*  ಕೋರ್ಟ್‌ ತಡೆಯಿಂದಾಗಿ 2 ವರ್ಷದಿಂದ ನಡೆಯದ ಚುನಾವಣೆ*  ಬೇಗ ಅರ್ಜಿ ವಿಚಾರಣೆಗೆ ಕೆಲ ಅಭ್ಯರ್ಥಿಗಳ ಕೋರಿಕೆ*  ವಾರ್ಡ್‌ ಸಂಖ್ಯೆ ಹೆಚ್ಚಳಕ್ಕೆ ಚುನಾವಣೆ ಮುಂದೂಡಿದ್ದ ರಾಜ್ಯ ಸರ್ಕಾರ 

ನವದೆಹಲಿ(ಫೆ.18): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆಗೆ ಸಂಬಂಧಿಸಿದ ಅರ್ಜಿಗಳ ತುರ್ತು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್‌(Supreme Court) ಗುರುವಾರ ತಿಳಿಸಿದೆ.

ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು ಪಾಲಿಕೆ ಚುನಾವಣೆಗೆ(Election) ಕೆಲವು ಸಂಭಾವ್ಯ ಅಭ್ಯರ್ಥಿಗಳ ಪರ ವಾದ ಮಂಡಿಸಿ, ಬಿಬಿಎಂಪಿಯ 5 ವರ್ಷದ ಅಧಿಕಾರಾಧಿಯು ಸೆ.10, 2020ಕ್ಕೆ ಮುಕ್ತಾಯಗೊಂಡಿದೆ. ಆದಾಗ್ಯೂ ಬಿಬಿಎಂಪಿ ಚುನಾವಣೆ ನಡೆಸಿಲ್ಲ. ಸುಪ್ರೀಂಕೋರ್ಟ್‌ ಆದೇಶದಿಂದಾಗಿ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂದು ಮುಖ್ಯ ನ್ಯಾ. ಎನ್‌.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ಮನವರಿಕೆ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಈ ವಿಷಯ ನಮಗೆ ಬಿಟ್ಟು ಬಿಡಿ. ನಾವು ನೋಡಿಕೊಳ್ಳುತ್ತೇವೆ’ ಎಂದು ಹೇಳಿತು ಹಾಗೂ ತುರ್ತು ವಿಚಾರಣೆಯ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿತು.

Bengaluru: ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸಿದ್ಧತೆ ಚುರುಕು

ಪ್ರಕರಣ ಏನು?:

2020ರಲ್ಲಿ ಬಿಬಿಎಂಪಿಯ ವಾರ್ಡ್‌ ಸಂಖ್ಯೆಯನ್ನು 243ಕ್ಕೆ ವಿಸ್ತರಿಸುವ ಬದಲಾಗಿ ಹಾಲಿ ಇರುವ 198 ವಾರ್ಡುಗಳ ಮೂಲಕವೇ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್‌(High Court of Karnataka) ರಾಜ್ಯ ಚುನಾವಣಾ ಆಯೋಗಕ್ಕೆ(Election Commission) ಸೂಚಿಸಿತ್ತು. ಅಲ್ಲದೆ 6 ವಾರಗಳ ಒಳಗಾಗಿ ಚುನಾವಣೆ ನಡೆಸುವಂತೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ(Government of Karnataka) ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.

2009ರಿಂದ ಈಚೆಗೆ ಬಿಬಿಎಂಪಿ ಸಾಕಷ್ಟು ಬದಲಾಗಿದೆ. ಹೆಚ್ಚಿದ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಮರುವಿಂಗಡಣೆ ತೀರಾ ಅಗತ್ಯ ಎಂದು ವಾದಿಸಿತ್ತು. ಆಗ ಅಂದಿನ ಮುಖ್ಯ ನ್ಯಾಯಾಧೀಶ ನ್ಯಾ. ಎಸ್‌.ಎ.ಬೋಬ್ಡೆ ಅವರ ಪೀಠ, ಚುನಾವಣೆಗೆ ತಡೆ ನೀಡಿತ್ತು. ಸೆಪ್ಟೆಂಬರ್‌ 2020ರಲ್ಲಿಯೇ ಹಾಲಿ ಬಿಬಿಎಂಪಿ ಕೌನ್ಸಿಲ್‌ನ ಐದು ವರ್ಷಗಳ ಅಧಿಕಾರಾವಧಿ ಮುಗಿದಿದೆ. ರಾಜ್ಯ ಸರ್ಕಾರವು ಹಿರಿಯ ಐಎಎಸ್‌ ಅಧಿಕಾರಿಯನ್ನು ಬಿಬಿಎಂಪಿಯ ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ.

ಪಾಲಿಕೆ ಚುನಾವಣೆಯಲ್ಲಿ ಜಯ ನಿಶ್ಚಿತ ಎಂದ ಸಿಎಂ

ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸುವುದು (BJP Win) ನಿಶ್ಚಿತವಾಗಿದೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟುಸತ್ಯವೋ, ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಬಾವುಟ ರಾರಾಜಿಸುವುದು ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai ) ಹೇಳಿದ್ದರು.

ಮುಖ್ಯಮಂತ್ರಿಯಾಗಿ ಆರು ತಿಂಗಳ ಪೂರ್ಣಗೊಳಿಸಿದ ಹಿನ್ನೆಲೆ ಮತ್ತು ಹುಟ್ಟುಹಬ್ಬದ ಪ್ರಯುಕ್ತ ಜ. 28 ರಂದು ಬಿಜೆಪಿ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು ಸಮಗ್ರ ಅಭಿವೃದ್ಧಿಯನ್ನು ಗಮನಿಸಿ ಬೆಂಗಳೂರಿನ ಜನರು ನಮ್ಮನ್ನು ಬೆಂಬಲಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಸರ್ಕಾರ ಮಾಡಿರುವ ಜನೋಪಯೋಗಿ ಕೆಲಸಗಳ ಬಗ್ಗೆ ಜನರಿಗೆ ತಿಳಿಹೇಳಬೇಕು. ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದ್ದು, ಆತ್ಮವಿಶ್ವಾಸದಿಂದ ಬೆಂಗಳೂರಲ್ಲಿ ಪ್ರಚಾರ ಕೈಗೊಳ್ಳಬೇಕು ಎಂದು ಕರೆ ನೀಡಿದ್ದರು.

Bengaluru: ಏಪ್ರಿಲ್‌ನಲ್ಲಿ ಬಿಬಿಎಂಪಿ ಚುನಾವಣೆಗೆ ಚಿಂತನೆ

ಅಭಿವೃದ್ಧಿ ಭದ್ರ ಬುನಾದಿ: ನಗರ-ಗ್ರಾಮೀಣ ಎಂಬ ಭೇದ ಇಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪಂದಿಸಲಾಗಿದೆ. 750 ಅಂಗನವಾಡಿಗೆ ತಲಾ ಒಂದು ಲಕ್ಷ ರು., ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸರ್ವಸ್ಪರ್ಶಿ ಸರ್ವವ್ಯಾಪಿಯಾಗಿ ಕೆಲಸ ಮಾಡಲಾಗಿದೆ. ಬೆಂಗಳೂರು ಸಮಗ್ರ ಅಭಿವೃದ್ಧಿಗೆ 7,500 ಕೋಟಿ ರು. ನೀಡಲಾಗಿದೆ. 75 ಕೆರೆ, 75 ಕೊಳಗೇರಿಗಳ ಅಭಿವೃದ್ಧಿ ನಡೆಯುತ್ತಿದೆ. ಎಂತಹ ಸವಾಲಾದರೂ ಎದುರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ. ಆರು ತಿಂಗಳ ಆಡಳಿತದಲ್ಲಿ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಲಾಗಿದೆ ಎಂದರು.

ರಾಜಕೀಯ ಪಕ್ಷಗಳು ದೇಶಕ್ಕಾಗಿ ದುಡಿಯಬೇಕು. ಅದು ಪ್ರಜಾಪ್ರಭುತ್ವವನ್ನು ಉಳಿಸಬಲ್ಲದು. ಜನಸಂಘದ ದಿನಗಳಿಂದ ರಾಜಕೀಯ ಪ್ರಜ್ಞೆ ಬೆಳೆಸಲು ಪಕ್ಷ ಶ್ರಮಿಸಿದೆ. ರಾಷ್ಟ್ರೀಯತೆ, ಪ್ರಜಾಪ್ರಭುತ್ವದ ಉಳಿವಿಗೆ ನಮ್ಮ ಪಕ್ಷ ಶ್ರಮಿಸುತ್ತ ಬಂದಿದೆ. ಸೇವಾ ಮನೋಭಾವದಿಂದ ನಮ್ಮ ಪಕ್ಷ ಕೆಲಸ ನಿರ್ವಹಿಸುತ್ತಿದೆ. ಬೇರೆ ಪಕ್ಷಗಳಲ್ಲಿ ಎಲ್ಲವೂ ವ್ಯಾವಹಾರಿಕವಾಗಿರುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಂಸದರಾದ ಡಿ.ವಿ.ಸದಾನಂದಗೌಡ, ಪಿ.ಸಿ.ಮೋಹನ್‌, ಸಚಿವರಾದ ಎಸ್‌.ಟಿ.ಸೋಮಶೇಖರ್‌, ಆನಂದ್‌ ಸಿಂಗ್‌, ಮುನಿರತ್ನ ಇತರರು ಭಾಗವಹಿಸಿದ್ದರು.