ಸುಮಲತಾ ತಾಯಿ ಇದ್ದಂತೆ, ತಪ್ಪು ಹೊಟ್ಟೆಗೆ ಹಾಕ್ಕೊಳ್ಳಲಿ : ಜೆಡಿಎಸ್ ಶಾಸಕ
- ಸಂಸದೆ ಸುಮಲತಾ ನಮಗೆ ಅತ್ತಿಗೆ ಇದ್ದಹಾಗೆ. ಅತ್ತಿಗೆ ಅಂದರೆ ತಾಯಿ ಸಮಾನ
- ನಮ್ಮ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಳ್ಳಬೇಕು
- ಸುಮಲತಾ ವಿಚಾರದಲ್ಲಿ ತಟಸ್ಥರಾದ ಶಾಸಕ ಸುರೇಶ್ ಗೌಡ
ನಾಗಮಂಗಲ(ಮಂಡ್ಯ): ಸಂಸದೆ ಸುಮಲತಾ ನಮಗೆ ಅತ್ತಿಗೆ ಇದ್ದಹಾಗೆ. ಅತ್ತಿಗೆ ಅಂದರೆ ತಾಯಿ ಸಮಾನರಾದ ದೊಡ್ಡವರು. ನಮ್ಮ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಳ್ಳಬೇಕು ಎಂದು ಶಾಸಕ ಕೆ.ಸುರೇಶ್ಗೌಡ ಹೇಳುವ ಮೂಲಕ ಸಂಸದೆ ಸುಮಲತಾ ವಿರುದ್ಧದ ವಾಕ್ಸಮರದ ವಿಚಾರದಲ್ಲಿ ತಟಸ್ಥರಾಗುವ ಮುನ್ಸೂಚನೆ ನೀಡಿದ್ದಾರೆ.
ಮದ್ದೂರು ತಾಲೂಕಿನ ಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ಭಯೋತ್ಪಾದಕರ ರೀತಿ ವರ್ತಿಸ್ತಿದ್ದಾರೆ ಎಂದು ಸಂಸದೆ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ಮಂಡ್ಯದವರು ಸ್ವಲ್ಪ ಒರಟು. ಆದರೆ, ನಮ್ಮ ಹೃದಯ ಬಹಳ ಮೃದು. ಸಂಸದರಿಗೆ ನಾವು ಮಕ್ಕಳಿದ್ದ ಹಾಗೆ. ಮಕ್ಕಳನ್ನು ಭಯೋತ್ಪಾದಕರು ಅಂದ್ರೆ ಹೇಗೆ ಎಂದು ಪ್ರಶ್ನೆ ಮಾಡಿದರು.
ಸುಮಲತಾ ಅಂಬರೀಶ್ ವಿರುದ್ಧ ನಾಲಿಗೆ ಹರಿಬಿಟ್ಟ ಮತ್ತೋರ್ವ ಜೆಡಿಎಸ್ ನಾಯಕ
ಅಂಬರೀಷ್ ಸಹ ಒರಟಾಗಿ ಮಾತನಾಡುತ್ತಿದ್ದರು. ಜನರು ಅಂಬರೀಶಣ್ಣ ಬೈಯ್ದಿಲ್ಲ ಅಂದ್ರೆ ನಮ್ಮನ್ನು ಮರೆತಿದ್ದಾರೆ ಅಂದುಕೊಳ್ಳುತ್ತಿದ್ದರು. ಅಂತಹ ಮನೆಯಲ್ಲಿರುವ ಸಂಸದರು ಸಣ್ಣ ಪುಟ್ಟಪದಗಳನ್ನು ಇಷ್ಟುದೊಡ್ಡದು ಮಾಡ್ಕೊಂಡು ಕೂತಿದ್ದಾರೆ ಎಂದು ಹೇಳಿದರು.