ಮಂಡ್ಯ ಸಂಸದೆ ಸುಮಲತಾಗೆ ಸಿಕ್ತು ಮತ್ತೊಂದು ಹಿರಿಮೆ
ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಅವರೀಗ ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ. ಅವರ ಕಾರ್ಯದಿಂದಾಗಿ ಈ ಸ್ಥಾನ ದೊರಕಿದೆ.
ಮಂಡ್ಯ (ಜ.20): ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ, ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ(ದಿಶಾ)ಯನ್ನು ನಿಯಮಬದ್ಧವಾಗಿ ನಡೆಸಿದ ರಾಜ್ಯದ ಮೊದಲ ಸಂಸದೆ ಎಂಬ ಕೀರ್ತಿಗೆ ಸುಮಲತಾ ಅಂಬರೀಶ್ ಪಾತ್ರರಾಗಿದ್ದಾರೆ.
ಪ್ರತಿ ತ್ರೈಮಾಸಿಕಕ್ಕೊಮ್ಮೆ ಎಂಬಂತೆ ವಾರ್ಷಿಕ ನಾಲ್ಕು ದಿಶಾ ಸಭೆಗಳನ್ನು ಸಂಸದರು ನಡೆಸಬೇಕು. 2020-21ನೇ ಸಾಲಿನಲ್ಲಿ ಒಂದು ತ್ರೈಮಾಸಿಕವೂ ತಪ್ಪದಂತೆ ಎಲ್ಲ ಸಭೆಗಳನ್ನು ನಡೆಸುವುದರೊಂದಿಗೆ ಪ್ರಥಮ ಸ್ಥಾನ ಅಲಂಕರಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ವೆಬ್ಸೈಟ್ನಲ್ಲಿ ದಾಖಲಾಗಿದೆ.
ಸಿನಿಮಾ ಆಗಲಿದೆಯೇ ನಟಿ ಸುಮಲತಾ ರಾಜಕೀಯ ಜೀವನ! ...
ಚಿತ್ರದುರ್ಗ, ಕೊಡಗು, ಮೈಸೂರು, ತುಮಕೂರು ಸಂಸದರು ತಲಾ ಎರಡು ಸಭೆಗಳನ್ನು ನಡೆಸಿದ್ದರೆ, ಉಳಿದ ಜಿಲ್ಲೆಗಳ ಸಂಸದರು ಕೇವಲ ಒಂದು ಸಭೆ ನಡೆಸಿರುವುದು ಕಂಡುಬಂದಿದೆ. 2019ರ ಮೇ 23ರಂದು ಲೋಕಸಭೆ ಪ್ರವೇಶಿಸಿದ ಸುಮಲತಾ ಅಂಬರೀಶ್ 2019-20ರಲ್ಲೂ ಕೊನೇ ಎರಡು ತ್ರೈಮಾಸಿಕ ಸಭೆಗಳನ್ನು ಯಶಸ್ವಿಯಾಗಿ ನಡೆಸಿದ್ದರು.
ಸಂಸದರ ಅನುದಾನ ಬಳಕೆಯಲ್ಲೂ ಸುಮಲತಾ ರಾಜ್ಯಕ್ಕೆ 2ನೇ ಸ್ಥಾನ ಅಲಂಕರಿಸಿದ್ದರು, ಮೊದಲ ಸ್ಥಾನವನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಅಲಂಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.