಮಠಕ್ಕೆ ಮೋದಿ ಭೇಟಿ ಖಾಸಗಿ ಕಾರ್ಯಕ್ರಮ. ಮೊದಲು ಸಿದ್ದಗಂಗಾ ಮಠದ ಆವರಣದಲ್ಲಿರುವ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಭೇಟಿ ನೀಡಲಿದ್ದಾರೆ. ಮೋದಿ ಮಠಕ್ಕೆ ಬಂದ ನೆನಪಿಗಾಗಿ ಪ್ರಧಾನಿ ಗದ್ದುಗೆ ಸಮೀಪ ಬಿಲ್ವಪತ್ರೆ ಗಿಡ ನೆಡಲಿದ್ದಾರೆ.
ಪ್ರಧಾನಿ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಲಿದ್ದಾರೆ. ಡಾ.ಶಿವಕುಮಾರಸ್ವಾಮೀಜಿ ಅವರಿಗೆ ಸಂಬಂಧಿಸಿದಂತೆ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದು, ಮಠದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಮಕ್ಕಳನ್ನು ಕುರಿತು ಸುಮಾರು 30 ನಿಮಿಷ ಮೋದಿ ಮಾತನಾಡಲಿದ್ದಾರೆ.
ತುಮಕೂರು: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ 1.5 ಲಕ್ಷ ಜನರ ನಿರೀಕ್ಷೆ
ಪ್ರಧಾನಿ ಮಠದಲ್ಲಿ ಒಟ್ಟಿ 40 ನಿಮಿಷ ಕಳೆಯಲಿದ್ದು, ಸಿದ್ದಲಿಂಗಸ್ವಾಮೀಜಿ, ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಠದಲ್ಲಿ ಮೋದಿಯೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.