ಶಿಕ್ಷಕರೋರ್ವರ ಇಂತಹ ವರ್ತನೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. 

ದಾವಣಗೆರೆ (ನ.12):  ಚಪ್ಪಲಿಯಿಂದ ಸಹೋದ್ಯೋಗಿ ಶಿಕ್ಷಕನನ್ನು ಹೊಡೆಯಲು ಹೋದ, ಮುಖ್ಯ ಶಿಕ್ಷಕರನ್ನು ಪ್ಲಾಸ್ಟಿಕ್‌ ಕುರ್ಚಿಯಿಂದ ಹೊಡೆದು, ಅವಾಚ್ಯವಾಗಿ ನಿಂದಿಸಿ, ಜನ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಭೆಯಲ್ಲಿ ಅನುಚಿತವಾಗಿ ವರ್ತಿಸಿದ ನಗರದ ನಿಟುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನನ್ನು ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ, ಇಲಾಖೆಯ ಶಿಸ್ತು ಪ್ರಾಧಿಕಾರಿ ಸಿ.ಆರ್‌.ಪರಮೇಶ್ವರಪ್ಪ ಆದೇಶ ಹೊರಡಿಸಿದ್ದಾರೆ.

Add Asianetnews Kannada as a Preferred SourcegooglePreferred

ನಿಟುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಚ್‌.ತಿಪ್ಪೇಶ್‌ ಅಮಾನತುಗೊಂಡವರು. ಇವರು ಶಾಲೆಯ ಸಹ ಶಿಕ್ಷಕ ಜಗದೀಶ್‌ಗೆ ಚಪ್ಪಲಿ ಹಿಡಿದು ಹೊಡೆಯಲು ಪ್ರಯತ್ನಿಸಿದರು. ಹಾಗೂ ಮುಖ್ಯೋಪಾಧ್ಯಾಯರಿಗೆ ಪ್ಲಾಸ್ಟಿಕ್‌ ಚೇರ್‌ನಿಂದ ಹೊಡೆದು, ಅವಾಚ್ಯ ಪದಗಳಿಂದ ನಿಂದಿಸಿದ್ದು, ಸ್ಥಳದಲ್ಲಿದ್ದ ಸಹ ಶಿಕ್ಷಕ ಸ್ವಾಮಿ ಬಿಡಿಸಿಕೊಂಡಿದ್ದರು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಮ್ಮುಖದಲ್ಲಿ ಅ.3ರಂದು ಬೆಳಗ್ಗೆ 11ಕ್ಕೆ ಎಸ್‌ಡಿಎಂಸಿ, ಪಾಲಿಕೆ ಸದಸ್ಯರ ಸಭೆ ಸೇರಿ, ಸಂಧಾನ ಸಭೆ ನಡೆಸಲಾಗಿತ್ತು. ಆ ಸಭೆಯಲ್ಲೂ ಸಹ ಶಿಕ್ಷಕ ತಿಪ್ಪೇಶ್‌ ಟೇಬಲನ್ನು ಗಟ್ಟಿಯಾಗಿ ಕುಟ್ಟಿಕೂಗಾಡಿ, ನೀರಿನ ಬಾಟಲನ್ನು ಎತ್ತಿ ಬಿಸಾಕಿ, ದುರ್ನಡತೆ ತೋರಿದ್ದರು.

ಗುಡ್ ನ್ಯೂಸ್ : ಪರೀಕ್ಷೆಯಲ್ಲಿ ಕೋವಿಡ್‌ ಕೃಪಾಂಕ? ...

ಶಿಕ್ಷಕ ತಿಪ್ಪೇಶ್‌ರ 29.5.2019ರಿಂದ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಾದ ಪಾಠ ಟಿಪ್ಪಣಿ, ವಾರ್ಷಿಕ ಪಾಠ ಯೋಜನೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಯಾದಿ ಮತ್ತು ಪರಿಹಾರ ಬೋಧನೆಗೆ ಕ್ರಿಯಾ ಯೋಜನೆ ತಯಾರಿ, ಸಿಸಿಇಗೆ ಸಂಬಂಧಿಸಿದ ದಾಖಲೆ ನಿರ್ವಹಿಸಿರುವುದಿಲ್ಲ. ನಿರ್ವಹಿಸಿದ ದಾಖಲೆಗಳಿಗೆ ಮುಖ್ಯ ಶಿಕ್ಷಕರ ಸಹಿ ಪಡೆಯದಿರುವುದು ಪಾಲಿಕೆ ಸದಸ್ಯರು, ಎಸ್‌ಡಿಎಂಸಿ ಸದಸ್ಯದ ಮುಂದೆ ಪರಿಶೀಲಿಸಿದಾಗ ಕಂಡು ಬಂದಿದೆ. ತಾನೂ ಸರಿಯಾಗಿ ಕೆಲಸ ಮಾಡದೇ, ಇತರೆ ಶಿಕ್ಷಕರಿಗೂ ಯಾವುದೇ ಕೆಲಸ ಮಾಡದಂತೆ ತಾಕೀತು ಮಾಡಿ, ಶಾಲಾ ವಾತಾವರಣ ಹದಗೆಟ್ಟಿದ್ದಾಗಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಶಿಫಾರಸುನಂತೆ ಶಿಕ್ಷಕ ತಿಪ್ಪೇಶ್‌ರನ್ನು ಅಮಾನತುಗೊಳಿಸಿ, ಆದೇಶ ಹೊರಡಿಸಲಾಗಿದೆ.